ಸಾರಾಂಶ
ಹುಣಸಗಿ : ನಿರಂತರ ಜ್ಯೋತಿ ಯೋಜನೆ ಪ್ರಭಾವಿಗಳ ಪಾಲಿಗೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಗಿದ್ದು, ನಿರಂತರವಾಗಿ ವಿದ್ಯುತ್ ದುರ್ಬಳಕೆಯಾಗುತ್ತಿರುವುದು ತಾಲೂಕಿನ ಅಗ್ನಿ ಗ್ರಾಮದಲ್ಲಿ ಕಂಡು ಬಂದಿದೆ.
ಕೆಂಭಾವಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಅಗ್ನಿ ಗ್ರಾಮಕ್ಕೆ 11 ಕೆವಿ ನಿರಂತರ ಜ್ಯೋತಿ ವಿದ್ಯುತ್ ತಂತಿಗೆ ಅಕ್ರಮವಾಗಿ ತಾಲೂಕಿನ ಅಗ್ನಿ ಹಾಗೂ ಅಗತೀರ್ಥ ಗ್ರಾಮದ ಮಧ್ಯದಲ್ಲಿರುವ ಎಸ್ಕೇಪ್ ಗೇಟ್ ಹತ್ತಿರ ಹಾಗೂ ಕೆಲವು ಪ್ರಭಾವಿ ವ್ಯಕ್ತಿಗಳ ಜಮೀನಿಗೆ ಅಕ್ರಮವಾಗಿ ನಿರಂತರ ಜ್ಯೋತಿ ವಿದ್ಯುತ್ ಲೈನಿಂದ ಅಕ್ರಮವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಹಾಗಾಗಿ ಗ್ರಾಮಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ಸರಕಾರ ಇಂಥ ಯೋಜನೆ ಜಾರಿ ಮಾಡಿದೆ. ಆದರೆ ಅಧಿಕಾರಿಗಳು ಹಣದ ಆಸೆಗೆ ನಿರಂತರ ಜ್ಯೋತಿ ವಿದ್ಯುತ್ ಅಕ್ರಮವಾಗಿ ಬಳಕೆಗೆ ಸಹಕರಿಸುತ್ತಿದ್ದಾರೆ ಎಂದು ಗಂಭೀರವಾದ ಆರೋಪ ಕೇಳಿಬಂದಿದೆ.
ನಿರಂತರ ಜ್ಯೋತಿ ವಿದ್ಯುತ್ ಗೃಹ ಬಳಕೆಗೆ ಮಾತ್ರ ಬಳಸಬೇಕೇ ಹೊರೆತು, ರೈತರು ಅಕ್ರಮವಾಗಿ ಕೃಷಿ ಪಂಪ್ ಸಟ್ಗಳಿಗೆ ಬಳಸುವಂತಿಲ್ಲ ಎಂದು ಆದೇಶವಿದ್ದರೂ ವಿದ್ಯುತ್ ಇಲಾಖೆ ಕೈಚಳಕದಿಂದ ನಿರಂತರ ಜ್ಯೋತಿ ವಿದ್ಯುತ್ ಲೈನಿಂದ ಕೃಷಿ ಪಂಪ್ಸೆಟ್ ಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದರೆ ಮೇಲಧಿಕಾರಿಗಳು ಕಂಡೂಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.