ಕನ್ನಡಪ್ರಭ ವಾರ್ತೆ ಹೊಸದುರ್ಗ

ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸಚಿವರಾಗುವ ಭಾಗ್ಯ ಲಭಿಸಿರುವ ಟಿ.ರಘುಮೂರ್ತಿ ಅವರು ಗುರುವಾರ ಪ್ರಥಮ ಬಾರಿಗೆ ಹೊಸದುರ್ಗ ತಾಲೂಕಿಗೆ ಭೇಟಿ ನೀಡಿದ್ದರು. ನೇರವಾಗಿ ಬೆಲಗೂರಿಗೆ ತೆರಳಿದ ಅವರು ಶಾಸಕ ಗೋವಿಂದಜ್ಜನ ಆಶೀರ್ವಾದ ಪಡೆದು ಉಭಯ ಕುಶಲೋಪರಿ ಮಾತುಕತೆ ನಡೆಸಿದರು.

ಶಾಸಕರ ಮನೆಗೆ ತಿಂಡಿಗೆ ಬಂದ ಸಚಿವರಿಗೆ ಹೊಸದುರ್ಗ ತಾಲೂಕಿನ ಬರ ಪರಿಶೀಲನೆಗೆ ಸಮಯವೇ ಇರಲಿಲ್ಲ. ಬೆಳಗ್ಗೆ 9 ಗಂಟೆಗೆ ಬಿ.ಜಿ.ಗೋವಿಂದಪ್ಪ ಅವರ ಸ್ವಗ್ರಾಮದ ಬೆಲಗೂರಿನ ನಿವಾಸಕ್ಕೆ ಬೇಟಿ ನೀಡಿದ್ದ ಸಚಿವರು ಬಳಿಕ ಇಬ್ಬರು ಪರಸ್ಪರ ಗೌರವಿಸಿಕೊಂಡರು. ಜಿಲ್ಲೆಯ ಅಭಿವೃದ್ಧಿ, ಆಡಳಿತಾತ್ಮಕ ವಿಷಯಗಳು ಹಾಗೂ ಬರ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಿದ ಸಚಿವರು ನನ್ನ ರಾಜಕೀಯ ಯಶಸ್ಸಿನ ಹಿಂದೆ ಬಿ.ಜಿ.ಗೋವಿಂದಪ್ಪನವರ ಆಶೀರ್ವಾದವಿದೆ. ಮುಂದೆಯೂ ಇದೇ ರೀತಿ ಆಶೀರ್ವಾದ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಸರ್ಕಾರದ ನಿರ್ದೇಶನದಂತೆ ಬರ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ ಸಚಿವರು ಹೊಸದುರ್ಗ ತಾಲೂಕಿನಲ್ಲಿ ಕೂಡ ಬರ ಪರಿಶೀಲನಾ ಸಭೆ ನಡೆಸಲು ಒಂದು ದಿನಾಂಕ ನಿಗದಿಪಡಿಸಿ ಎಂದು ಶಾಸಕರಿಗೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಇತರ ತಾಲೂಕುಗಳಲ್ಲಿ ನಡೆಸಿದ ರೀತಿಯಲ್ಲಿಯೇ ಇಲ್ಲಿಯೂ ಪರಿಶೀಲನೆ ನಡೆಸಿ ಎಂದಿದ್ದಾರೆ.

ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೆಳಗೋಟೆ ರಘು, ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರಾಮಪ್ಪ ಈ ವೇಳೆ ಉಪಸ್ಥಿತರಿದ್ದರು. ನಮ್ಮಲ್ಲಿ ಏಕಿಲ್ಲ ಬರ ಅಧ್ಯಯನ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಅಧ್ಯಯನ ಮಾಡುತ್ತಿರುವ ಸಚಿವರು ಗುರುವಾರ ಬೆಳಗ್ಗೆ ಹೊಸದುರ್ಗಕ್ಕೆ ಆಗಮಿಸಿದ್ದರೂ ಇಲ್ಲಿನ ಯಾವುದೇ ಗ್ರಾಮ ಅಥವಾ ಕೃಷಿ ಪ್ರದೇಶಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ವೀಕ್ಷಿಸದಿರುವುದು ಸ್ಥಳೀಯ ರೈತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.


ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಬೇಕಾಗಿದ್ದರೂ ಕೇವಲ ಚಿತ್ರದುರ್ಗ, ಚಳ್ಳಕೆರೆ ಹಾಗೂ ಹಿರಿಯೂರು ತಾಲೂಕುಗಳಿಗೆ ಮಾತ್ರ ಭೇಟಿ ನೀಡಿ ಹೊಸದುರ್ಗ ತಾಲೂಕನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿರುವುದು ಸಾರ್ವಜನಿಕರು ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಸೇರಿದಂತೆ ವಿರೋಧ ಪಕ್ಷದ ನಾಯಕರು ನಡೆಸುತ್ತಿರುವ ಬರ ಪರಿಶೀಲನೆ ಪ್ರವಾಸಗಳು ಕೂಡ ಹೆದ್ದಾರಿ ಪಕ್ಕದ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿವೆ. ಬರ ಪರಿಶೀಲನೆ ಎನ್ನುವುದು ರಾಷ್ಟ್ರೀಯ ಹೆದ್ದಾರಿ ಪಕ್ಕದ ಪ್ರದೇಶಗಳಿಗೆ ಮಾತ್ರ ಸೀಮಿತವಾಗಬಾರದು. ನಿಜವಾದ ಬರದ ಚಿತ್ರಣ ಕಾಣಬೇಕಾದರೆ ಒಳನಾಡಿನ ಗ್ರಾಮಗಳು, ಮಳೆಯಾಶ್ರಿತ ಜಮೀನುಗಳಿಗೆ ಭೇಟಿ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.

ಹೊಸದುರ್ಗ ತಾಲೂಕು ಹಿಂದುಳಿದ ಪ್ರದೇಶವೆಂದು ಪರಿಗಣಿಸಲ್ಪಟ್ಟಿದ್ದರೂ, ಜಿಲ್ಲಾಮಟ್ಟದ ಪ್ರಮುಖ ಕಾರ್ಯಕ್ರಮಗಳು ಹಾಗೂ ಸಚಿವರ ಭೇಟಿಗಳಲ್ಲಿ ಪದೇಪದೇ ಕಡೆಗಣನೆಯಾಗುತ್ತಿದೆ ಎಂಬ ಆರೋಪ ಇಲ್ಲಿಗೆ ಹೊಸದೇನಲ್ಲ. ಕೇಳಿಬರುತ್ತಿದೆ. ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಸಮಾನ ಆದ್ಯತೆ ನೀಡಿ, ಹೊಸದುರ್ಗ ತಾಲೂಕಿನಲ್ಲೂ ತಕ್ಷಣ ಬರ ಪರಿಶೀಲನೆ ನಡೆಸಿ ರೈತರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತರಬೇಕು ಎಂಬುದು ರೈತರು ಹಾಗೂ ಸಾರ್ವಜನಿಕರ ಒತ್ತಾಯ.