ಒತ್ತಡ ನೀಗಲು ನಿತ್ಯ ಧ್ಯಾನ ಮಾಡಿ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

| Published : Apr 24 2024, 02:17 AM IST

ಒತ್ತಡ ನೀಗಲು ನಿತ್ಯ ಧ್ಯಾನ ಮಾಡಿ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬರೂ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ದಿನಂಪ್ರತಿ ಧ್ಯಾನ ಮಾಡುವುದರ ಜತೆಗೆ ಆಧ್ಯಾತ್ಮಿಕ ಚಿಂತನೆ ಬೆಳೆಸಿಕೊಳ್ಳಬೇಕು.

ಭಟ್ಕಳ: ಜನರಲ್ಲಿ ಸಂಸ್ಕಾರದ ಕೊರತೆ ಇದ್ದು, ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಉತ್ತಮ ಮೌಲ್ಯ ಮತ್ತು ಸಂಸ್ಕಾರ ಬೆಳೆಸುವ ಕಾರ್ಯ ಆಗಬೇಕು ಎಂದು ಉಜಿರೆಯ ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಮಂಗಳವಾರ ಮಧ್ಯಾಹ್ನ ಶಿರಾಲಿ ಸಾರದಹೊಳೆಯ ಹಳೇಕೋಟೆ ಹನುಮಂತ ದೇವಸ್ಥಾನದ ದ್ವಿತೀಯ ವರ್ಷದ ವರ್ಧಂತ್ಯುತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಎಲ್ಲೆಲ್ಲೂ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಕರ್ಮಶುದ್ಧಿ ಮತ್ತು ಸಂಸ್ಕಾರ ಇದ್ದಲ್ಲಿ ಆಧ್ಯಾತ್ಮಿಕತೆ ಬೆಳೆಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ದಿನಂಪ್ರತಿ ಧ್ಯಾನ ಮಾಡುವುದರ ಜತೆಗೆ ಆಧ್ಯಾತ್ಮಿಕ ಚಿಂತನೆ ಬೆಳೆಸಿಕೊಳ್ಳಬೇಕು. ಧ್ಯಾನದಿಂದ ಮನಸ್ಸಿನಲ್ಲಿ ನೆಮ್ಮದಿ, ಲವಲವಿಕೆ ಬರಲು ಸಾಧ್ಯ. ಮಂತ್ರಜಪ ಮತ್ತು ಪ್ರಾಣಾಯಾಮಗಳು ಮನಷ್ಯನಲ್ಲಿ ನೆಮ್ಮದಿಗೆ ಕಾರಣವಾಗುತ್ತದೆ. ಯಾರು ಶುದ್ಧ ಮನಸ್ಸಿನಿಂದ ಧ್ಯಾನ ಮಾಡುತ್ತಾರೋ ಅವರಿಗೆ ಭಗವಂತನ ಕೃಪೆ ಆಗುತ್ತದೆ ಎಂದ ಶ್ರೀಗಳು, ಸಮಾಜದಲ್ಲಿ ಸಂಘಟನೆ ಮುಖ್ಯ. ಸಮಾಜ ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಮತ್ತು ಆರ್ಥಿಕವಾಗಿ ಸದೃಢ ಆಗಬೇಕು. ನಮ್ಮ ಸುತ್ತಮುತ್ತಲಿರುವ ಸಣ್ಣಸಣ್ಣ ಸಮಾಜದವರನ್ನೂ ಪ್ರೀತಿ, ವಿಶ್ವಾಸದಿಂದ ನೋಡಿಕೊಳ್ಳಬೇಕು. ಆ ಸಮಾಜವೂ ಸದೃಢವಾಗಬೇಕಿದೆ ಎಂದ ಅವರು, ಅಯೋಧ್ಯೆಯಲ್ಲಿ ಶಾಖಾ ಮಠ ತೆರೆಯಲು ಚಿಂತನೆ ನಡೆಸಿದ್ದು, ಈಗಾಗಲೇ ಜಾಗ ಗುರುತಿಸುವ ಕೆಲಸ ಆಗಿದ್ದು, ಚಾತುರ್ಮಾಸ್ಯದ ಮುಗಿದ ನಂತರ ಶಾಖಾ ಮಠಕ್ಕೆ ಶಿಲಾನ್ಯಾಸ ಮಾಡಲಾಗುವುದು ಎಂದರು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಕೆ. ನಾಯ್ಕ ಸ್ವಾಗತಿಸಿದರು. ಧರ್ಮದರ್ಶಿ ಸುಬ್ರಾಯ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಕಮಿಟಿಯ ಸದಸ್ಯರಿದ್ದರು. ಶಿಕ್ಷಕರಾದ ನಾರಾಯಣ ನಾಯ್ಕ, ಪರಮೇಶ್ವರ ನಾಯ್ಕ ಸ್ವಾಗತಿಸಿದರು. ದೇವಸ್ಥಾನದಲ್ಲಿ ಬೆಳಗ್ಗೆ 9 ಗಂಟೆಯಿಂದ ೧೧ ಗಂಟೆಯವರೆಗೆ 108 ಕಳಶಾಭಿಷೇಕ, ಗುರುಪೂಜೆ, ಮಧ್ಯಾಹ್ನ ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದರೆ, ಸಂಜೆ ಶ್ರೀದೇವರ ಪಲ್ಲಕ್ಕಿ ಉತ್ಸವ ಜರುಗಿತು.