ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸೌಹಾರ್ದತೆ, ಶಾಂತಿ, ಭಾವೈಕ್ಯತೆಯ ಸಂದೇಶ ಸಾರುವ ಉದ್ದೇಶದಿಂದ ನಗರದಲ್ಲಿ ಹಮ್ಮಿಕೊಂಡ 5ಕೆ ಮ್ಯಾರಥಾನ್‌ಗೆ ಜಿಲ್ಲಾಧಿಕಾರಿ ಸಂಗಪ್ಪ ಹಾಗೂಎಸ್ಪಿ ಸಿದ್ದಾರ್ಥ ಗೋಯಲ್ ಚಾಲನೆ ನೀಡಿದರು.

ನಗರದ ಬಸವೇಶ್ವರ ಸರ್ಕಲ್ ಹತ್ತಿರ ಬಾಗಲಕೋಟೆ ಜಿಲ್ಲಾ ಪೊಲೀಸ್ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮ್ಯಾರಥಾನ್‌ ಗಳು ಸಮಾಜದಲ್ಲಿ ಒಗ್ಗಟ್ಟಿನ ಭಾವನೆ ಬಲಪಡಿಸುತ್ತವೆ. ಆರೋಗ್ಯಕರವಾದ ಸಮಾಜ ಇದ್ದಾಗ ಮಾತ್ರ ನಾವೆಲ್ಲರೂ ಚೆನ್ನಾಗಿರಲು ಸಾಧ್ಯವಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಮಾನಸಿಕವಾಗಿ ಬಲಿಷ್ಠವಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, ಪೊಲೀಸ್ ಇಲಾಖೆ ವತಿಯಿಂದ ಬಾಗಲಕೋಟೆ ನಗರದಲ್ಲಿ ಸೌಹಾರ್ದತೆ ಮತ್ತು ಭಾವೈಕ್ಯತೆಗಾಗಿ ನಮ್ಮ ಓಟ ಎಂಬ ಧ್ಯೇವ ವ್ಯಾಕ್ಯದೊಂದಿಗೆ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಸಾಕಷ್ಟು ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿರುವುದು ಸಂತೋಷದ ವಿಷಯವಾಗಿದೆ. ಸೌಹಾರ್ದತೆ ಮತ್ತು ಭಾವೈಕ್ಯತೆಗಾಗಿ ನಮ್ಮ ಓಟ ಎಂದು ಜೋರಾಗಿ ಹೇಳಿಸಿದರು.

ಮ್ಯಾರಥಾನ್ ನಗರದ ಬಸವೇಶ್ವರ ಸರ್ಕಲ್‌ನಿಂದ ಪ್ರಾರಂಭವಾಗಿ ಪಂಕಾ ಮಸೀದಿ, ಹಳೆ ಪೋಸ್ಟ್‌ ಆಫೀಸ್, ಅಂಬೇಡ್ಕರ್‌ ಸರ್ಕಲ್, ಹಳೆ ನಿರೀಕ್ಷಣಾ ಮಂದಿರ ಕ್ರಾಸ್, ಕೆರೂಡಿ ಆಸ್ಪತ್ರೆ, ರೈಲು ನಿಲ್ದಾಣ ನಂತರ ಮರಳಿ ಬಸವೇಶ್ವರ ಸರ್ಕಲ್‌ಗೆ ಮುಕ್ತಾಯಗೊಂಡಿತು.


ಮ್ಯಾರಥಾನ್‌ದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿನಿಯರು, ಕ್ರೀಡಾಪಟುಗಳು, ಕರಾಟೆ ವಿದ್ಯಾರ್ಥಿಗಳು, ಭಾರತೀಯ ಸ್ಟೇಟ್ ಬ್ಯಾಂಕಿನ ಅಧಿಕಾರಿ ಹಾಗೂ ಸಿಬ್ಬಂದಿ, ಸಾರ್ವಜನಿಕರು ಸೇರಿ 500ಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಕರಾಟೆ ಚೀಪ್ ಕೋಚ್ ಎಸ್.ಆರ್.ರಾಠೋಡ ನೇತೃತ್ವದಲ್ಲಿ ಏರೋಬಿಕ್ಸ್ ನಡೆಯಿತು.