ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಅತಿವೃಷ್ಟಿ ಪ್ರವಾಹದಿಂದ ಮಂದಗೆರೆಯ ಹೇಮಾವತಿ ಅಣೆಕಟ್ಟೆಗೆ ಹಾನಿಯಾಗಿರುವುದನ್ನು ತ್ವರಿತವಾಗಿ ಸರಿಪಡಿಸಲು ಮುಂದಾಗಿದ್ದೇನೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.ಸಮೀಪದ ಮಂದಗೆರೆಯ ಅಣೆಕಟ್ಟೆಯ ತಡೆಗೋಡೆ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕಳೆದ ವರ್ಷ ಹೇಮಾವತಿ ನದಿ ಮಳೆಗೆ ಉಕ್ಕಿ ಹರಿದ ಪರಿಣಾಮ ಅಣೆಕಟ್ಟಿಗೆ ಹಾನಿಯಾಗುವಂತೆ ಅಣೆಕಟ್ಟೆ ಬಳಿ ದೊಡ್ಡದಾಗಿ ಕೊರಕಲು ಬಿದ್ದಿತ್ತು .ಅಣೆಕಟ್ಟೆ ಬಳಿಯ ನಾಲೆಗೂ ಕೂಡ ಹಾನಿಯಾಗಿತ್ತು ಎಂದರು.
ಮುನ್ನೆಚ್ಚರಿಕೆಯಾಗಿ ಮರಳು ಮೂಟೆ ಹಾಕಿ ಸುರಕ್ಷತೆ ಕಾಪಾಡಲಾಗಿತ್ತು. ಸರ್ಕಾರ ಹಾಗೂ ಕಂದಾಯ ಸಚಿವ ಕೃಷ್ಣಭೈರೇಗೌಡರಿಗೆ ಮನವಿ ಮಾಡಿ ಅಣೆಕಟ್ಟೆಗೆ ತಡೆಗೋಡೆ ನಿರ್ಮಿಸಲು ಒತ್ತಾಯ ಮಾಡಲಾಗಿತ್ತು. ಈಗ ಸುಮಾರು 4.5 ಕೋಟಿ ರು. ಅಂದಾಜು ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.ಗುಣ ಮಟ್ಟದ ಕಾಮಗಾರಿಗೆ ಗುತ್ತಿಗೆದಾರರು ಒತ್ತು ನೀಡಬೇಕು. ಮಳೆಗಾಲ ಆರಂಭವಾಗುವುದರೊಳಗೆ ಕಾಮಗಾರಿ ಮುಗಿಸಬೇಕು. ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು.
ಕನ್ನಂಬಾಡಿ ಅಣೆಕಟ್ಟು ನಿರ್ಮಾಣಕ್ಕೆ ಮುನ್ನ 1903ರಲ್ಲಿ ಮಂದಗೆರೆಯಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣವಾಗಿದೆ. ಈ ಅಣೆಕಟ್ಟಿನ ಎರಡು ಬದಿಯ ಎಡ ಹಾಗೂ ಬಲದಂಡೆನಾಲೆಗಳನ್ನು ಆಶ್ರಯಿಸಿ ಸುಮಾರು ೧೮ ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶವಿದ್ದು ರೈತರ ಜೀವನಾಡಿಯಾಗಿ ಈ ನಾಲೆ ಇದೆ. ರೈತರು ಈ ನಾಲೆ ಆಶ್ರಯಿಸಿ ಬದುಕುತ್ತಿದ್ದಾರೆ. ಕೊನೆ ಭಾಗದ ರೈತರಿಗೆ ಸಮರ್ಪಕ ನೀರು ಸಿಗಬೇಕು. ಎರಡು ಬೆಳೆ ಬೆಳೆಯಲು ರೈತರಿಗೆ ಅನುಕೂಲವಾಗಬೇಕಿದೆ ಎಂದರು.
ಈ ವೇಳೆ ಜೆಡಿಎಸ್ ಮುಖಂಡರಾದ ಕೆ.ಬಿ.ಮಧು, ಕೆ.ಬಿ.ಶೇಖರ್, ಕಾಯಿ ಮಂಜೇಗೌಡ, ಮೋಹನಬಾಬು, ಬಸವಲಿಂಗಪ್ಪ, ಚಂದ್ರಶೇಖರ್, ಬಂಕ್ ಸಂತೋಷ್, ಹೇಮಾವತಿ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತಿತರರಿದ್ದರು.