- ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ: ಅಂಬಳೂರು ರಾಮಕೃಷ್ಣ ಆರೋಪ.

ಕನ್ನಡಪ್ರಭ ವಾರ್ತೆ, ಶೃಂಗೇರಿ

ಗಂಭೀರ ಸಮಸ್ಯೆಗಳಿಂದ ಮಲೆನಾಡಿನಲ್ಲಿ ರೈತರು ಕಳೆದ ಹಲವು ವರ್ಷಗಳಿಂದ ಸಂಕಷ್ಟದಲ್ಲಿದ್ದಾರೆ. ಮನವಿ, ಹೋರಾಟಗಳಿಗೆ ಸರ್ಕಾರ,ಅಧಿಕಾರಿಗಳು ಯಾವುದೇ ರೀತಿ ಸ್ಪಂದಿಸುತ್ತಿಲ್ಲ ಎಂದು ಮಲೆನಾಡಿ ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬಳೂರು ರಾಮಕೃಷ್ಣ ಆರೋಪಿಸಿದರು.

ಪಟ್ಟಣದಲ್ಲಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ರೈತರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಜೂ. 1 ರಂದು ನಡೆಸಲಿರುವ ಬೃಹತ್ ಪ್ರತಿಭಟನೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸೊಪ್ಪಿನ ಬೆಟ್ಟ ವಿಚಾರವನ್ನೇ ಮುಂದಿಟ್ಟುಕೊಂಡು ವಿವಾದ ಸೃಷ್ಠಿಸಿ ಯಾವುದೇ ಮಂಜೂರಾತಿ ಮಾಡುತ್ತಿಲ್ಲ. 94 ಸಿ, 94 ಸಿಸಿ, ಫಾರಂ 50,53,57 ಅರ್ಜಿ ಇತ್ಯರ್ಥವಾಗದೇ ಬಾಕಿ ಉಳಿದಿವೆ. ಇನ್ನು ಕೆಲವನ್ನು ಅರ್ಜಿದಾರರ ಗಮನಕ್ಕೆ ತರದೆ ವಜಾಗೊಳಿಸಿ ಅನ್ಯಾಯ ಮಾಡಲಾಗಿದೆ. ಸೊಪ್ಪಿನಬೆಟ್ಟ ಜಾಗದಲ್ಲಿ ಬ್ರಿಟೀಷರ ಕಾಲದಿಂದಲೇ ರೈತರಿಗೆ ಹಕ್ಕು ನೀಡಲಾಗಿತ್ತು. ಆದರೆ ಈಗ ಅರಣ್ಯ ಇಲಾಖೆ ಮೂಲಕ ರೈತರಿಂದ ಕಿತ್ತುಕೊಳ್ಳಲಾಗುತ್ತಿದೆ. ಸೆಕ್ಷನ್ 4(1), ಸೆಕ್ಷನ್ 17 ಮಾಡಿ ಇಡೀ ಮಲೆನಾಡನ್ನೇ ಅರಣ್ಯೀಕರಣ ಮಾಡಲಾಗುತ್ತಿದೆ. ರೈತರು,ಬಡವರನ್ನು ಬೀದಿಪಾಲು ಮಾಡುವ ಹುನ್ನಾರ ನಡೆಯುತ್ತಿ ಎಂದು ಆರೋಪಿಸಿದರು.

ಸರ್ಕಾರದ ಮಟ್ಟದಲ್ಲಿ ವಿಧಾನ ಸಭೆಯಲ್ಲಿ ಮಲೆನಾಡು ರೈತರ ಸಮಸ್ಯೆ ಬಗ್ಗೆ ಯಾರು ಮಾತನಾಡುವವರೇ ಇಲ್ಲ.ಈಗ 3 ರೀತಿ ಸರ್ವೆ ನಡೆಯುತ್ತಿದ್ದು ಎಸ್ ಐ ಟಿ ಸರ್ವೆ, 10 ಸಾವಿರ ಎಕರೆಗಿಂತ ಹೆಚ್ಚಿನ ಜಮೀನಿನ ಹಿಂಪಡೆಯುವಿಕೆ, ಅರಣ್ಯ ಇಲಾಖೆ ಸರ್ವೆ, ಸೊಪ್ಪಿನ ಬೆಟ್ಟ ಸಮಸ್ಯೆ ಬಗೆಹರಿಸಬೇಕು. ಅರಣ್ಯ ಇಲಾಖೆ ಶೋಷಣೆ ನಿಲ್ಲಬೇಕು. ಜೂ.1 ರಂದು ನಡೆಯಲಿರುವ ಪ್ರತಿಭಟನೆಗೆ ಜಿಲ್ಲಾಧಿಕಾರಿ, ಡಿಎಫ್ ಒ, ಎಫ್ ಎಸ್ ಸಿ,ಆರ್ ಎಫ್ ಒ ಸ್ಥಳಕ್ಕೆ ಬರಬೇಕು. ರೈತರ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ತಾಲೂಕು ಕಚೇರಿಗೆ ಬೀಗ ಹಾಕಲು ಹಿಂಜರಿಯಲ್ಲ ಎಂದು ಎಚ್ಚರಿಸಿದರು.


ಸಮಿತಿಯ ಆಗುಂಬೆ ಗಣೇಶ್ ಹೆಗ್ಡೆ ಮಾತನಾಡಿ ಸರ್ಕಾರದ ಅರಣ್ಯ ಕಾಯ್ದೆಗಳು ಮಲೆನಾಡಿಗರಿಗೆ ಮರಣಶಾಸನ ವಾಗಿ ಪರಿಣಮಿಸಿ ಬದುಕುವ ಹಕ್ಕನ್ನೇ ಕಸಿದಿದೆ. ಅರಣ್ಯ ಇಲಾಖೆ ಶೋಷಣೆಗಳು ಹೆಚ್ಚಿ ಹಾಗೂ ಸಂಘರ್ಷಕ್ಕೆ ಕಂದಾಯ ಇಲಾಖೆ ಕಾರಣವಾಗಿದೆ. ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುವವರೆಗೂ ಹೋರಾಟ ನಿಲ್ಲಲ್ಲ. ಜೂ.1 ರಂದು ಪಟ್ಟಣದ ತಾಲೂಕು ಕಚೇರಿ ಎದುರು ಬೆಳಿಗ್ಗೆ 10 ಗಂಟೆಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದರು.

ಸಭೆಯಲ್ಲಿ ಸಮಿತಿಯ ಅಂಗುರ್ಡಿ ದಿನೇಶ್, ವೆಂಕಟೇಶ್ ಕೋಟೆ,ನಾಗೇಶ್ ನಾಯಕ್,ವಾಮದೇವ್,ಬಿ.ಜಿ ಪ್ರಸನ್ನ,ಹೆಚ್.ಎಲ್.ತ್ಯಾಗರಾಜ್,ರಮೇಶ್,ಸತೀಶ್,ನಾಗೇಂದ್ರ ಮತ್ತಿತರರು ಇದ್ದರು.

15 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದಲ್ಲಿ ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮೀತಿ ಶೃಂಗೇರಿಯಲ್ಲಿ ಜೂನ್ 1 ರಂದು ನಡೆಸಲಿರುವ ಬೃಹತ್ ಪ್ರತಿಭಟನೆ ಕುರಿತ ಪೂರ್ವಭಾವಿ ಸಭೆಯಲ್ಲಿ ಅಂಬಳೂರು ರಾಮಕೃಷ್ಣ ಮಾತನಾಡಿದರು.