ಹೊಸ ಕಾನೂನಿನಲ್ಲಿ ಅನೇಕ ಬದಲಾವಣೆ, ತಿದ್ದುಪಡಿ

| Published : Nov 17 2024, 01:22 AM IST

ಸಾರಾಂಶ

ಕಾನೂನಡಿಯಲ್ಲಿ ತಿಳಿದು ಇಲ್ಲವೆ ತಿಳಿಯದೆ ತಪ್ಪು ಮಾಡಿದರೂ ಕೂಡಾ ಶಿಕ್ಷೆಯಿಂದ ಯಾರೂ ತಪ್ಪಿಸಿಕೊಳ್ಳಬಾರದು ಮತ್ತು ಕಾನೂನು ಬಿಗಿ ಹಿಡಿತ ಇರಬೇಕು

ಮುಂಡರಗಿ: ಸಂವಿಧಾನ ಒಪ್ಪಿಕೊಂಡ ಮೇಲೆ ಭಾರತೀಯರ ಕರ್ತವ್ಯಗಳೇನು ಮತ್ತು ಅದರ ಮಹತ್ವ ಅರಿಯಬೇಕು. ಕಾನೂನು ಎಲ್ಲರಿಗೂ ಒಂದೇ ಆಗಿದೆ. ಹೀಗಾಗಿ ಹೊಸ ಕಾನೂನಿನಲ್ಲಿ ಅನೇಕ ಬದಲಾವಣೆ ಮತ್ತು ತಿದ್ದುಪಡಿಗಳಾಗಿವೆ. ಇವು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಎಂದು ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.

ಅವರು ಶನಿವಾರ ಪಟ್ಟಣದ ನ್ಯಾಯಾಲಯದ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಬೆಂಗಳೂರು ಹಾಗೂ ನ್ಯಾಯವಾದಿಗಳ ಸಂಘ ಮುಂಡರಗಿ ಸಹಯೋಗದೊಂದಿಗೆ ಜರುಗಿದ ತಾಲೂಕು ಮಟ್ಟದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಈ ಕಾನೂನಡಿಯಲ್ಲಿ ತಿಳಿದು ಇಲ್ಲವೆ ತಿಳಿಯದೆ ತಪ್ಪು ಮಾಡಿದರೂ ಕೂಡಾ ಶಿಕ್ಷೆಯಿಂದ ಯಾರೂ ತಪ್ಪಿಸಿಕೊಳ್ಳಬಾರದು ಮತ್ತು ಕಾನೂನು ಬಿಗಿ ಹಿಡಿತ ಇರಬೇಕು ಎಂಬ ವಿಷಯದಲ್ಲಿ ಹೊಸ ಅಂಶಗಳ ಪ್ರಕಾರ ಕನಿಷ್ಠ ಶಿಕ್ಷೆ ಇರಬೇಕು ಎಂಬುದಿದೆ. ಇದು ಪ್ರಾಯೋಗಿಕವಾಗಿ ಹೋದಂತೆ ಈ ಕಾನುನುಗಳ ಅರಿವು ಮುಂದೆ ಆಗುತ್ತದೆ. ಆಧುನಿಕತೆ ಬದಲಾವಣೆಯಾಯಿತು ಆದರೆ, ಜನರ ಮನಸ್ಥಿತಿ ಬದಲಾಗುತ್ತಿಲ್ಲ. ಕಾನೂನುಗಳಲ್ಲಿ ಬದಲಾವಣೆ ಸಹಜ ಪ್ರಕ್ರಿಯೆಯಾಗಿದೆ. ಕಾರಣ ಬ್ರೀಟಿಷರು ಭಾರತೀಯರನ್ನು ಶಿಕ್ಷಿಸುವದಕ್ಕಾಗಿಯೇ ಇಂಡಿಯನ್ ಪಿನಲ್ ಕೋಡ್ ಇತ್ತು. ಅದೇ ಮುಂದುವರೆಯಿತು. ಬದಲಾದ ಸ್ಥಿತಿಗೆ ಕಾನೂನುಗಳು ಬದಲಾಗಬೇಕು. ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಕಾಯ್ದೆಗಳಾಗಿ ಬಹಳಷ್ಟು ಬದಲಾವಣೆ ಮತ್ತು ತಿದ್ದುಪಡಿಯಾಗಿ ಬರುತ್ತಿವೆ. ಇವು ಈಗಾಗಲೇ ಹಿಂದಿ, ಇಂಗ್ಲೀಷ ಭಾಷೆಯಲ್ಲಿ ಬಂದಿದ್ದು ಇವು ನಾಗರಿಕರ ಹಿತ ಕಾಯುವ ಮತ್ತು ಅಪರಾಧದಿಂದ ತಪ್ಪಿಸಿಕೊಳ್ಳದಂತಹ ಅನೇಕ ಅಂಶಗಳು ಒಳಗೊಂಡಿವೆ ಎಂದರು.

ಜಿಲ್ಲಾ ನ್ಯಾಯಾಧೀಶ ಬಸವರಾಜ ಮಾತನಾಡಿ, ಭಾರತೀಯ ಸಂಹಿತೆ ಹೊಸ ಕಾನೂನಿನಲ್ಲಿ ಮಹಿಳೆಯರು ಸೇರಿದಂತೆ ಮಕ್ಕಳಿಗೆ ಅನುಕೂಲವಾಗುವ ಅಂಶಗಳು ಒಳಗೊಂಡಿವೆ ಎಂದರು.

ರಾಜ್ಯ ವಕೀಲರ ಪರಿಷತ್‌ನ ಎಸ್.ಎಸ್. ಮಿಟ್ಟಲಕೋಡ ಮಾತನಾಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಯು.ಸಿ. ಹಂಪಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗದಗ ಹಿರಿಯ ದಿವಾಣಿ ನ್ಯಾಯಾಧೀಶ ಸಿ.ಎಸ್.ಶಿವನಗೌಡರ, ಲಕ್ಷ್ಮೇಶ್ವರ ಹಿರಿಯ ದಿವಾಣಿ ನ್ಯಾಯಾಧೀಶ ಭರತ ಯೋಗಿಶ್ ಕರಗುದರಿ, ಮುಂಡರಗಿ ದಿವಾಣಿ ನ್ಯಾಯಾಧೀಶ ಜ್ಯೋತಿ ಕಾಗಿನಕರ, ಜಿ.ಎಂ. ಕುಲಕರ್ಣಿ ಸೇರಿದಂತೆ ಅನೇಕ ವಕೀಲರು ಪಾಲ್ಗೊಂಡಿದ್ದರು.

ಆರ್.ವಿ. ದೊಡ್ಡಮನಿ ನ್ಯಾಯಮೂರ್ತಿಗಳ ಪರಿಚಯಿಸಿದರು. ಎಂ.ಎನ್. ಬೆಳಗಟ್ಟಿ ಸ್ವಾಗತಿಸಿದರು. ಎಂ.ವಿ. ಅರಳಿ ನಿರೂಪಿಸಿದರು. ಶಿವು ನಾಡಗೌಡ್ರ ವಂದಿಸಿದರು.