ಸಾರಾಂಶ
ಮುಧೋಳದ ಈದ್ಗಾ ಮೈದಾನದಲ್ಲಿ ಸೋಮವಾರ ಬಕ್ರೀದ್ ಹಬ್ಬದಂಗವಾಗಿ ನಡೆದ ಪ್ರಾರ್ಥನೆಯಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿ, ಮುಸ್ಲಿಂ ಸಮಾಜದವರಿಗೆ ಶುಭ ಕೋರಿದರು.
ಕನ್ನಡಪ್ರಭ ವಾರ್ತೆ ಮುಧೋಳ
ತ್ಯಾಗ, ಬಲಿದಾನದ ಪ್ರತೀಕ ಬಕ್ರೀದ್ ಹಬ್ಬವನ್ನು ವಿಶ್ವದಾದ್ಯಾಂತ ಮುಸ್ಲಿಂ ಸಮಾಜದವರು ಧಾರ್ಮಿಕ ಹಬ್ಬವನ್ನಾಗಿ ಆಚರಿಸುತ್ತಾರೆ. ಹಬ್ಬ ಅವರಿಗೆ ಸುಖ, ಶಾಂತಿ, ನೆಮ್ಮದಿ, ಕಂಡ ಕನಸುಗಳು ಈಡೇರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹಾರೈಸಿದರು. ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಸೋಮವಾರ ನಡೆದ ಮುಸ್ಲಿಂ ಸಮಾಜದವರು ನಡೆಸಿದ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿ, ಹಬ್ಬವನ್ನು ಉತ್ಸಾಹ, ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುತ್ತಾ ಬಂದಿದ್ದು, ಅವರು ಬಡವರಿಗೆ ದಾನ, ಧರ್ಮ ಮಾಡುವ ಮೂಲಕ ವಿಶೇಷವಾಗಿ ಆಚರಿಸುತ್ತಾರೆ ಎಂದರು.ಜುಲೂಸ್ : ಇದಕ್ಕೂ ಮೊದಲು ಗಾಂಧಿ ವೃತ್ತದಲ್ಲಿರುವ ಶಾಹಿ ಮಸ್ಜೀದ್ ನಿಂದ ನಡೆದ ಹಿರಿಯರ ಜುಲೂಸ್ (ಪಾದಯಾತ್ರೆ) ವಿವಿಧ ವೃತ್ತಗಳ ಮೂಲಕ ಅಲ್ಲಾಹುನನ್ನು ಸ್ಮರಿಸುತ್ತ ಈದ್ಗಾ ಮೈದಾನಕ್ಕೆ ತೆರಳಿದರು.
ಜಾಮೀಯಾ ಮಸ್ಜೀದ್: ನಗರದ ಮಧ್ಯ ಭಾಗದಲ್ಲಿರುವ ಜಾಮೀಯಾ ಮಸ್ಜೀದ್ ನಲ್ಲಿ ಹಿರಿಯರಿಗೆ, ಬಾಲಕರಿಗೆ ಅನುಕೂಲಕ್ಕೋಸ್ಕರ ನದೀಂ ನೂರಿ ಹಾಗೂ ಖ್ವಾಜಾ ಗರೀಬ ನವಾಜ್ ಮಸ್ಜೀದ್ನಲ್ಲಿ ಸಜ್ಜಾದ ಹುಸೇನರವರ ನೇತೃತ್ವದಲ್ಲಿ ಬಕ್ರೀದ್ ಹಬ್ಬದ ವಿಶೇಷ ಪ್ರಾರ್ಥನೆ ಜರುಗಿತು.ಮುಸ್ಲಿಂ ಸಮಾಜದ ಮುಖಂಡರಾದ ಐ.ಎಚ್. ಅಂಬಿ, ಮೌಲಾನಾ ಇಕ್ಬಾಲ್, ಹುಸೇನ್, ಅಯೂಬ್, ಎನ್.ಬಿ. ಹುಬಳಿಕರ, ಅಂಜುಮನ್ ಅಧ್ಯಕ್ಷ ಆರೀಫ ಮೋಮಿನ್, ಖ್ವಾಜಾಮೀನ್ ಬಾಗವಾನ, ಯುಸೂಫ್ ಜಮಾದಾರ, ರಾಜು ಬಾಗವಾನ, ಐ.ಎಸ್. ಸಾರವಾನ, ಎಂ.ಆರ್. ಅಮ್ಮಲಜೇರಿ, ಮಿರ್ಜಾ ನಾಯಕವಾಡಿ, ನಜೀರ್ ಪಠಾಣ, ರಜಾಕ್ ಸಾರವಾನ, ಷರೀಫ್ ಜಕಲಿ ಹಾಗೂ ತಾಲೂಕಿನ ಮುಸ್ಲಿಂ ಸಮಾಜದ ಸಾವಿರಾರು ಜನ ಇದ್ದರು.