ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಜಿಲ್ಲೆಯ ನಾನ್ ಸಿಆರ್ಝಡ್ ಪ್ರದೇಶದ ನದಿ ಪಾತ್ರಗಳಲ್ಲಿ 25 ಮರಳು ಗಣಿ ಗುತ್ತಿಗೆಗಳನ್ನು ಮಂಜೂರು ಮಾಡಲಾಗಿದ್ದು, ಆ ಪೈಕಿ 24 ಮರಳು ಗಣಿ ಗುತ್ತಿಗೆಗಳು ಚಾಲ್ತಿಯಲ್ಲಿವೆ. ಜಿಲ್ಲೆಯಲ್ಲಿ ಸಾಕಷ್ಟು ಮರಳು ಲಭ್ಯವಿದ್ದು, ಮರಳು ಅಭಾವ ಇಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸ್ಪಷ್ಟಪಡಿಸಿದೆ.ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ಹೊರಡಿಸಿದ್ದು, ಅದರಲ್ಲಿ ಮುಂಗಾರಿನ ಕಾರಣಕ್ಕೆ ಪರಿಸರ ವಿಮೋಚನಾ ಪತ್ರದಲ್ಲಿ ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ಜೂನ್ನಿಂದ ಅಕ್ಟೋಬರ್ 15ರ ವರೆಗೆ ಮರಳು ತೆಗೆಯಲು ನಿರ್ಬಂಧವಿರುತ್ತದೆ. ಆದರೆ ಮಾನ್ಸೂನ್ ಅವಧಿಯಲ್ಲಿ ಈ ಮರಳು ಬ್ಲಾಕ್ ಗುತ್ತಿಗೆ ಪ್ರದೇಶಗಳ ಸ್ಟಾಕ್ ಯಾರ್ಡ್ಗಳಲ್ಲಿ ಸುಮಾರು 1,02,467 ಮೆಟ್ರಿಕ್ ಟನ್ ಮರಳು ದಾಸ್ತಾನು ಲಭ್ಯವಿದೆ. ಇಲ್ಲಿಯವರೆಗೆ 27,023 ಮೆ.ಟನ್ ಪ್ರಮಾಣದ ಮರಳು ಜಿಲ್ಲೆಯಲ್ಲಿನ ಕಾಮಗಾರಿಗಳಿಗೆ ಪೂರೈಕೆಯಾಗಿದ್ದು, ಇನ್ನೂ 75,444 ಮೆ.ಟನ್ ಪ್ರಮಾಣದ ಮರಳು ಸ್ಟಾಕ್ ಯಾರ್ಡ್ಗಳಲ್ಲಿ ಲಭ್ಯವಿದೆ.
ಜಿಲ್ಲೆಯಲ್ಲಿ ನೆಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಮರಳು ಪೂರೈಕೆಯಾಗದೆ ಅಡಚಣೆ ಉಂಟಾಗಬಾರದು ಎಂಬ ಉದ್ದೇಶದಲ್ಲಿ ಮರಳು ಗುತ್ತಿಗೆದಾರರುಗಳಿಗೆ ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳಂತೆ 30 ದಿನಗಳ ಕಾಲಾವಕಾಶ ನೀಡಲಾಗಿದೆ.ಜಿಲ್ಲೆಯಲ್ಲಿ 16 ಎಂ-ಸ್ಯಾಂಡ್ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಘಟಕಗಳಿಂದ ವಾರ್ಷಿಕವಾಗಿ 3,36,400 ಮೆ.ಟನ್ ಪ್ರಮಾಣದಷ್ಟು ಎಂ-ಸ್ಯಾಂಡ್ ಉತ್ಪಾದಿಸಬಹುದಾಗಿದೆ. 2023ರ ಏಪ್ರಿಲ್ನಿಂದ ಅಕ್ಟೋಬರ್ ವರೆಗೆ ಒಟ್ಟು 72,183 ಮೆ.ಟನ್ ಪ್ರಮಾಣದ ಎಂ-ಸ್ಯಾಂಡ್ ಜಿಲ್ಲೆಯಲ್ಲಿನ ಕಾಮಗಾರಿಗಳಿಗೆ ಪೂರೈಸಲಾಗಿದೆ.
ಕರಾವಳಿ ನಿಯಂತ್ರಣ ವಲಯದಲ್ಲಿ ಮರಳು ತೆಗೆಯುವ ಸಂಬಂಧ 2011 ರ ಮಾರ್ಗಸೂಚಿಗಳನ್ನು ಪಾಲನೆ ಮಾಡದೆ ಮರಳು ತೆಗೆಯುವ ನೆಪದಲ್ಲಿ ವಾಣಿಜ್ಯ ಮರಳುಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ರಾಷ್ಟ್ರೀಯ ಹಸಿರು ಪೀಠದಲ್ಲಿ (ಎನ್ಜಿಟಿ) ಮಂಗಳೂರು ಸುಲ್ತಾನ್ ಬತ್ತೇರಿ ನಿವಾಸಿ ಕಿರಣ್ ಕುಮಾರ್ ಹಾಗೂ ದ.ಕ. ನದಿ ಮೀನುಗಾರರ ಸಂಘದ ಪದಾಧಿಕಾರಿಗಳು ಮೀನುಗಾರರ ಸಮುದಾಯದ ಪರವಾಗಿ ಅರ್ಜಿ ಸಲ್ಲಿಸಿರುತ್ತಾರೆ.(ಮೂಲ ಅರ್ಜಿ ಸಂಖ್ಯೆ.219/2022). ಇದು ವಿಚಾರಣಾ ಹಂತದಲ್ಲಿದೆ.ರಾಷ್ಟ್ರೀಯ ಹಸಿರು ಪೀಠ, ದಕ್ಷಿಣ ವಲಯ, ಚೆನ್ನೈ ಯಲ್ಲಿ ದಾಖಲಾಗಿರುವ ಮೂಲ ಅರ್ಜಿ ಸಂಖ್ಯೆ 252/2017 (ಎಸ್ಝಡ್)ರಲ್ಲಿ ಮಾಡಿರುವ ದಿನಾಂಕ 18-05-2022 ರ ಆದೇಶದಲ್ಲಿ ‘ಮರಳು ದಿಬ್ಬಗಳಲ್ಲಿ ತೆಗೆದ ಮರಳನ್ನು ನಿಯಮದಂತೆ ನದಿ ಪಾತ್ರದ ತಗ್ಗು ಪ್ರದೇಶಗಳಿಗೆ ಹಾಕಿ ಸಮತಟ್ಟು ಮಾಡುವಂತೆ ಮತ್ತು ಕಡಲತೀರ ಆರೈಕೆ ಹಾಗೂ ನದಿ ತೀರದ ಬಲರ್ವಧನೆಗೆ ಬಳಸುವಂತೆ’ ನಿರ್ದೇಶನ ನೀಡಿದೆ.
ಸಿಆರ್ಝಡ್ನಲ್ಲಿ 9 ದಿಬ್ಬ ಗುರುತು:ಕರಾವಳಿ ನಿಯಂತ್ರಣ ವಲಯದಲ್ಲಿ ವಾಡಿಕೆಯಂತೆ ಮೇ ತಿಂಗಳಲ್ಲಿ ಮರಳು ದಿಬ್ಬಗಳನ್ನು ಗುರುತಿಸುವ ಕಾರ್ಯ ಕೈಗೊಳ್ಳಲಾಗಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಧಿಸೂಚನೆ ದಿನಾಂಕ 8-11-2011 ರಂತೆ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ ಹರಿಯುವ ನೇತ್ರಾವತಿ ಮತ್ತು ಫಲ್ಗುಣಿ ನದಿಗಳಲ್ಲಿ ಕ್ರಮವಾಗಿ 4 ಮತ್ತು 5 ಮರಳು ದಿಬ್ಬಗಳನ್ನು ಗುರುತಿಸಿದೆ. ಈ 9 ಮರಳು ದಿಬ್ಬಗಳಲ್ಲಿ 3,00,965 ಮೆ.ಟನ್ ಮರಳನ್ನು ತೆರವುಗೊಳಿಸುವ ಸಂಬಂಧ ಜಿಲ್ಲಾ ಕರಾವಳಿ ವಲಯ ನಿಯಂತ್ರಣ ಸಮಿತಿಯು ಕರಾವಳಿ ನಿಯಂತ್ರಣ ವಲಯ ನಿರಾಕ್ಷೇಪಣಾ ಪತ್ರ ಪಡೆಯಲು ಕರ್ನಾಟಕ ರಾಜ್ಯ ಕರಾವಳಿ ನಿಯಂತ್ರಣ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಅನುಮೋದನೆಗೆ ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಲಾಗಿದೆ.