ಶಿವಮೊಗ್ಗ: ನವ್ಯಶ್ರೀ ಈಶ್ವರವನ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜೂ. 5ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಬ್ಬಲಗೆರೆಯಲ್ಲಿರುವ ಈಶ್ವರ ವನದಲ್ಲಿ ಬೆಳಗ್ಗೆ 10 ಗಂಟೆಗೆ ಮಿಯಾವಾಕಿ ಅರಣ್ಯ ಬೆಳೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಟ್ರಸ್ಟ್‌ನ ಮುಖ್ಯಸ್ಥ ಎಂ.ವಿ.ನಾಗೇಶ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನವ್ಯಶ್ರೀ ಈಶ್ವರವನ ಚಾರಿಟೆಬಲ್ ಟ್ರಸ್ಟ್ ಕಳೆದ 10 ವರ್ಷಗಳಿಂದ ಪರಿಸರ ಕಾರ್ಯಕ್ರಮಗಳನ್ನು ರೂಪಿಸುತ್ತ ಬಂದಿದೆ. ಮುಖ್ಯವಾಗಿ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದು, ನವ್ಯಶ್ರೀ ಈಶ್ವರವನದಲ್ಲಿ ಎರಡು ಎಕರೆ ಪ್ರತ್ಯೇಕ ಜಾಗದಲ್ಲಿ ಸುಮಾರು 125ಕ್ಕೂ ಹೆಚ್ಚು ಜಾತಿಯ ಒಂದು ಸಾವಿರ ಮರಗಳನ್ನು ಬೆಳೆಸಲಾಗಿದೆ ಎಂದರು.

ಈಗ ಇದರ ಮುಂದುವರಿದ ಭಾಗವಾಗಿ ಈಶ್ವರವನದಲ್ಲಿ ಮಿಯಾವಾಕಿ ಎಂಬ ನೂತನ ರೀತಿಯ ಅರಣ್ಯ ಬೆಳೆಸುವ ಉದ್ದೇಶವನ್ನು ಹೊಂದಿದ್ದು, ಟ್ರಸ್ಟ್‌ನ ಸ್ವಂತ ಜಾಗದಲ್ಲಿ ಈ ಅರಣ್ಯ ಬೆಳೆಸುವ ಯೋಜನೆಗೆ ನಾಳೆ ಅರಣ್ಯಾಧಿಕಾರಿ ಅಜ್ಜಯ್ಯ ಚಾಲನೆ ನೀಡಲಿದ್ದಾರೆ. ನಗರದ ವಿವಿಧ ಶಾಲೆಗಳ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಮಿಯಾವಾಕಿ ಎಂಬುದು ಜಪಾನಿನ ಡಾ.ಅಖಿರಾ ಮಿಯಾವಾಕಿ ಎಂಬ ಸಸ್ಯ ತಜ್ಞನ ಆವಿಷ್ಕಾರವಾಗಿದೆ. ಇದರ ವಿಶೇಷತೆ ಎಂದರೆ ಅತಿ ಕಡಿಮೆ ಜಾಗದಲ್ಲಿ ಹೆಚ್ಚು ಜಾತಿಯ ಮರಗಳನ್ನು ಬೆಳೆಸುವುದಾಗಿದೆ. ಅಲ್ಲದೆ ಸಾಮಾನ್ಯಕ್ಕಿಂತ 30 ಪಟ್ಟು ವೇಗವಾಗಿ ಮತ್ತು ದಟ್ಟವಾಗಿ ಬೆಳೆಯುವುದಲ್ಲದೆ ಜೀವ ವೈವಿಧ್ಯತೆಯನ್ನು ಇವು ನೀಡುತ್ತವೆ. ಹಾಗಾಗಿ ನಮ್ಮ ಟ್ರಸ್ಟ್ ಕೂಡ ಮಿಯಾವಾಕಿ ಅರಣ್ಯ ಬೆಳೆಸಲು ಒತ್ತು ನೀಡುತ್ತಿದೆ ಎಂದರು.

ಗೋಷ್ಠಿಯಲ್ಲಿ ನಾಗರಾಜ ಶೆಟ್ಟರ್, ತಿವಾರಿ, ಶಿವಮೊಗ್ಗ ವಿನಯ್, ಈರಣ್ಣ ಹುಗ್ಗಿ, ಮನೋಹರ್, ಪ್ರದೀಪ್, ಸಂತೋಷ್ ಯಲಿಗಾರ್, ದಿನೇಶ್ ಇದ್ದರು.