ಮಾರಮ್ಮನ ಪುನಃ ಪ್ರತಿಷ್ಠಾಪನಾ ಕಾರ್ಯ ಸಂಪನ್ನ

| Published : Apr 11 2024, 12:53 AM IST

ಸಾರಾಂಶ

ಬಾಬುದಾರ ಕುಟುಂಬಿಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಶ್ರೀದೇವಿ ದೇವಾಲಯದ ಸಿಬ್ಬಂದಿ ಸಮ್ಮುಖದಲ್ಲಿ ವಿಧಿವತ್ತಾಗಿ ಪುನಃ ಪ್ರತಿಷ್ಠಾಪನೆ ನಡೆಯಿತು.

ಶಿರಸಿ: ಇಲ್ಲಿನ ಮಾರಿಕಾಂಬಾ ದೇವಿಯು ಜಾತ್ರೆಯ ನಂತರ ಯುಗಾದಿಯಂದು ಮಂಗಳವಾರ ನಿಗದಿತ ಮುಹೂರ್ತದಲ್ಲಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾಪನೆ ನಡೆಯಿತು.

ದೇವಸ್ಥಾನದ ಆಚರಣೆಯಂತೆ ಬೆಳಗ್ಗೆ ನಿಗದಿತ ಮುಹೂರ್ತದಲ್ಲಿ ಬಾಬುದಾರ ಮನೆತನದವರು ಆಡಳಿತ ಮಂಡಳಿಯ ಉಪಸ್ಥಿತಿಯಲ್ಲಿ ಯುಗಾದಿ ಶುಭದಿನದಂದು ದೇವಸ್ಥಾನದ ಆಚರಣೆಯಂತೆ ಶ್ರೀದೇವಿಯ ಪುನಃ ಪ್ರತಿಷ್ಠೆಯ ವಿಧಿವಿಧಾನ ನೆರವೇರಿಸಿದರು.ಬಾಬುದಾರ ಕುಟುಂಬಿಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಶ್ರೀದೇವಿ ದೇವಾಲಯದ ಸಿಬ್ಬಂದಿ ಸಮ್ಮುಖದಲ್ಲಿ ವಿಧಿವತ್ತಾಗಿ ಪುನಃ ಪ್ರತಿಷ್ಠಾಪನೆ ನಡೆಯಿತು.ದೇವಸ್ಥಾನದ ಪರಂಪರಾಗತ ಆಚರಣೆಯಂತೆ ಶ್ರೀದೇವಿಯ ನಾಡಿಗ ಬಾಬುದಾರ ಮನೆತನದ ವಿಜಯ ನಾಡಿಗ ಹಾಗೂ ವಿನಿತಾ ನಾಡಿಗ ದಂಪತಿ ಹೋಮ, ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು ನಡೆಸಿ, ಶ್ರೀದೇವಿಗೆ ಗರ್ಭಗುಡಿಯಲ್ಲಿ ಪುನಃ ಪ್ರತಿಷ್ಠೆಯ ವಿಧಿವಿಧಾನ ನೆರವೇರಿಸಿದರು.

ವಿಜಯ ನಾಡಿಗ ಆರತಿ ಬೆಳಗಿದರು. ನಾಡಿಗ ಬಾಬುದಾರ ಮನೆತನದ ಮುತ್ತೈದೆ ವಿನಿತಾ ವಿಜಯ ನಾಡಿಗ ಶ್ರೀದೇವಿಗೆ ಉಡಿ ಸಾಮಗ್ರಿ ಸಹಿತ ಮಂಗಲ ದ್ರವ್ಯ ಅರ್ಪಿಸಿ, ಸಾಂಪ್ರದಾಯಿಕ ವಿಧಿ ನೆರವೇರಿಸಿದರು. ವಿಹಾನ್ ನಾಡಿಗ ಉಪಸ್ಥಿತರಿದ್ದರು.ಯುಗಾದಿ ಪ್ರತಿಷ್ಠೆ ಹಾಗೂ ಹೊಸ ವರ್ಷದ ದಿನ ಶ್ರೀದೇವಿಯ ದರ್ಶನ, ಪೂಜೆ, ಸೇವೆಗಳಿಗೆ ಪ್ರತಿವರ್ಷದಂತೆ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು. ದೇವಸ್ಥಾನದಲ್ಲಿ ಪದ್ಧತಿಯಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ನೆರವೇರಿಸಿ, ಶ್ರೀದೇವಿಯಲ್ಲಿ ಭಕ್ತರ ಹಾಗೂ ದೇಶದ ಸಮಸ್ತ ನಾಗರಿಕ ರಕ್ಷಣೆ ಕೋರಿ ಪ್ರಾರ್ಥನೆ ನಡೆಸಲಾಯಿತು.