ಸಾರಾಂಶ
ಕಾಂಗ್ರೆಸ್ ಸರ್ಕಾರದ ಧೋರಣೆಯಿಂದಾಗಿ ಜನಗಳು ಮಾತ್ರವಲ್ಲ, ಜಾನುವಾರುಗಳೂ ಈ ಸರ್ಕಾರಕ್ಕೆ ಶಾಪ ಹಾಕುತ್ತಿವೆ ಎಂದು ಪ್ರತಿಭಟನಾಕರರು ಆರೋಪಿಸಿದರು.
ಹರಪನಹಳ್ಳಿ: ಹಿಂದಿನ ಬಿಜೆಪಿ ಸರ್ಕಾರದ ಯೋಜನೆಯಾದ ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು ತಡೆಹಿಡಿದಿರುವುದನ್ನು ವಿರೋಧಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದಿಂದ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮೋರ್ಚಾ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ಬಾಗಳಿ ಕೊಟ್ರೇಶಪ್ಪ ಅವರು, ಕಾಂಗ್ರೆಸ್ ಸರ್ಕಾರದ ಧೋರಣೆಯಿಂದಾಗಿ ಜನಗಳು ಮಾತ್ರವಲ್ಲ, ಜಾನುವಾರುಗಳೂ ಈ ಸರ್ಕಾರಕ್ಕೆ ಶಾಪ ಹಾಕುತ್ತಿವೆ ಎಂದು ಆರೋಪಿಸಿದರು.ಕರ್ನಾಟಕದಲ್ಲಿ ನಿತ್ಯ 10 ಲಕ್ಷ ಲೀಟರ್ನಷ್ಟು ಹಾಲಿನ ಉತ್ಪಾದನೆಯ ಪ್ರಮಾಣ ಕುಸಿದಿದೆ. ಸರ್ಕಾರಕ್ಕೆ ಮಾನ, ಮರ್ಯಾದೆ ಇದ್ದರೆ ರೈತರಿಗೆ ನೀಡಬೇಕಾದ ಬಾಕಿ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಜಾನುವಾರುಗಳನ್ನು ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದರು. ಬಿಜೆಪಿ ಮುಖಂಡರಾದ ಆರುಂಡಿ ನಾಗರಾಜ, ಪುರಸಭಾ ಸದಸ್ಯರಾದ ಕಿರಣ್ ಶಾನ್ಬಾಗ್, ವಿನಾಯಕ ಗೌಳಿ, ಮಾಜಿ ಸದಸ್ಯ ಎಂ. ಶಂಕರ, ಮುಖಂಡರಾದ ಗೌಳಿ ಯಲ್ಲಪ್ಪ, ಹೂವಿನಹಡಗಲಿ ಮಂಡಲ ರೈತ ಮೋರ್ಚಾ ಅಧ್ಯಕ್ಷ ಶಿವನಗೌಡ, ಪ್ರಧಾನ ಕಾರ್ಯದರ್ಶಿ ನಂದಿಹಳ್ಳಿ ಬಸವರಾಜ, ತರಕಾರಿ ಹನುಮಂಚಪ್ಪ, ಬಾಗಳಿ ಜಗದೀಶ, ನಿರಂಜನ, ಹಲುವಾಗಲು ವೀರಭದ್ರಪ್ಪ, ಆಲೂರು ಶ್ರೀನಿವಾಸ, ಜಟ್ಟೆಪ್ಪ, ಹನುಮಂತಪ್ಪ, ಎರಡೆತ್ತಿನಹಳ್ಳಿ ಮಂಜುನಾಥ, ವಾಗೀಶ, ಮಹೇಶ ಪೂಜಾರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.