ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಕೇರಳ ಮೂಲದ ಕಾಲೇಜು ವಿದ್ಯಾರ್ಥಿಗಳಿರುವ ಮಿನಿ ಬಸ್ಸೊಂದು ಪಲ್ಟಿಯಾಗಿ 20 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, 7 ಜನರನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ಬಿಮ್ಸ್ಗೆ ಸೇರಿಸಲಾಗಿದೆ
ಕೂಡ್ಲಿಗಿ: ಇಲ್ಲಿಯ ಅಮ್ಮನ ಕೆರೆ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಕೇರಳ ಮೂಲದ ಕಾಲೇಜು ವಿದ್ಯಾರ್ಥಿಗಳಿರುವ ಮಿನಿ ಬಸ್ಸೊಂದು ಪಲ್ಟಿಯಾಗಿ 20 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, 7 ಜನರನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ಬಿಮ್ಸ್ಗೆ ಸೇರಿಸಲಾಗಿದೆ.
ಕೇರಳ ಮೂಲದ ಶ್ರೀ ಕೃಷ್ಣ ಪಿ.ಜಿ. ಮತ್ತು ಡಿಗ್ರಿ ಕಾಲೇಜಿನ 33 ವಿದ್ಯಾರ್ಥಿಗಳ ತಂಡವೊಂದು ಮಂಗಳೂರಿನಿಂದ ಹಂಪಿ ನೋಡಲು ಕೂಡ್ಲಿಗಿ ಮಾರ್ಗವಾಗಿ ಬರುವಾಗ ಈ ಅವಘಡ ಸಂಭವಿಸಿದೆ.ಕಾಲೇಜಿನಲ್ಲಿ ಎಚ್ಒಡಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಲಕ್ಷ್ಮೀ (46) ಅವರು ಪಲ್ಟಿಯಾದ ಬಸ್ಸಿನ ಅಡಿಯಲ್ಲಿ ಸಿಲುಕಿದ್ದರಿಂದ ಅವರ ಎಡಗಾಲು ಸಂಪೂರ್ಣ ಮುರಿದಿದೆ. ಉಳಿದಂತೆ ಅಜೇಯ (21), ಅವನಿ ಕೃಷ್ಣ (20), ಅತುಲ್ಯಾ (20), ಅನುಗ್ರಹ (20), ಆಡುಲ್ ಕೃಷ್ಣ (20) ಹಾಗೂ ನುಹಾದ್ ಅಸ್ಲಾಂ (28) ತಲೆ ಕೈಕಾಲು ಇತರೆ ದೇಹದ ಭಾಗದಲ್ಲಿ ಗಾಯವಾಗಿವೆ. ಅವರಿಗೆ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳ್ಳಾರಿ ವಿಮ್ಸ್ಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಉಳಿದಂತೆ ಸಣ್ಣಪುಟ್ಟ ಗಾಯಾಳುಗಳಿಗೆ ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದಿದೆ.
ಘಟನೆ ವಿವರ:ಕೇರಳದ ಶ್ರೀ ಕೃಷ್ಣ ಪಿ.ಜಿ. ಹಾಗೂ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರವಾಸ ಏರ್ಪಡಿಸಲಾಗಿದ್ದು, ಕೇರಳದಿಂದ ರೈಲಿನ ಮೂಲಕ ಮಂಗಳೂರಿಗೆ ಬಂದು ಅಲ್ಲಿಂದ ಮಿನಿ ಬಸ್ ವ್ಯವಸ್ಥೆ ಮಾಡಿಕೊಂಡಿದ್ದರು. ಬಸ್ನಲ್ಲಿ 33 ವಿದ್ಯಾರ್ಥಿಗಳು ಓರ್ವ ಎಚ್ಒಡಿ, ಬಸ್ಸಿನ ಇಬ್ಬರು ಚಾಲಕರು ಓರ್ವ ಸಹಾಯಕ ಸೇರಿ 36 ಜನರಿದ್ದರು. ಕೂಡ್ಲಿಗಿ ಸಮೀಪದ ಅಮ್ಮನಕೆರೆ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬುಧವಾರ ನಸುಕಿನ ಜಾವ 5.30 ರ ವೇಳೆಗೆ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ತಕ್ಷಣ ಹೈವೇ ಪೆಟ್ರೋಲಿಂಗ್, ಟೋಲ್ ಆ್ಯಂಬುಲೆನ್ಸ್, ಕೂಡ್ಲಿಗಿ 108ರ ಅಂಬ್ಯುಲೆನ್ಸ್ನಲ್ಲಿ ಸುಮಾರು 20ಕ್ಕೂ ಹೆಚ್ಚು ಗಾಯಳುಗಳನ್ನು ಕರೆತಂದು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಕ್ಷ್ಮೀ ಎನ್ನುವವರು ಪಲ್ಟಿಯಾದ ಬಸ್ಸಿನಡಿ ಸಿಲುಕಿದ್ದು ಅವರನ್ನು ಹೊರತೆಗೆಯಲು ಸ್ಥಳೀಯರು, ಟೋಲ್ ಸಿಬ್ಬಂದಿ ಪೊಲೀಸರು ಹರಸಾಹಸ ಪಟ್ಟು ನಂತರ ಕ್ರೇನ್ ಮೂಲಕ ಬಸ್ ಎತ್ತಿ ರಕ್ಷಿಸಲಾಯಿತು. ಮಹಿಳೆಯ ಎಡಗಾಲು ಸಂಪೂರ್ಣ ತುಂಡಾಗಿದೆ ಎಂದು ತಿಳಿದಿದೆ. ಡಾ. ಮಧು ಸೇರಿದಂತೆ ಸಿಬ್ಬಂದಿ ಗಾಯಳುಗಳಿಗೆ ಚಿಕಿತ್ಸೆ ನೀಡಿದರು.
ಮಾನವೀಯತೆ ಮೆರೆದ ಮುಖಂಡರುಕಾಲೇಜು ಮಕ್ಕಳ ಬಸ್ ಪಲ್ಟಿಯಾಗಿದೆ ಎಂದು ಸುದ್ದಿ ತಿಳಿದ ಕೂಡ್ಲಿಗಿ ಮುಖಂಡರಾದ ಉದಯ ಎಸ್. ಜನ್ನು, ಟಿ.ಜಿ. ಮಲ್ಲಿಕಾರ್ಜುನ ಗೌಡ ಹಾಗೂ ಯುವ ಮುಖಂಡ ಸಚಿನ್ ಕುಮಾರ್, ಅಜೇಯ, ರಿಯಾಜ್ ಸೇರಿದಂತೆ ಇತರರು ತಕ್ಷಣ ಆಸ್ಪತ್ರೆಗೆ ಧಾವಿಸಿ ಗಾಯಳುಗಳ ಆರೋಗ್ಯ ವಿಚಾರಿಸಿ ಹೆಚ್ಚಿನ ಗಾಯವಾದವರನ್ನು ಬಳ್ಳಾರಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು. ಗಾಯಗೊಂಡರು ಚೇತರಿಸಿಕೊಳ್ಳಲು ಪ್ರವಾಸಿ ಮಂದಿರ ಹಾಗೂ ಅಶ್ವಮೇಧ ಲಾಡ್ಜ್ ವ್ಯವಸ್ಥೆ ಮಾಡಿ ಉಪಹಾರ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.