ಯಾವುದೇ ಕಾರಣಕ್ಕೂ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಧಿ ಕಾರಿಗಳು ಎಚ್ಚರ ವಹಿಸಬೇಕು ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ
ತಾಲೂಕಿನಲ್ಲಿ ಮಳೆಯ ಅಭಾವದಿಂದ ರೈತರು ಸಂಕಷ್ಟದಲ್ಲಿದ್ದಾರೆ, ಹೇಮಾವತಿ ನೀರು ಹರಿವಿನಿಂದ ರೈತರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಕೊಳವೆ ಭಾವಿ ಕೊರೆಸಿ ರೈತರು ಬೆಳೆ ಬೆಳೆಯಲು ಸಾಕಷ್ಟು ಕಷ್ಟ ಪಡುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ರೈತರು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗದೇ ಹೋದರೆ ರೈತರು ನಷ್ಟ ಅನುಭವಿಸುತ್ತಾರೆ, ಯಾವುದೇ ಕಾರಣಕ್ಕೂ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಧಿ ಕಾರಿಗಳು ಎಚ್ಚರ ವಹಿಸಬೇಕು ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.ಅವರು ನಗರದ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಹತ್ತಿ ಬೆಳೆಗಾರರಿಂದ ಮನವಿ ಸ್ವೀಕರಿಸಿ ಮಾತನಾಡಿದರು. ರೈತರ ಸಮಸ್ಯೆಗಳಿಗೆ ಬೇಗ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ, ತುಮಕೂರು ಜಿಲ್ಲೆಯ ಶಿರಾ, ಪಾವಗಡ, ಮಧಿಗಿರಿ ಕೊರಟಗೆರೆ ಚಿಕ್ಕನಾಯಕನಹಳ್ಳಿ ಹೆಚ್ಚು ಹತ್ತಿ ಬೀಜೋತ್ಪಾದನೆಯನ್ನು ಮಾಡುತ್ತಿದ್ದು ಬೀಜೋತ್ಪಾದನೆ ಕಂಪನಿಯವರು ಶಿರಾ ತಾಲೂಕಿನ ತಾವರೆಕೆರೆ ಗ್ರಾಮವನ್ನು ಕೇಂದ್ರ ಸ್ಥಳವನ್ನಾಗಿ ಮಾಡಿಕೊಂಡು, 60 ರಿಂದ 70 ಕ್ಕೂ ಹೆಚ್ಚು ಕಂಪನಿಗಳು ಈ ಗ್ರಾಮದಲ್ಲಿ ಇದ್ದು ಈ ಮೂಲಕ ಜಿಲ್ಲೆಯ ಹಲವು ತಾಲೂಕಿನ ರೈತರುಗಳಿಗೆ ಹತ್ತಿ ಮತ್ತು ಹಣ್ಣು ಬೆಳೆಗಳ ಬೀಜೋತ್ಪಾದನೆಯನ್ನು ಮಾಡಲು ರೈತರಿಗೆ ಬೀಜಗಳನ್ನು ನೀಡುವ ಸಂದರ್ಭದಲ್ಲಿ ರೈತರಿಂದ ಕಂಪನಿಯವರು ಯಾವುದೇ ಕರರಾಗಲೀ ಕಾನೂನುತ್ತಾಕವಾದ ಅರ್ಗಿಮೆಂಟ್ ಮಾಡಿಕೊಳ್ಳತ್ತಿಲ್ಲವೆಂದು ಮಾಹಿತಿ ನೀಡಿದರು.ಈ ವಿಷಯ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಶ್ರೀಘ್ರವೇ ರೈತರ ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ತಹಸೀಲ್ದಾರ್ ಆನಂದ್ ಕುಮಾರ್, ತಾಲ್ಲೂಕು ಕಾರ್ಯನಿರ್ವಾಹಣಾ ಅಧಿಕಾರಿ ಹರೀಶ್, ಕಂದಾಯ ಇಲಾಖಾ ಅಭಿಕಾರಿಗಳು ಸೇರಿದಂತೆ ವಿಭಿಧ ಇಲಾಖೆಯ ಅಧಿಕಾರಿಗಳು, ರೈತರು, ಜನಸಾಮಾನ್ಯರು ಉಪಸ್ಥಿತರಿದ್ದರು.