ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಭಾರತದಲ್ಲಿ ಅಶಾಂತಿ ಸೃಷ್ಠಿಸುವ ಜತೆಗೆ ಭಾರತೀಯರ ನೆಮ್ಮದಿಯ ಬದುಕಿಗೆ ಕೊಳ್ಳಿ ಇಡುವ ಸಲುವಾಗಿ ಭಯೋತ್ಪಾದನೆ ಬೆಂಬಲಿಸಿದ ಪಾಪಿ ಪಾಕಿಸ್ತಾನಕ್ಕೆ ನಮ್ಮ ವೀರ ಯೋಧರು "ಆಪರೇಷನ್ ಸಿಂದೂರ್ " ಮೂಲಕ ದಿಟ್ಟ ಉತ್ತರ ನೀಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಹುತಾತ್ಮರಾದ 7 ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಜತೆಗೆ ದಿಟ್ಟ ನಿರ್ಧಾರ ಕೈಗೊಂಡ ನಮ್ಮ ವೀರ ಯೋಧರಿಗೆ ಕೃತಜ್ಞತೆ ಸಲ್ಲಿಸುವ ಜತೆಗೆ ನಮಿಸುತ್ತೇವೆ ಎಂದು ನಿವೃತ್ತ ಯೋಧ ಎಚ್.ಡಿ.ವಸಂತ ಕುಮಾರ್ ತಿಳಿಸಿದರು.ಪಟ್ಟಣದ ಸುಭಾಷ್ ವೃತ್ತದಲ್ಲಿ ಮಂಗಳವಾರ ಸಂಜೆ ನಿವೃತ್ತ ಸೈನಿಕರ ಸಂಘ ಹಾಗೂ ದೇಶ ಭಕ್ತರಿಂದ ಗೌರವ ಸಮರ್ಪಣೆ ಹಾಗೂ ಸೈನಿಕರ ಹಿತ ರಕ್ಷಣೆಗೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದೆ ನಿಂತು ಹೋರಾಡುವ ಮನಸ್ಥಿತಿ ಇಲ್ಲದ ಪಾಕಿಸ್ತಾನ ಭಯೋತ್ಪಾದನೆ ಬೆಂಬಲಿಸುತ್ತಾ ಮಾಡುತ್ತಿದ್ದ ಕಪಟ ನಾಟಕಕ್ಕೆ ಪಹಲ್ಗಾಂ ಘಟನೆಯೂ ಭಾರತೀಯರನ್ನು ಕೆರಳಿಸಿದ ಪರಿಣಾಮ ಭಾರತೀಯ ಯೋಧರು ನೀಡಿದ ದಿಟ್ಟ ಉತ್ತರ ಪಾಕಿಸ್ತಾನದ ಕುತಂತ್ರಿಗಳು ಕನಸ್ಸಿನಲ್ಲಿಯೂ ಬೆಚ್ಚಿ ಬೀಳುವಂತೆ ಮಾಡಿದೆ. ಜತೆಗೆ ಅವರು ಮುಂದಿನ ದಿನಗಳಲ್ಲಿ ಉಗ್ರವಾದ ನಡೆಸಲು ಭಯ ಪಡುವಂತೆ ಮಾಡಲು ಭಾರತೀಯ ಸೇನೆಯು ತೋರಿದ ಪರಾಕ್ರಮದ ಹೋರಾಟ ಅಗತ್ಯವಾಗಿತ್ತು ಎಂದರು.
ತಾತ್ಕಾಲಿಕ ಕದನ ವಿರಾಮವಿದ್ದರೂ, ನಮ್ಮ ಜಾಗ್ರತೆಯಲ್ಲಿ ಇರುವ ಜತೆಗೆ ಜಾಗತಿಕ ಮಟ್ಟದಲ್ಲಿ ಭಾರತದ ಆಡಳಿತದ ಮೇಲಿನ ವಿಶ್ವಾಸ, ನಂಬಿಕೆ ಹಾಗೂ ಗೌರವಕ್ಕೆ ಧಕ್ಕೆಯಾಗದ ರೀತಿಯಲ್ಲಿ ಮುನ್ನಡೆಯಬೇಕಿದೆ ಎಂದರು.ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತಾಕುವ ನಿಟ್ಟಿನಲ್ಲಿ ದಿಟ್ಟ ನಿರ್ಧಾರವನ್ನು ಕೈಗೊಳ್ಳುವ ಜತೆಗೆ ನರಿ ಬುದ್ಧಿ ಮನಸ್ಥಿತಿಯ ದೇಶಗಳ ಬಗ್ಗೆಯೂ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಾಗಿದೆ. ಖಡಕ್ ನಿರ್ಧಾರವನ್ನು ಕೈಗೊಂಡ ಕೇಂದ್ರದ ಆಡಳಿತ ಮತ್ತು ಭಾರತೀಯ ಸೇನೆಯ ಕರ್ತವ್ಯ ನಿಷ್ಠೆಯನ್ನು ವರ್ಣಿಸಲು ಅಸಾಧ್ಯವಾದ ಹೋರಾಟಕ್ಕೆ ನಾವೆಲ್ಲರೂ ತಲೆಬಾಗಿ ನಮಿಸುತ್ತೇವೆ ಎಂದರು.
ನಿವೃತ್ತ ಪ್ರಾಂಶುಪಾಲ ಪ್ರಭುಶಂಕರ್, ಹಿರಿಯ ವಕೀಲ ಆರ್.ಡಿ.ರವೀಶ್ ಮಾತನಾಡಿದರು. ನಿವೃತ್ತ ಯೋಧರ ಸಂಘದ ಅಧ್ಯಕ್ಷ ಈಶ್ವರ್, ಸದಸ್ಯರಾದ ಬಸಪ್ಪ, ರಮೇಶ್, ಚನ್ನಕೇಶವ, ರವಿಕುಮಾರ್, ಎನ್.ಮಹದೇವಯ್ಯ, ರಾಜಯ್ಯ, ದೇಶಭಕ್ತರಾದ ಜೈಪ್ರಕಾಶ್, ಅಶೋಕ್, ಎಚ್.ಆರ್.ನರಸಿಂಹ, ಮುರಳೀಧರ ಗುಪ್ತ, ಖಾಲೀದ್, ಬಾಲಾಜಿ, ಸುನಿಲ್, ರೋಹಿತ್, ಎಚ್.ಆರ್.ಮೂರ್ತಿ, ಈಶ್ವರ್, ಇತರರು ಇದ್ದರು.