ಮೈಸೂರು ಜಿಲ್ಲೆಯಲ್ಲಿ ಇಂದು ಹಾಲಿನ ಉತ್ಪಾದನೆ ಸುಮಾರು ಒಂದು ಲಕ್ಷ ಲೀಟರ್ ನಷ್ಟು ಹೆಚ್ಚಿದೆ: ಡಾ.ನಾಗರಾಜು

| Published : Jun 23 2024, 02:05 AM IST

ಮೈಸೂರು ಜಿಲ್ಲೆಯಲ್ಲಿ ಇಂದು ಹಾಲಿನ ಉತ್ಪಾದನೆ ಸುಮಾರು ಒಂದು ಲಕ್ಷ ಲೀಟರ್ ನಷ್ಟು ಹೆಚ್ಚಿದೆ: ಡಾ.ನಾಗರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಬರಗಾಲದ ಮುನ್ನೆಚ್ಚರಿಕೆಯ ಕ್ರಮವಾಗಿ ಗುಣಮಟ್ಟದ ಮೇವಿನ ಬೀಜಗಳನ್ನು ಸಕಾಲದಲ್ಲಿ ಇಲಾಖೆಯು ಹಂಚಿದ್ದರ ಪರಿಣಾಮ ಜಿಲ್ಲೆಯಲ್ಲಿ ಉತ್ತಮ ಮೇವು ಬೆಳದಿದೆ. ಇದರಿಂದಾಗಿ ಜಾನುವಾರುಗಳಿಗೆ ಪೌಷ್ಟಿಕ ಮೇವು ದೊರೆತಿದೆ ಮತ್ತು ಹಾಲಿನ ಉತ್ಪಾದನೆಯು ಹೆಚ್ಚಾಗಿದೆ. ಮೇವಿನ ಬೀಜಗಳ ವಿತರಣೆ ಮತ್ತು ಲಸಿಕೆ ಕಾರ್ಯಕ್ರಮದಲ್ಲಿ ಪಶುಸಖಿಯರು ಸಕ್ರಿಯವಾಗಿ ಪಾಲ್ಗೊಂಡಿದ್ದರಿಂದ ಹೆಚ್ಚಿನ ಹಾಲಿನ ಉತ್ಪಾದನೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಜಿಲ್ಲೆಯಲ್ಲಿ ಇಂದು ಹಾಲಿನ ಉತ್ಪಾದನೆ ಸುಮಾರು ಒಂದು ಲಕ್ಷ ಲೀಟರ್ ನಷ್ಟು ಹೆಚ್ಚಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ನಾಗರಾಜು ಹೇಳಿದರು.

ತಾಲೂಕಿನ ಸುತ್ತೂರು ಗ್ರಾಮದ ಐಸಿಎಆರ್, ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಮೈಸೂರು ಹಾಗೂ ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್ ಸಂಯುಕ್ತಾಶ್ರಯದಲ್ಲಿ ಪಶುಸಖಿಯರಿಗೆ, ಸಮಗ್ರ ಜಾನುವಾರು ನಿರ್ವಹಣೆ ಕುರಿತು ಆರು ದಿನಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬರಗಾಲದ ಮುನ್ನೆಚ್ಚರಿಕೆಯ ಕ್ರಮವಾಗಿ ಗುಣಮಟ್ಟದ ಮೇವಿನ ಬೀಜಗಳನ್ನು ಸಕಾಲದಲ್ಲಿ ಇಲಾಖೆಯು ಹಂಚಿದ್ದರ ಪರಿಣಾಮ ಜಿಲ್ಲೆಯಲ್ಲಿ ಉತ್ತಮ ಮೇವು ಬೆಳದಿದೆ. ಇದರಿಂದಾಗಿ ಜಾನುವಾರುಗಳಿಗೆ ಪೌಷ್ಟಿಕ ಮೇವು ದೊರೆತಿದೆ ಮತ್ತು ಹಾಲಿನ ಉತ್ಪಾದನೆಯು ಹೆಚ್ಚಾಗಿದೆ. ಮೇವಿನ ಬೀಜಗಳ ವಿತರಣೆ ಮತ್ತು ಲಸಿಕೆ ಕಾರ್ಯಕ್ರಮದಲ್ಲಿ ಪಶುಸಖಿಯರು ಸಕ್ರಿಯವಾಗಿ ಪಾಲ್ಗೊಂಡಿದ್ದರಿಂದ ಹೆಚ್ಚಿನ ಹಾಲಿನ ಉತ್ಪಾದನೆಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೆಎಸ್ಎಸ್ ಕೆವಿಕೆಯಲ್ಲಿ ಪಶುಸಖಿಯರಿಗೆ ಉತ್ತಮ ತರಬೇತಿ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಪ್ರತಿ ರೈತರಿಗೂ ಇಲಾಖೆಯ ಯೋಜನಗಳ ಬಗ್ಗೆ ಮಾಹಿತಿ ನೀಡಬೇಕೆಂದರು.

ಜೆಎಸ್ಎಸ್ಕೆವಿಕೆಯ ಹಿರಿಯ ವಿಜ್ಞಾನಿ ಡಾ.ಬಿ.ಎನ್. ಜ್ಞಾನೇಶ್ ಮಾತನಾಡಿ, ಪಶುಸಖಿಯಂತಹ ಯೋಜನೆಗಳಿಂದ ಮಹಿಳೆಯರ ಸಬಲೀಕರಣವಾಗುತ್ತದೆ. ಗುಣಮಟ್ಟದ ಹಾಲು ಉತ್ಪಾದನೆ ಮಾಡಲು ರೈತರಿಗೆ ಮಾಹಿತಿಯ ಅವಶ್ಯಕತೆಯಿದೆ. ಅಂತಹ ಮಾಹಿತಿಯನ್ನು ಪಶುಸಖಿಯರು ರೈತರಿಗೆ ನೀಡಬಹುದು. ಉತ್ತಮ ಕೆಲಸಗಳಿಂದ ಪಶುಸಖಿಯರು ಜಿಲ್ಲೆಯಾದ್ಯಂತ ಕೀರ್ತಿಗಳಿಸಬಹದು ಮತ್ತು ರೈತರಿಗೆ ಸಹಕಾರಿಯಾಗಬಹುದೆಂದು ಪ್ರೇರೇಪಿಸಿದರು.

ವಿಷಯ ತಜ್ಞೆ ಡಾ.ಎಚ್.ವಿ. ದಿವ್ಯಾ ಮಾತನಾಡಿ, ಪಶುಸಖಿ ಕಾರ್ಯಕ್ರಮದಿಂದ ಮಹಿಳೆಯರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬೆಳವಣಿಗೆ ಹೊಂದುತ್ತಾರೆ. ಮುಂದಿನ ದಿನಗಳಲ್ಲಿ ಇಲಾಖೆಯ ಜೊತೆ ಸಕ್ರಿಯವಾಗಿ ಕೆಲಸ ನಿರ್ವಹಿಸಿ ರೈತರಿಗೆ ನೆರವಾಗಲು ಸೂಚಿಸಿದರು.

ಡಾ. ಮಲ್ಲಿಕಾರ್ಜುನಸ್ವಾಮಿ, ತರಬೇತಿಯ ಸಂಯೋಜಕರಾದ ಡಾ. ಶರಣಬಸವ, ಡಾ. ರಕ್ಷಿತ್ ರಾಜ್, ಕೆವಿಕೆಯ ವಿಷಯ ತಜ್ಞರು ಮತ್ತು 60ಕ್ಕೂ ಹೆಚ್ಚು ಪಶುಸಖಿಯರು ಭಾಗವಹಿಸಿದ್ದರು.