ಇಲ್ಲಿನ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ 26-27ನೇ ಸಾಲಿನ ರಕ್ಷಕ-ಶಿಕ್ಷಕರ ಸಂಘದ ವಾರ್ಷಿಕ ಮಹಾಸಭೆ ಕಾಲೇಜಿನ ಭವ್ಯ ಸಭಾಂಗಣದಲ್ಲಿ ನಡೆಯಿತು.

ಕಲ್ಯಾಣಪುರ: ಇಲ್ಲಿನ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ 26-27ನೇ ಸಾಲಿನ ರಕ್ಷಕ-ಶಿಕ್ಷಕರ ಸಂಘದ ವಾರ್ಷಿಕ ಮಹಾಸಭೆ ಕಾಲೇಜಿನ ಭವ್ಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ನಿವೃತ್ತ ಪ್ರಾಧ್ಯಾಪಕಿ ಹಿಲ್ಡಾ ರೊಡ್ರಿಗಸ್‌ ಮಾತನಾಡಿ, ಶಿಕ್ಷಣ ಕೇವಲ ಸಾಕ್ಷರತೆಗೆ ಸೀಮಿತವಾಗದೆ ವಿದ್ಯಾರ್ಥಿಗಳನ್ನು ಜ್ಞಾನವಂತರು, ಜವಾಬ್ದಾರಿಯುತ ಹಾಗೂ ಮೌಲ್ಯಧಾರಿತ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದರು. ಮಿಲಾಗ್ರಿಸ್‌ ಸಂಸ್ಥೆಗಳ ಸಂಚಾಲಕ ವಂ. ಫ್ರಾನ್ಸಿಸ್‌ ಲೂವಿಸ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪೋಷಕ ತ್ಯಾಗಗಳನ್ನು ಅರಿತುಕೊಂಡು ಅವರಿಗೆ ಕೃತಜ್ಞತೆ ಸಲ್ಲಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಮೆಲ್ವಿನ್‌ ಮೆಂಡೋನ್ಸಾ ಎಸ್‌.ಜೆ. ಮಾತನಾಡಿ, ಮಕ್ಕಳ ಜೀವನದಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ಅವರ ಮಾತುಗಳನ್ನು ತಾಳ್ಮೆಯಿಂದ ಆಲಿಸಬೇಕು ಎಂದರು. ವೇದಿಕೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ವಿನ್ಸೆಂಟ್‌ ಡಿಸೋಜ, ಕಾರ್ಯದರ್ಶಿ ಸತೀಶ್‌ ನಾಯ್ಕ್‌ ಉಪಸ್ಥಿತರಿದ್ದರು. ಉಪನ್ಯಾಸಕಿ ಪ್ರೀತಿಕಾ ಸ್ವಾಗತಿಸಿ, ಉಪನ್ಯಾಸಕಿ ಲೊಯ್ಲೀಸ್‌ ಡಿಸೋಜ ನಿರೂಪಿಸಿ, ಉಪನ್ಯಾಸಕಿ ಸ್ವಾತಿ ಮೂಲ್ಯ ವಂದಿಸಿದರು.