ಸಾರಾಂಶ
ಕೈವಲ್ಯಾಶ್ರಮದ ಸಿದ್ಧಲಿಂಗೇಶ್ವರ ಮಠದ ನಿಜಗುಣ ದೇವರ ಷಷ್ಠಬ್ಧಿ ಕಾರ್ಯಕ್ರಮದಲ್ಲಿ ಸಚಿವ ಎಚ್.ಕೆ.ಪಾಟೀಲ ಮಾತನಾಡಿ ಮಠಗಳು ಧಾರ್ಮಿಕ ಆಚರಣೆಗಳೊಂದಿಗೆ ನಾಡಿನ ಸಂಸ್ಕೃತಿ ಪರಂಪರೆ, ಸಂಸ್ಕಾರ, ಶಿಕ್ಷಣ ಪ್ರಸಾರ ಹಾಗೂ ಆಧ್ಯಾತ್ಮಿಕ ಚಿಂತನೆಗಳ ಮೂಲಕ ನಾಡಿಗೆ ಬಹುದೊಡ್ಡ ಕೊಡುಗೆ ನೀಡಿವೆ ಎಂದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ಸಮಾಜದ ಸ್ವಾಸ್ಥ್ಯವನ್ನು ಕಾಯುವಲ್ಲಿ ನಾಡಿನ ಮಠ-ಮಾನ್ಯಗಳ ಪಾತ್ರ ಮಹತ್ವದಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.ತಾಲೂಕಿನ ಹುಣಶ್ಯಾಳ ಪಿಜಿಯ ಕೈವಲ್ಯಾಶ್ರಮದ ಸಿದ್ಧಲಿಂಗೇಶ್ವರ ಮಠದ ನಿಜಗುಣ ದೇವರ ಷಷ್ಠಬ್ಧಿ ಕಾರ್ಯಕ್ರಮದಲ್ಲಿ ಶ್ರೀಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಠಗಳು ಧಾರ್ಮಿಕ ಆಚರಣೆಗಳೊಂದಿಗೆ ನಾಡಿನ ಸಂಸ್ಕೃತಿ ಪರಂಪರೆ, ಸಂಸ್ಕಾರ, ಶಿಕ್ಷಣ ಪ್ರಸಾರ ಹಾಗೂ ಆಧ್ಯಾತ್ಮಿಕ ಚಿಂತನೆಗಳ ಮೂಲಕ ನಾಡಿಗೆ ಬಹುದೊಡ್ಡ ಕೊಡುಗೆ ನೀಡಿವೆ ಎಂದರು.
ಪ್ರತಿ ವ್ಯಕ್ತಿಯ ಹೃದಯದಲ್ಲಿ ದೇವರಿದ್ದು, ನಾವು ಮಾಡುವ ಭಕ್ತಿಯಲ್ಲಿ ದೇವರನ್ನು ಕಾಣಲು ಸಾಧ್ಯ. ಆಧ್ಯಾತ್ಮಿಕ ಮತ್ತು ಸತ್ಸಂಗಗಳಲ್ಲಿ ಭಾಗವಹಿಸುವ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿಯನ್ನು ಪ್ರಾಪ್ತಿ ಪಡಸಿಕೊಳ್ಳುವುದು ಅವಶ್ಯವಿದೆ ಎಂದರು.ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತರನ್ನು ಕಂಡು ಪುಳಕಿತಗೊಂಡಿರುವೆನು. ಕೈವಲ್ಯಾಶ್ರಮದಲ್ಲಿ ನಿಜವಾದ ಭಕ್ತಿ ಇದೆ ಎಂದರು.
ಸಮಾರಂಭದ ವೇದಿಕೆಯಲ್ಲಿ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಬೈಲೂರದ ನಿಜಗುಣಾನಂದ ಶ್ರೀಗಳು, ವೀರಗೋಟದ ಶ್ರೀಅಡವಿಲಿಂಗ ಮಹಾರಾಜರು, ನರಸಿಪೂರದ ಶಾಂತಭೀಷ್ಮ ಚೌಡಯ್ಯ ಶ್ರೀಗಳು, ಹಂದಿಗುಂದದ ಶಿವಾನಂದ ಶ್ರೀಗಳು, ಶೇಗುಣಶೀಯ ಡಾ.ಮಹಾಂತಪ್ರಭು ಶ್ರೀಗಳು, ನಿಜಗುಣ ದೇವರು, ತೊಂಡಿಕಟ್ಟಿಯ ವೆಂಕಟೇಶ ಮಹಾರಾಜರು ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಮಹಾತೇಂಶ ಕವಟಗಿಮಠ, ಬೀಳಗಿ ಶಾಸಕ ಜಿ.ಟಿ.ಪಾಟೀಲ, ಡಾ.ಗಿರೀಶ ಸೋನವಾಲಕರ, ಶ್ಯಾಮಾನಂದ ಪೂಜೇರಿ ಮತ್ತಿತರರು ಇದ್ದರು.