ಚನ್ನರಾಯಪಟ್ಟಣ: ಪಟ್ಟಣದ ಪುರಸಭೆ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ರಾಜ್ಯದಲ್ಲೇ ಪ್ರಥಮವಾಗಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಪ್ರಶಂಶಿಸಿದ್ದಾರೆ.

ಪುರಸಭೆ ಆಯೋಜಿಸಿದ್ದ ಪ್ಲಾಸ್ಟಿಕ್ ಬಳಕೆ ನಿಷೇಧ ಹಸಿ ಕಸ ವಿಂಗಡನೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಪರಿಸರ ಹೊಂದಿದ ನಗರ ಎಂದು ಪ್ರಶಸ್ತಿ ಪಡೆದ ಚನ್ನರಾಯಪಟ್ಟಣ, ಪುರಸಭೆ ಪೌರಕಾರ್ಮಿಕರ ಕಾರ್ಯದಿಂದ ಸ್ವಚ್ಛ ನಗರವಾಗಿ ಬಿಂಬಿತವಾಗಿದೆ. ಪುರುಷ ಪೌರಕಾರ್ಮಿಕರು ದುಶ್ಚಟಗಳಿಗೆ ಬಲಿಯಾಗಬಾರದು. ಇದರಿಂದ ಅವರ ಆರೋಗ್ಯ ಹಾಗೂ ಕುಟುಂಬದ ನಿರ್ವಹಣೆ ಸಮಸ್ಯೆಯಾಗುತ್ತದೆ, ಒಳ ಚ ರಂಡಿ ಯೋಜನೆಗೆ ೧೧೭ ಕೋಟಿ ರು, ಮರು ಅಂದಾಜು ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಪುರಸಭೆ ವತಿಯಿಂದ ೧೧೪% ತೆರಿಗೆ ಸಂಗ್ರಹ ಮಾಡಿ ದಾಖಲೆ ಮಾಡಲಾಗಿದೆ, ೧೦ ಕೋಟಿ ರು. ವೆಚ್ಚದ ಕಾಮಗಾರಿಯನ್ನು ಪುರಸಭೆ ತೆರಿಗೆ ಹಣದಲ್ಲಿ ಮಾಡಲಾಗಿದೆ. ಶ್ರವಣಬೆಳಗೊಳ ರಸ್ತೆ, ಹೊಳೆನರಸೀಪುರ ರಸ್ತೆ, ಮುಂತಾದ ಕಡೆ ಕೋಳಿ ಕಸಗಳನ್ನು ರಸ್ತೆಗೆ ಎಸೆಯುವ ಪರಿಪಾಠ ಹೆಚ್ಚಾಗಿದ್ದು ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಬೇಕಾಗಿದೆ, ಸ್ವಚ್ಛತೆಗೆ ಪ್ರತಿಯೊಬ್ಬ ಸಾರ್ವಜನಿಕರು ಪುರಸಭೆಯೊಂದಿಗೆ ಕೈಜೋಡಿಸಿ ಎಂದರು.ಪುರಸಭಾ ಮುಖ್ಯ ಅಧಿಕಾರಿ ಯತೀಶ್‌ ಕುಮಾರ್, ಪರಿಸರ ಎಂಜಿನಿಯರ್‌ ಕಾವ್ಯ, ಶಾರದಮ್ಮ, ಸಂಪನ್ಮೂಲ ವ್ಯಕ್ತಿ ಜಲದರ, ಆರೋಗ್ಯ ಅಧಿಕಾರಿ ಮೂರ್ತಿ ಇದ್ದರು. ಪುರಸಭೆಯ ಫೇಸ್‌ಬುಕ್ ಲಾಂಛನವನ್ನು ಈ ವೇಳೆ ಬಿಡುಗಡೆ ಮಾಡಲಾಯಿತು. ಮೃತಪಟ್ಟ ಪೌರ ಕಾರ್ಮಿಕನಿಗೆ ಸಂತಾಪ ಸೂಚಿಸಲಾಯಿತು.