ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಭಗೀರಥ ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಸರ್ಕಾರ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ನಗರದ ಬೀರೇಶ್ವರ ಸಭಾಭವನದಲ್ಲಿ ಶುಕ್ರವಾರ ಜರುಗಿದ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಗೀರಥ ಸಮಾಜದ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.
ಭಗೀರಥ ಉಪ್ಪಾರ ಸಮಾಜವನ್ನು ಎಸ್ಸಿ, ಎಸ್ಟಿಗೆ ಸೇರ್ಪಡೆ ಮಾಡುವ ಸಂಬಂಧ ಸಮಾಜದವರು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಸಮಾಜ ಬಾಂಧವರ ಹೋರಾಟಗಳಿಗೆ ಸದಾ ಬೆಂಬಲ ನೀಡಿದ್ದೇನೆ. ಈ ಸಮಾಜಕ್ಕೆ ಮೀಸಲಾತಿ ನೀಡಬೇಕೆಂಬುವುದು ನಮ್ಮೆಲ್ಲರ ಒತ್ತಾಸೆ. ಈ ದಿಸೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರು ಪಕ್ಷ ಭೇದ ಮರೆತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಭಗೀರಥ ಸಮಾಜದ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿಕೊಳ್ಳಲಾಗುವುದು. ಮುಂದಿನ 2024ರಲ್ಲಿಯೂ ಮತ್ತೆ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಕೇಂದ್ರ ಮಟ್ಟದಲ್ಲಿ ಸಮಾಜಕ್ಕೆ ಸಿಗಬೇಕಿರುವ ಮೀಸಲಾತಿ ಪಡೆಯುವುದಕ್ಕಾಗಿ ಇಡೀ ಸಮಾಜ ಬಾಂಧವರ ಜೊತೆಗೂಡಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ಭಗೀರಥ ಸಮಾಜ ಆರ್ಥಿಕವಾಗಿ ಮುಂದೆ ಬರಬೇಕಿದೆ. ಶಿಕ್ಷಣದಲ್ಲಿ ಮಹತ್ತರ ಸಾಧನೆ ಮಾಡಬೇಕಿದೆ. ಈ ದಿಸೆಯಲ್ಲಿ ಸಮಾಜ ಬಾಂಧವರು ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ. ಸಮಾಜ ಗಟ್ಟಿಯಾಗಿ ನಿಂತು ಸಂಘಟಿತರಾದರೆ ಮಾತ್ರ ಸರ್ಕಾರದ ಯೋಜನೆಗಳು ಪಡೆಯಬಹುದು. ಒಗ್ಗಟ್ಟಾದರೆ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತದೆ. ಸಮಾಜವನ್ನು ಒಡೆಯದೇ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ನಿಂತು ಸಮಾಜಕ್ಕೆ ಪೂರಕವಾಗುವ ಕೆಲಸ ಮಾಡುವಂತೆ ತಿಳಿಸಿದರು.
ಹೊಸದುರ್ಗದ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಭಗೀರಥ ಉಪ್ಪಾರ ಸಮಾಜಕ್ಕೆ ಭವ್ಯ ಇತಿಹಾಸವಿದೆ. ಹುಟ್ಟು ಶ್ರೀಮಂತ ಜಾತಿಯಾಗಿದ್ದರೂ ಕಾಲ ಕ್ರಮೇಣ ಹಿಂದುಳಿದ ಜಾತಿಗೆ ಸೇರಬೇಕಾಯಿತು. ಸಾಕಷ್ಟು ಬಾರಿ ಈ ಹಿಂದಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗಿದೆ. ಆದರೂ ನಮ್ಮ ಸಮಾಜವನ್ನು ಸರ್ಕಾರಗಳು ಕಡೆಗೆಣಿಸುತ್ತ ಬಂದಿವೆ. ಸರ್ಕಾರ ನಮ್ಮ ಸಮಾಜಕ್ಕೆ ಅಗತ್ಯವಿರುವ ಮೀಸಲಾತಿಯನ್ನು ನೀಡಿ ಬಾಂಧವರ ಬೇಡಿಕೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿಕೊಂಡರು.ಇದಕ್ಕೂ ಮುಂಚೆ ನಗರದ ಕೊಳವಿ ಹನುಮಾನ ದೇವಸ್ಥಾನದ ಆವರಣದಲ್ಲಿ ಭವ್ಯ ಭಗೀರಥ ಭಾರತ ಜನಕಲ್ಯಾಣ ರಥೋತ್ಸವ ಸ್ವಾಗತಿಸಿ, ನಗರದ ಭಾಫನಾ ಕೂಟ, ಸಂಗೋಳ್ಳಿ ರಾಯಣ್ಣ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಬಸವೇಶ್ವರ ವೃತ್ತದಿಂದ ಬಿರೇಶ್ವರ ಕಲ್ಯಾಣ ಮಂಟಪದವರೆಗೆ ಸುಮಂಗಲೆಯರ ಪೂರ್ಣ ಕುಂಭ, ವಾದ್ಯಮೇಳ ಹಾಗೂ ಆನೆಯ ಮೇಲೆ ರಾಜಋಷಿ ಭಗೀರಥರ ಮೂರ್ತಿಯನ್ನು ಮೆರವಣಿಗೆ ಅತೀ ವಿಜೃಂಭಣೆಯಿಂದ ಜರುಗಿತು.ವೇದಿಕೆಯಲ್ಲಿ ಹಿರಿಯ ನ್ಯಾಯವಾದಿಗಳಾದ ಬಿ.ಆರ್.ಕೊಪ್ಪ, ಎಸ್.ಎಂ.ಹತ್ತಿಕಟಗಿ, ಸಮಾಜದ ಮುಖಂಡರಾದ ಶಿವಪುತ್ರಪ್ಪ ಜಕಬಾಳ, ಬಿ.ಬಿ.ಹಂದಿಗುಂದ, ಶಾಮಾನಂದ ಪೂಜೇರಿ, ಅಡಿವೆಪ್ಪ ಕಿತ್ತೂರ, ಶಂಕರ ಬಿಲಕುಂದಿ, ರಾಮಣ್ಣ ಹಂದಿಗುಂದ, ವಿಠ್ಠಲ ಸವದತ್ತಿ, ಮುತ್ತೇಪ್ಪ ಕುಳ್ಳೂರ, ಪರಸಪ್ಪ ಬಬಲಿ, ಮಾಯಪ್ಪ ತಹಶೀಲ್ದಾರ್, ಕುಶಾಲ ಗುಡೆನ್ನವರ, ಭರಮಪ್ಪ ಉಪ್ಪಾರ, ಪರಸಪ್ಪ ಚೂನನ್ನವರ, ಸದಾಶಿವ ಗುದಗಗೋಳ, ಗಂಗಾಧರ ಭಟ್ಟಿ, ಕವಿತಾ ರಾಜೇಶ್, ಡಾ.ಮಹಾಂತೇಶ ಕಡಾಡಿ, ಭೀಮಶಿ ಭರಮನ್ನವರ, ಹನುಮಂತ ದುರ್ಗನ್ನವರ, ಮಲ್ಲಿಕಾರ್ಜುನ ಚೌಕಾಶಿ, ಬಸವರಾಜ ಖಾನಪ್ಪನವರ, ಅಡಿವೆಪ್ಪ ಬಿಲಕುಂದಿ, ಯಲ್ಲಪ್ಪ ಹೆಜ್ಜೆಗಾರ, ವೀರಣ್ಣ ಹೆಜ್ಜೆಗಾರ, ಯಲ್ಲಪ್ಪ ಸುಳ್ಳನವರ, ಯಲ್ಲಪ್ಪ ದುರದುಂಡಿ, ಲಕ್ಷ್ಮಣ ಮಂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.