ರಾಮನಗರ: ಮುಸ್ಲಿಂ ಸಮುದಾಯದ ಕಡು ಬಡವರಿಗೆ ನೆರವಾಗಲು ಜಿಲ್ಲೆಯ 140 ಜೋಡಿಗಳ ಸರಳ ಸಾಮೂಹಿಕ ವಿವಾಹವನ್ನು ನಗರದ ಯಾರಬ್ ನಗರ ಬಡಾವಣೆಯಲ್ಲಿ ಫೆ.13ರಂದು ಸಂಜೆ 5 ಗಂಟೆಗೆ ಆಯೋಜನೆ ಮಾಡಲಾಗಿದೆ ಎಂದು ಶಾಸಕ ಎಚ್.ಎ.ಇಕ್ಬಾಲ್ಹುಸೇನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರಾಮನಗರ, ಕನಕಪುರ, ಹಾರೋಹಳ್ಳಿ, ಮಾಗಡಿ ಹಾಗೂ ಚನ್ನಪಟ್ಟಣ ತಾಲೂಕಿನ ಮುಸ್ಲಿಂ ಸಮುದಾಯದ ಬಡ ಕುಟುಂಬದ 120 ಜೋಡಿಗಳು ಸರಳ ವಿವಾಹಕ್ಕೆ ಈಗಾಗಲೇ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. 140ಕ್ಕೂ ಹೆಚ್ಚು ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆಗಳಿವೆ. ಮುಸ್ಲಿಂ ಸಮುದಾಯದ ವಧು ವರರ ಸರಳ ಸಾಮೂಹಿಕ ವಿವಾಹ ಕಾರ್ಯ ನೆರವೇರಿಸಬೇಕೆಂಬುದು ಬಹಳ ದಿನಗಳ ಆಲೋಚನೆಯಾಗಿತ್ತು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಇಂತಹ ಸರಳ ವಿವಾಹ ಇತರರಿಗೆ ಮಾದರಿಯಾಗುವುದಲ್ಲದೆ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಜನಜಾಗೃತಿ ಮೂಡಿಸಿದಂತಾಗುತ್ತದೆ. ಮದುವೆಯಲ್ಲಿ ಎಲ್ಲ ನವ ವಧುಗಳಿಗೆ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಸರಳ ವಿವಾಹ ಪ್ರೋತ್ಸಾಹ ಧನ 50 ಸಾವಿರ ಮಂಜೂರಾತಿ, ನಾಲ್ಕು ಜೊತೆ ಸೀರೆ, ವರರಿಗೆ ತಲಾ ಜುಬ್ಬಾ ಪೈಜಾಮ್, ಜಾಕೆಟ್, ಟೋಪಿ, ವಾಚ್, ಮನೆಗೆ ಅಲ್ಮರಾ, ಪಲ್ಲಂಗ, ಗಾದಿ ಹಾಗೂ ಹೊದಿಕೆಗಳು, ದಿನಬಳಕೆ ಪಾತ್ರೆಗಳನ್ನು ನೀಡುತ್ತಿದ್ದು, ಸುಮಾರು 20 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ರಾಮೋತ್ಸವ ಯಶಸ್ವಿಯಾಗಿ ನಡೆದು ಇತಿಹಾಸ ಪುಟ ಸೇರಿದ ಬೆನ್ನ ಹಿಂದೆಯೇ ಕ್ಷೇತ್ರದಲ್ಲಿ ಪಕ್ಷಭೇದ ಮರೆತು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಚಿವರಾದ ಜಮೀರ್ ಅಹಮ್ಮದ್ಖಾನ್, ರಹೀಂಖಾನ್, ಸಂಸದ ಡಾ.ಸಿ.ಎನ್.ಮಂಜುನಾಥ್, ಶಾಸಕರಾದ ಬಾಲಕೃಷ್ಣ, ಯೋಗೇಶ್ವರ್, ತನ್ವೀರ್ ಸೇಠ್, ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಸಲೀಂ ಅಹಮ್ಮದ್, ಎಸ್.ರವಿ, ರಾಮೋಜಿಗೌಡ, ಸುಧಾಮ್ದಾಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್ಕುಮಾರ್, ನಿರ್ದೇಶಕ ಪರ್ವಿಜ್ಪಾಷಾ, ನಗರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮುಷೀರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪೈರೋಜ್ಪಾಷ, ಸದಸ್ಯರಾದ ಆಯಿಷಾಬಾನು, ಅಜ್ಮತ್, ನಿಜಾಮುದ್ದೀನ್ ಷರೀಫ್, ಆರೀಫ್, ಅಣ್ಣು, ಸಮದ್ ಮುಖಂಡರಾದ ಶಫಿ, ಬಾಷಿದ್, ಅತಾವುಲ್ಲಾ, ಇನಾಯತ್, ಅಲೀಂ ಇತರರಿದ್ದರು.12ಕೆಆರ್ ಎಂಎನ್ 2.ಜೆಪಿಜಿ
ರಾಮನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.