ಸಾರಾಂಶ
ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಶನಿವಾರ ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಕನ್ನಡಪ್ರಭವಾರ್ತೆ ಚಿತ್ರದುರ್ಗ
ದರ್ಶನ್ ಗ್ಯಾಂಗ್ನಿಂದ ಹತ್ಯೆಗೊಳಗಾದ ರೇಣುಕಾಸ್ವಾಮಿ ಕುಟುಂಬಕ್ಕೆ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಸಾಂತ್ವನ ಹೇಳಿದ್ದಾರೆ.ಶನಿವಾರ ಇಲ್ಲಿನ ವಿಆರ್ಎಸ್ ಲೇಔಟ್ನಲ್ಲಿರುವ ರೇಣುಕಾಸ್ವಾಮಿ ನಿವಾಸಕ್ಕೆ ತೆರಳಿದ ವೀರೇಂದ್ರ ಪಪ್ಪಿ ನಿಮ್ಮ ನೋವಿನ ಜೊತೆ ನಾವಿದ್ದೇವೆ. ಎದೆ ಗುಂದುವ ಅಗತ್ಯವಿಲ್ಲ. ಉತ್ತಮ ರೀತಿಯಲ್ಲಿ ತನಿಖೆ ನಡೆಯುತ್ತಿದೆ ಎಂದು ರೇಣುಕಾಸ್ವಾಮಿ ಪೋಷಕರಿಗೆ ಭರವಸೆ ನೀಡಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ಹಾಗೂ ಅದು ಸಾಗುತ್ತಿರುವ ಹಾದಿಯ ಬಗ್ಗೆ ಸರ್ಕಾರದ ಮೇಲೆ ರೇಣುಕಾಸ್ವಾಮಿ ಕುಟುಂಬಕ್ಕೆ ನಂಬಿಕೆ ಇದೆ. ತನಿಖೆಯ ಇಂಚಿಂಚು ಮಾಹಿತಿ ಅವರ ಕುಟುಂಬ ತಿಳಿದುಕೊಳ್ಳುತ್ತಿದೆ ಎಂದರು.
ಈ ನೆಲದ ಕಾನೂನು ಎಲ್ಲರಿಗೂ ಒಂದೇ ತೆರನಾಗಿರುತ್ತದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ. ಎಷ್ಟೇ ದೊಡ್ಡ ನಟರಾಗಿರಬಹುದು, ಎಷ್ಟೇ ದೊಡ್ಡವರಿರಬಹುದು ಒಬ್ಬರನ್ನು ಕೊಲ್ಲುವ ಹಕ್ಕು ಇನ್ನೊಬ್ಬರಿಗೆ ಇರೋದಿಲ್ಲ. 17ರಂದು ರೇಣುಕಾಸ್ವಾಮಿ ಅವರ ಕಾರ್ಯ ಮುಗಿದ ಮೇಲೆ ಸಿಎಂ ಬಳಿ ಕುಟುಂಬಸ್ಥರನ್ನು ಕರೆದುಕೊಂಡು ಹೋಗಿ ಸರ್ಕಾರಿ ಉದ್ಯೋಗದ ಬಗ್ಗೆ ಪ್ರಸ್ತಾಪಿಸುವುದಾಗಿ ವೀರೇಂದ್ರ ಪಪ್ಪಿ ಹೇಳಿದರು.ಇದೇ ಸಂದರ್ಭದಲ್ಲಿ ಎರಡು ಲಕ್ಷ ರುಪಾಯಿ ನೆರವನ್ನು ಶಾಸಕರು ಕುಟುಂಬಕ್ಕೆ ನೀಡಿದರು.