ಸಾರಾಂಶ
ಪಟ್ಟಣದ ಬೇಗಂಪೂರ ಪೇಟೆಯ ಮಸೀದಿಯಲ್ಲಿ ಪ್ರತಿಷ್ಠಾಪಿಸಲಾದ ಮೌಲಾಲಿ ಆಲಂಗಳ ಸವಾರಿಯು ಶ್ರದ್ಧಾಭಕ್ತಿಯಿಂದ ಶುಕ್ರವಾರ ತಡರಾತ್ರಿ ಜರುಗಿತು.
ಕನ್ನಡಪ್ರಭ ವಾರ್ತೆ ಮುದಗಲ್
ಪಟ್ಟಣದ ಬೇಗಂಪೂರ ಪೇಟೆಯ ಮಸೀದಿಯಲ್ಲಿ ಪ್ರತಿಷ್ಠಾಪಿಸಲಾದ ಮೌಲಾಲಿ ಆಲಂಗಳ ಸವಾರಿಯು ಶ್ರದ್ಧಾಭಕ್ತಿಯಿಂದ ಶುಕ್ರವಾರ ತಡರಾತ್ರಿ ಜರುಗಿತು.ಶುಕ್ರವಾರ ತಡರಾತ್ರಿ ಮೌಲಾಲಿ ಆಲಂಗಳ ಸವಾರಿ ಆರಂಭಗೊಂಡು ಕಿಲ್ಲಾದ ನಾನಾ ದರ್ಗಾ ಮತ್ತು ಹುಸೇನಿ ಆಲಂ ದರ್ಗಾಕ್ಕೆ ಭೇಟಿ ನೀಡಲಾಯಿತು, ಸವಾರಿಯುದ್ದಕ್ಕೂ ಆಕಾಶದೆತ್ತರಕ್ಕೆ ಬಣ್ಣ ಬಣ್ಣದ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದಲ್ಲದೇ ಇಷ್ಟಾರ್ಥ ಸಿದ್ಧಿಗಾಗಿ ಮೌಲಾಲಿ ದರ್ಗಾದಲ್ಲಿ ಭಕ್ತರು ನೈವೇದ್ಯ, ಕೆಂಪು ಸಕ್ಕರೆ ಯನ್ನು ಮುಡುಪು ನೀಡುವುದು ಕಂಡು ಬಂದಿತು.
ಮೌಲಾಲಿ ದರ್ಗಾದಿಂದ ಸುಮಾರು 8 ತಾಸುಗಳ ಕಾಲ ನಡೆದ ಸವಾರಿ ಕಾರ್ಯಕ್ರಮವನ್ನು ವೀಕ್ಷಿಸಲು ಪಟ್ಟಣ ಹಾಗೂ ಗ್ರಾಮೀಣ ಭಾಗಗಳಿಂದ ಭಕ್ತರು ಆಗಮಿಸಿದ್ದರು. ನಂತರ ಅಗ್ನಿಕುಂಡ ಹಾಯವುದು ಮತ್ತು ದರ್ಗಾದ ಮುಂಭಾಗದಲ್ಲಿ ಯುವಕರು ಹೆಜ್ಜೆ ಮೇಳದಲ್ಲಿ ಭಾಗಿಯಾದರು.