ಸಾರಾಂಶ
ಗದಗ: ಇತ್ತೀಚೆಗೆ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 60ಕ್ಕೂ ಕಡಿಮೆ ಫಲಿತಾಂಶ ನೀಡಿದ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಸಹ ಶಿಕ್ಷಕರ ವಾರ್ಷಿಕ ಬಡ್ತಿ ಮತ್ತು ಮುಂತಾದ ಕ್ರಮ ಕೈಗೊಳ್ಳುವ ನಿರ್ಣಯದ ಆದೇಶವನ್ನು ಹಿಂಪಡೆಯಬೇಕೆಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ವಿಪ ಸದಸ್ಯ ಎಸ್.ವಿ. ಸಂಕನೂರ ಅವರು ಪತ್ರ ಬರೆದು ಒತ್ತಾಯಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆ ಆಗಲು ಶಿಕ್ಷಕರನ್ನೇ ಮಾತ್ರ ಹೊಣೆಮಾಡುವ ಸರ್ಕಾರದ ನಿಲುವು ಸರಿಯಾದದ್ದಲ್ಲ, ಇದಕ್ಕೆ ಸರ್ಕಾರದ ಹಲವಾರು ಕ್ರಮ ಮತ್ತು ನೀತಿಗಳು ಕಾರಗಳಾಗಿರುವವು. ಸರ್ಕಾರ ಕಳೆದ 10 ವರ್ಷಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತಿ, ನಿಧನದಿಂದ ತೆರವಾಗಿರುವ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ನೀಡದೇ ಇರುವುದರಿಂದ ವಿಶೇಷವಾಗಿ ವಿಜ್ಞಾನ, ಗಣಿತ ಮತ್ತು ಆಂಗ್ಲ ಭಾಷೆಗಳನ್ನು ಹಾಗೂ ಮುಂತಾದ ವಿಷಯಗಳನ್ನು ಬೋಧನೆ ಮಾಡಲು ಶಿಕ್ಷಕರು ಇರುವುದಿಲ್ಲ ಹೀಗಾಗಿ ಸರ್ಕಾರದ ಲೋಪದೋಷದಿಂದ ಫಲಿತಾಂಶ ಕುಂಟಿತಗೊಂಡಿದೆ. ಬಹಳ ಮುಖ್ಯವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ 9ನೇ ವರ್ಗದವರೆಗೆ ಯಾವ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಬಾರದೆಂಬ ನೀತಿಯಿಂದಾಗಿ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಕುಸಿತಗೊಂಡಿರುವುದು. ಇತ್ತೀಚೆಗೆ ಕೇಂದ್ರ ಸರ್ಕಾರ ಆರ್.ಟಿ.ಇ. 2009ರ ಕಾಯ್ದೆ ತಿದ್ದುಪಡಿ ತಂದು 5 ಮತ್ತು 8ನೇ ತರಗತಿಗಳ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದವರಿಗೆ ಕಡ್ಡಾಯವಾಗಿ ಅದೇ ವರ್ಗದಲ್ಲಿ ಅಧ್ಯಯನ ಮಾಡುವಂತೆ ಮಾಡಿರುವರು. ಈ ನಿಯಮವನ್ನು ಕೇಂದ್ರಿಯ ಮಹಾವಿದ್ಯಾಲಯ ಹಾಗೂ ನವೋದಯ ವಿದ್ಯಾಲಯಗಳಲ್ಲಿ ಹಾಗೂ ಮುಂತಾದ ಶಾಲೆಗಳಲ್ಲಿ ಜಾರಿಗೆ ತಂದಿರುವರು. ಇದೇ ರೀತಿಯ ನಿಯಮವನ್ನು ರಾಜ್ಯ ಸರ್ಕಾರವೂ ರೂಪಿಸಲು ಸಲಹೆ ನೀಡಿದ್ದಾರೆ. ಒಟ್ಟಾರೆ ಫಲಿತಾಂಶ ಕಡಿಮೆ ಆದಂತಹ ಶಿಕ್ಷಕರ ಮೇಲೆ ವಾರ್ಷಿಕ ಬಡ್ತಿಯನ್ನು ತಡೆಹಿಡಿಯುವುದು ಮತ್ತು ನಿರಂತರ ನಾಲ್ಕೈದು ವರ್ಷಗಳ ವರೆಗೆ ಶೇ 60ಕ್ಕಿಂತ ಕಡಿಮೆ ಫಲಿತಾಂಶ ನೀಡಿದ ಶಾಲೆಗಳಿಗೆ ಅನುದಾನ ಕಡಿತ ಮಾಡುವ ವಿಚಾರವನ್ನು ಸರ್ಕಾರ ಸಂಪೂರ್ಣವಾಗಿ ಕೈಬಿಡಬೇಕೆಂದು ಮನವಿ ಮಾಡಿದ್ದಾರೆ.