ಮಹತ್ವಾಕಾಂಕ್ಷಿ ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸುತ್ತಿದ್ದು, ಇದು ಹಿಂದಿನ ಶಾಸಕ ದಿ. ಎಚ್.ವೈ.ಮೇಟಿ ಅವರ ಪ್ರಯತ್ನ ಫಲವಾಗಿದೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀಳಗಿ

ಮಹತ್ವಾಕಾಂಕ್ಷಿ ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸುತ್ತಿದ್ದು, ಇದು ಹಿಂದಿನ ಶಾಸಕ ದಿ. ಎಚ್.ವೈ.ಮೇಟಿ ಅವರ ಪ್ರಯತ್ನ ಫಲವಾಗಿದೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ತಿಳಿಸಿದ್ದಾರೆ.

ಎಚ್.ವೈ. ಮೇಟಿ ಅವರ ಒತ್ತಾಯ ಸತತ ಪ್ರಯತ್ನದಿಂದ ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿ, ಈಗ ಅಡಿಗಲ್ಲು ಸಮಾರಂಭ ನಡೆಯುತ್ತಿರುವುದು ಅತೀವ ಸಂತಸ ಉಂಟು ಮಾಡಿದೆ. ಆದರೆ, ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಅನುಮತಿ ಕೊಡಿಸಿ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯಗಳು ಆರಂಭಿಸುವಂತೆ ಕ್ರಮ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಸಂತ್ರಸ್ತ ಕುಟುಂಬಗಳ ಮುಳುಗಡೆ ಜಮೀನುಗಳಿಗೆ ಪರಿಷ್ಕೃತ ದರ ತೀರ್ಮಾನಿಸಿ ಔಪಚಾರಿಕವಾಗಿ ಕೆಲವೇ ಸಂತ್ರಸ್ತರಿಗೆ ಚೆಕ್ ವಿತರಿಸುತ್ತಿರುವುದು ಇಲ್ಲಿನ ಜನರಿಗೆ ತುಂಬಾ ಸಂತೋಷ ತಂದಿದೆ. ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಪಕ್ಷದ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಸಾಬೀತು ಮಾಡಿದೆ.

ಹಿಂದಿನ ಬಿಜೆಪಿ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಪ್ರತಿ ಎಕರೆ ನೀರಾವರಿಗೆ ₹ 24 ಹಾಗೂ ಖುಷ್ಕಿ ಜಮೀನಿಗೆ ಪ್ರತಿ ಎಕರೆಗೆ ₹20 ಲಕ್ಷ ನೀಡಿ 4 ರಿಂದ 5 ಜನ ಸಂತ್ರಸ್ತರಿಗೆ ಚೆಕ್ ವಿತರಿಸಿದಂತೆ ಮಾಡಿ ಇದರಿಂದ ಪಲಾಯನ ಮಾಡಿದ್ದು ನಮ್ಮ ಕಣ್ಣೆದುರಿಗಿನ ಸತ್ಯ. ಬಿಜೆಪಿ ಸರ್ಕಾರದಂತೆ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಹಾಗೆ ಮಾಡದೆ ಸಂತ್ರಸ್ತರಿಗೆ ಪೂರ್ತಿ ಹಣ ಬಿಡುಗಡೆ ಮಾಡುವ ವಿಶ್ವಾಸ ಮೂಡಿದೆ.ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಹಾಗೆ ವಿಜಯಪುರದ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿಗಳು ನೀರಾವರಿ ಯೋಜನೆಗೆ ಪ್ರತಿ ವರ್ಷ ₹40 ಸಾವಿರ ಕೋಟಿ ಕೊಡುವ ವಾಗ್ದಾನ ಮಾಡಿದ್ದರು. ಐದು ವರ್ಷದಲ್ಲಿ ರಾಜ್ಯದ ನೀರಾವರಿ ಯೋಜನೆಗಳಿಗೆ ₹2 ಲಕ್ಷ ಕೋಟಿ ಕೊಡುವ ಭರವಸೆ ನೀಡಿದ್ದು, ಪ್ರಸ್ತುತ ವರ್ಷ ಮಂಡಿಸಿದ ಬಜೆಟ್ ನಲ್ಲಿ ಹೆಚ್ಚು ಕಡಿಮೆ ₹20-25 ಸಾವಿರ ಕೋಟಿ ನಿಗದಿ ಮಾಡಿ ನಮ್ಮದು ಬರೀ ಭರವಸೆ ಸರ್ಕಾರವಲ್ಲ, ನುಡಿದಂತೆ ನಡೆಯುವ ಸರ್ಕಾರ ಎಂದು ಸಾಬೀತು ಮಾಡಿದ್ದಾರೆ. ಅದು ಸಾಕಾರಗೊಳ್ಳಬೇಕಾದರೆ ಮುಂದಿನ ಎರಡು ವರ್ಷದ ತಮ್ಮ ಅವಧಿಯ ಬಜೆಟ್‌ ನಲ್ಲಿ ₹2 ಲಕ್ಷ ಕೋಟಿಯನ್ನು ರಾಜ್ಯದ ನೀರಾವರಿ ಯೋಜನೆಗಳಿಗೆ ಬಿಡುಗಡೆ ಮಾಡಿದರೆ ತಾವು ವಿಜಯಪುರದಲ್ಲಿ ಮಾತನಾಡಿದ್ದನ್ನು ಈಡೇರಿಸಿದ ಕೀರ್ತಿ ತಮ್ಮದಾಗುತ್ತದೆ. ಈ ವಿಷಯದಲ್ಲಿ ನನ್ನ ಆಸೆ ಹುಸಿಗೊಳಿಸುವುದಿಲ್ಲ ಎಂದು ನಂಬಿದ್ದೇನೆ ಎಂದು ತಿಳಿಸಿದ್ದಾರೆ.ಈ ಯೋಜನೆಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರ ವ್ಯತಿರಿಕ್ತವಾಗಿ ನಡೆದುಕೊಂಡಿದ್ದರಿಂದಲೇ ಉತ್ತರ ಕರ್ಮಾಟಕದ ಸ್ವಾಭಿಮಾನಿ ವೇದಿಕೆಯಿಂದ ನಾನು ಸಂತ್ರಸ್ತರ ಹಿತಕ್ಕಾಗಿ ಚಾರಿತ್ರಿಕ ಟ್ರ್ಯಾಕ್ಟರ್ ರ್‍ಯಾಲಿ ಮಾಡಬೇಕಾಯಿತು. ಜೊತೆಗೆ ಅಂತಹ ಚಳವಳಿಗಳು ಮತ್ತೊಮ್ಮೆ ಆಗದ ಹಾಗೆ ನಮ್ಮ ಸರ್ಕಾರ ಎಚ್ಚರಿಕೆಯ ಹೆಜ್ಜೆಗಳನ್ನಿಡುವ ನಂಬಿಕೆ ನನಗಿದೆ ಎಂದು ಎಸ್.ಆರ್.ಪಾಟೀಲ ತಿಳಿಸಿದ್ದಾರೆ.