ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರುಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ೧೦೦ ಹಾಸಿಗೆಗಳ ಆಸ್ಪತ್ರೆ ಕಟ್ಟಡದ ಕಾಮಗಾರಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಶುಕ್ರವಾರ ಜಾಗವನ್ನು ಹಸ್ತಾಂತರ ಮಾಡುವ ಮೂಲಕ ಈ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಳಂದೂರು ತಾಲೂಕು ಈ ಹಿಂದೆ ಮೊದಲ ವಿಧಾನಸಭಾ ಕ್ಷೇತ್ರವಾಗಿತ್ತು. ದ್ವಿಸದಸ್ಯ ಕ್ಷೇತ್ರವಾಗಿದ್ದ ಇಲ್ಲಿ ನಮ್ಮ ತಂದೆ ಬಿ.ರಾಚಯ್ಯ ಕೂಡ ಗೆದ್ದಿದ್ದರು. ಅಲ್ಲಿಂದ ಈ ತಾಲೂಕಿನ ಬಗ್ಗೆ ನನಗೆ ವಿಶೇಷ ಅಭಿಮಾನವಿದೆ. ಹಾಗಾಗಿ ಇಲ್ಲಿಗೆ ೧೦೦ ಹಾಸಿಗೆಗಳ ಆಸ್ಪತ್ರೆಗೆ ಬೇಡಿಕೆ ಇತ್ತು. ಇದನ್ನು ಕೊಡಲೇ ಬೇಕೆಂದು ಸಿಎಂ ಸಿದ್ಧರಾಮಯ್ಯ ಹಾಗೂ ಆರೋಗ್ಯಮಂತ್ರಿ ದಿನೇಶ್ಗುಂಡೂರಾವ್ ಅವರಿಗೆ ಮನವಿ ಮಾಡಿದ್ದೆ. ಇದಕ್ಕೆ ಸಿಎಂ ಬಜೆಟ್ನಲ್ಲಿ ಇದನ್ನು ಘೋಷಣೆ ಮಾಡಿ, ಇದಕ್ಕೆ ಅನುಮೋದನೆಯನ್ನೂ ನೀಡಿ ೨೦೨೪ರ ಡಿ.೦೭ ರಂದು ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.ಆದರೆ ಇಲ್ಲಿರುವ ಮಣ್ಣು ಪರೀಕ್ಷೆ ಹಾಗೂ ಇತರೆ ತಾಂತ್ರಿಕ ಕೆಲಸಗಳು ಬಾಕಿ ಇತ್ತು. ಇದಕ್ಕೆ ಜಿಲ್ಲಾಧಿಕಾರಿಗಳಿಗೆ ನಾನು ಸಂಬಂಧಪಟ್ಟ ಎಂಜಿನಿಯರ್, ಎಇಇ ಗಳ ಸಭೆ ನಡೆಸಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಆರಂಭಿಸಲು ಸಲಹೆ ನೀಡಿದ್ದೆ. ಈಗ ಎಲ್ಲ ಮುಗಿದಿದ್ದು. ಕಾಮಗಾರಿ ಆರಂಭಗೊಂಡಿದೆ. ಯಳಂದೂರು ಇಲ್ಲಿಗೆ ೩೫ ಕೋಟಿ ರು. ವೆಚ್ಚದಲ್ಲಿ ೧೦೦ ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ. ಇದು ಆರಂಭಗೊಂಡರೆ ಇಲ್ಲಿ ಅನೇಕ ಸವಲತ್ತುಗಳು ದೊರೆಯುವುದರಿಂದ ಜಿಲ್ಲಾ ಕೇಂದ್ರ, ಮೈಸೂರಿಗೆ ತೆರಳುವರ ಸಂಖ್ಯೆ ಕಡಿಮೆಯಾಗಲಿದೆ. ಅಲ್ಲದೆ ವೈದ್ಯರ ಸಂಖ್ಯೆಯೂ ಹೆಚ್ಚಲಿದೆ. ಸಂಬಂಧಪಟ್ಟ ಗುತ್ತಿಗೆದಾರರರಿಗೆ ೧೮ ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅವಕಾಶವಿದ್ದು ಅವಧಿಯೊಳಗೆ ಇದು ಪೂರ್ಣಗೊಳ್ಳುವ ಭರವಸೆ ಇದೆ. ಸಂಬಂಧಪಟ್ಟ ಇಲಾಖೆಗಳ ತಂತ್ರಜ್ಞರ ತಂಡ ಇದರ ಬಗ್ಗೆ ನಿಗಾವಹಿಸಿ ಗುಣಮಟ್ಟದ ಕಾಮಗಾರಿಯನ್ನು ಮಾಡುವಂತೆ ನೋಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.ಜಿಲ್ಲಾಧಿಕಾರಿ ಶಿಲ್ಪಾನಾಗ್, ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಜಯಪ್ರಕಾಶ್, ಇಒ ಉಮೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪ್ರಸಾದ್, ತಾಲೂಕು ವೈದ್ಯಾಧಿಕಾರಿ ಡಾ. ಶ್ರೀಧರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.