ಸಾರಾಂಶ
ದೇವಲಾಪೂರ (ತಾ.ಬೈಲಹೊಂಗಲ) : ಗ್ರಾಮೀಣ ಬಡ ಕುಟುಂಬಗಳ ಮಹತ್ವಾಕಾಂಕ್ಷಿ ಯೋಜನೆಯಾದ ಮನರೇಗಾ ಯೋಜನೆಯು ದುಡಿಯುವ ಕೈಗಳಿಗೆ ಕೆಲಸವನ್ನು ಕಳೆದ 25 ವರ್ಷಗಳಿಂದ ನೀಡುತ್ತ ಬಂದಿದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಘೋರ್ಪಡೆ ಹೇಳಿದರು.
ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ ವಿಶೇಷ ಜಾಬ್ ಕಾರ್ಡ್ ನೀಡುವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಅರ್ಹ ಕುಟುಂಬಕ್ಕೆ ಒಂದು ಜಾಬ್ ಕಾರ್ಡ್ದಿಂದ 100 ದಿವಸ್ ಮಾನವ ದಿನಗಳನ್ನು ಪೂರೈಸುತ್ತಿದೆ. ಇದೇ ಏ.1 ರಿಂದ ಕೇಂದ್ರ ಸರ್ಕಾರವು ಪ್ರತಿ ಮಾನವ ದಿನಕ್ಕೆ ₹370 ಎಂದು ನಿಗದಿಪಡಿಸಿದೆ.
ಅದರಿಂದ ಪ್ರತಿ 100 ದಿನಕ್ಕೆ ₹37,000 ಗಳನ್ನು ಪಡೆಯುವುದರ ಮೂಲಕ ಆರ್ಥಿಕವಾಗಿ ಸದೃಢತೆಯನ್ನು ಪ್ರತಿ ಕುಟುಂಬದಲ್ಲಿ ಕಾಣಬಹುದು ಎಂದು ತಿಳಿಸಿದರು. ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ವಿಜಯ ಪಾಟೀಲ ಮಾತನಾಡಿ, ಏ.15 ರೊಳಗಾಗಿ ಎಲ್ಲ ವಿಶೇಷ ಚೇತನರಿಗೆ ನರೇಗಾ ಯೋಜನೆಯಲ್ಲಿ ಜಾಬ್ ಕಾರ್ಡ್ ನೀಡುವ ಮೂಲಕ ವಿಕಲಚೇತನರಿಗೆ ಭದ್ರತೆ ಒದಗಿಸಲಾಗುತ್ತಿದೆ.
ವಿಕಲಚೇತನರಿಗೆ ಹಾಗೂ ಕುಟುಂಬದೊಂದಿಗೆ ಜಂಟಿಯಾಗಿರುವವರನ್ನು ಬೇರ್ಪಡಿಸಿ ಅವರಿಗೆಲ್ಲರಿಗೂ ವಿಶೇಷ ಜಾಬ್ ಕಾರ್ಡ್ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.ಗ್ರಾಮ ಪಂಚಾಯತಿ ಉಪಾಧ್ಯಕ್ಷ ವೀರಭದ್ರ ತಳವಾರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ದೊಡ್ಡನಾಯ್ಕ ರಾಯನಾಯ್ಕರ, ತಾಪಂ ಐಇಸಿ ಸಂಯೋಜಕ ಎಸ್.ವಿ.ಹಿರೇಮಠ ಹಾಗೂ ವಿಕಲಚೇತನರ ಪುನರ್ವಸತಿ ಕಾರ್ಯಕರ್ತ ಅಶೋಕ ಚಂದ್ರಪ್ಪ ಮೂಲಿಮನಿ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ, ವಿಕಲಚೇತನರು ಹಾಜರಿದ್ದರು.