ಕನ್ನಡಪ್ರಭ ವಾರ್ತೆ ಸರಗೂರು
ಪಟ್ಟಣದ ಸಂತೆ ಸರಗೂರು ಕೃಷಿ ಮಾರುಕಟ್ಟೆ ಉಪ ಸಮಿತಿ ಆವರಣದಲ್ಲಿ ನಡೆದ 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿ ಪ್ರಕ್ರಿಯೆಗೆ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಬಿ.ಎಸ್. ಕಿರಣ್ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಸರಗೂರು-ಕೋಟೆ ತಾಲೂಕಿನಿಂದ 1,808 ರೈತರು ರಾಗಿ ಮಾರಾಟ ಮಾಡಲು ನೋಂದಣಿ ಮಾಡಿಸಿದ್ದು, 52,622 ಕ್ವಿಂಟಾಲ್ ರಾಗಿ ಖರೀದಿಸಲು ಮುಂದಾಗಿದ್ದೇವೆ. ಒಬ್ಬ ರೈತರಿಂದ 10 ರಿಂದ 50 ಕ್ವಿಂಟಾಲ್ ವರೆಗೂ ರಾಗಿ ಮಾರಾಟಕ್ಕೆ ಅವಕಾಶ ಮಾಡಲಾಗಿದ್ದು, ರೈತರು ನಿರ್ಭಯದಿಂದ ಮಾರುಕಟ್ಟೆಯಲ್ಲಿ ರಾಗಿ ಮಾರಾಟ ಮಾಡಬಹುದು. ರಾಗಿ ಖರೀದಿ ಮಾಡುವಾಗ ಅಧಿಕಾರಿಗಳು ರೈತರ ಪರ ಕೆಲಸ ಮಾಡಬೇಕು ಎಂದು ತಿಳಿಸಿದರು.
ಖರೀದಿ ಕೇಂದ್ರದಲ್ಲಿ ಮಾ. 31ರವರೆಗೂ ರಾಗಿ ಖರೀದಿ ಮಾಡಲಾಗುವುದು. ಬೇಡಿಕೆ ಹೆಚ್ಚಾದರೆ ದಿನ ಮುಂದೂಡಲಾಗುವುದು. ಬೆಳಗ್ಗೆ 8 ರಿಂದ ಸಂಜೆ 6 ರವರೆಗೂ ಖರೀದಿ ಮಾಡಲಾಗುವುದು. ಖರೀದಿ ವೇಳೆ ಯಾವುದೇ ಸಮಸ್ಯೆಗಳು ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಸರ್ಕಾರದಿಂದ ಬೆಂಬಲ ಬೆಲೆಗೆ ಖರೀದಿ ಮಾಡಲಾಗುತ್ತಿದ್ದು, ಕಳೆದ ಸಾಲಿಗಿಂತ ದುಪ್ಪಟ್ಟು ರೈತರು ರಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.ತಾಲೂಕು ರೈತ ಸಂಘದ ಯುವ ಘಟಕದ ಅಧ್ಯಕ್ಷ ಮಂಜು ಕಿರಣ್ ಮಾತನಾಡಿ, ಗುಣಮಟ್ಟದ ರಾಗಿ ಮಾರಾಟಕ್ಕೆ ರೈತರು ಮುಂದಾಗಬೇಕು. ಖರೀದಿ ವೇಳೆ ಅಧಿಕಾರಿಗಳು ಯಾರ ಆಮಿಷಕ್ಕೂ ಒಳಗಾಗದೇ ರಾಗಿ ಖರೀದಿ ಮಾಡಬೇಕು. ದಲ್ಲಾಳಿ ಹಾವಳಿ ತಡೆಗೆ ಕ್ರಮವಹಿಸಬೇಕು. ಕಾರ್ಯಕ್ರಮಕ್ಕೆ ಅಧಿಕಾರಿಗಳು, ರೈತರು ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತ ಸಂಘದ ಚೆನ್ನನಾಯಕ, ರಾಗಿ ಖರೀದಿ ಕೇಂದ್ರದ ಅಧಿಕಾರಿ ಸುನೀತಾ, ಎಪಿಎಂಸಿ ಕಾರ್ಯದರ್ಶಿ ಕೃಷ್ಣಕುಮಾರ್, ಆಹಾರ ಶಿರಸ್ತೆದಾರರಾದ ಪೂರ್ಣೀಮ, ದೇವಣ್ಣ, ಪ್ರದೀಪ್, ಕರಿಯಪ್ಪ, ರೈತರು ಇದ್ದರು.