ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಮೊಬೈಲ್ ಫೋಟೋಗ್ರಾಫಿ ಪರಿಣಾಮ ವೃತ್ತಿ ಪರ ಫೋಟೋಗ್ರಾಫರ್ ಹಾಗೂ ವಿಡಿಯೋಗ್ರಾಫರ್ ಗಳ ಜೀವನ ದುಸ್ತರವಾಗಿದ್ದು, ಭವಿಷ್ಯದ ದಿನಗಳ ಚಿಂತೆ ಇವರನ್ನು ಕಾಡುತ್ತಿದೆ ಎಂದು ಕೊಡಗು ಜಿಲ್ಲಾ ಛಾಯಾಗ್ರಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆವರ್ತಿ ಮಹದೇವಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.ಕೊಡಗು ಪತ್ರಕರ್ತರ ಸಂಘ ಹಾಗೂ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿಂದ ಕುಶಾಲನಗರದ ಗೌಡ ಸಮಾಜದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪತ್ರಿಕಾ ವೃತ್ತಿಯಲ್ಲಿ ಪತ್ರಕರ್ತರು ಹಾಗೂ ಛಾಯಾಗ್ರಾಹಕರು ಒಂದೇ ನಾಣ್ಯದ ಎರಡು ಮುಖ ವೆಂದು ಬಣ್ಣಿಸಿದ ಅವರು, ಈ ಇಬ್ಬರ ಸಂಬಂಧ ಬಿಡಿಸಲಾಗದ ಅನುಬಂಧ ಎಂದು ಅವರು ಬಣ್ಣಿಸಿದರು.ತಮ್ಮ ಛಾಯಾಗ್ರಾಹಕ ವೃತ್ತಿ ಜೀವನದ ಅನುಭವವನ್ನು ವಿವರಿಸಿದ ಅವರು ನಮ್ಮ ಜೀವನದಲ್ಲಿ ಮಾನವೀಯತೆ ಗುಣಗಳನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡಿಕೊಡಬೇಕೆಂದು ಸಲಹೆ ನೀಡಿದರು.ಕೊಡಗು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಪತ್ರಕರ್ತರಷ್ಟೇ ಜವಾಬ್ದಾರಿ ಛಾಯಾಚಿತ್ರಗಾಹಕರಿಗಿದೆ. ಒಬ್ಬ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುವ ಶಕ್ತಿ ಛಾಯಾಚಿತ್ರಕ್ಕಿದೆ. ಯಾವುದೇ ಛಾಯಾಚಿತ್ರವು ಸಂಬಂಧಿಸಿದ ವಿಷಯಕ್ಕೆ ಪೂರಕವಾಗಿರಬೇಕೇ ಹೊರತು ಮಾರಕವಾಗಿರಬಾರದು ಎಂದು ಹೇಳಿದರು.ಭವಿಷ್ಯ ತೂಗುಯ್ಯಾಲೆಯಲ್ಲಿದೆ:ದತ್ತಿ ಪ್ರಶಸ್ತಿ ದಾನಿಗಳಾದ ಪತ್ರಕರ್ತರ ಸಂಘದ ಗೌರವ ಸಲಹೆಗಾರ ಬಿ.ಜಿ. ಅನಂತಶಯನ ಮಾತನಾಡಿ, ಬದಲಾದ ಆಧುನಿಕ ಯುಗದಲ್ಲಿ ಆರ್ಟಿಫಿಷಲ್ ಇಂಟಲಿಜೆನ್ಸ್ ಯಿಂದಾಗಿ ಫೋಟೋ ಹಾಗೂ ವಿಡಿಯೋಗ್ರಫಿ ಕ್ಷೇತ್ರ ಸಾಕಷ್ಟು ಕಮರಿ ಹೋಗುತ್ತಿದೆ. ಇದರಿಂದ ಛಾಯಾಗ್ರಾಹಕರ ಹಾಗೂ ವಿಡಿಯೋಚಿತ್ರಗಾರರ ಭವಿಷ್ಯ ತೂಗುಯ್ಯಾಲೆಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.ಉದ್ಯಮಿ ಹೆನ್ರಿಕ್ ಮಾರ್ಟಿನ್ ಮಾತನಾಡಿ 2000ರ ಆಸುಪಾಸಿನಲ್ಲಿ ಒಂದು ಫೋಟೊ ಬೇಕಾದರೆ ಹತ್ತು ದಿನ ಬೇಕಾಗಿತ್ತು. ಆದರೆ ಈಗ ಕೆಲವೇ ಕ್ಷಣಗಳಲ್ಲಿ ಛಾಯಾಚಿತ್ರ ಲಭ್ಯವಾಗುತ್ತಿದೆ. ಬದಲಾದ ತಂತ್ರಜ್ಞಾನದ ಪ್ರಭಾವ ಇದಾಗಿದೆ ಎಂದರಲ್ಲದೆ, ಛಾಯಾಚಿತ್ರದ ನವ ತಾಂತ್ರಿಕತೆಯಿಂದ ಒಳಿತು ಹಾಗೂ ಕೆಡುಕುಗಳಿದೆ ಎಂದರು.ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ಮಾತನಾಡಿ ಛಾಯಾಗ್ರಹಣ ಹಾಗೂ ವಿಡಿಯೋಗ್ರಹಕರು ಯಾವುದೇ ಸಭೆ ಸಮಾರಂಭ ಸೇರಿದಂತೆ ಹಲವು ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಾರೆ. ಅವರಿಂದಾಗಿ ನಮ್ಮ ಪದ್ದತಿ ಪರಂಪರೆ ಆಚರಣೆಗಳು ಮುಂದುವರಿದು ಬರುತ್ತಿದೆ ಎಂದು ಹೇಳಿದರು.ಸಂಗಮವೇ ವಿಶ್ವ ಛಾಯಾಗ್ರಹಣ ಕಾರ್ಯಕ್ರಮ:
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಪ್ರಾಸ್ತಾವಿಕವಾಗಿ ಮಾತನಾಡಿ ಒಂದು ಚಿತ್ರ ಸಾವಿರ ಪದಗಳಿಗೆ ಸಮ. ಛಾಯಾಚಿತ್ರವಿಲ್ಲದ ಸುದ್ದಿಗಳು ಅಪೂರ್ಣವಾಗಿರುತ್ತದೆ ಎಂದರು. ಕೆಲವರಿಗೆ ಫೋಟೋ ತೆಗೆಸಿಕೊಳ್ಳುವುದು ಖುಷಿ ಯಾದರೆ ಮತ್ತೆ ಕೆಲವರಿಗೆ ಫೋಟೋ ತೆಗೆಯುವುದೇ ಖುಷಿ. ಇವರಿಬ್ಬರ ಸಂಗಮವೇ ಇಂದಿನ ವಿಶ್ವ ಛಾಯಾಗ್ರಹಣ ಕಾರ್ಯಕ್ರಮ ಎಂದರು.ಬಿಜೆಪಿ ಯುವ ಮುಖಂಡ ಹೇರೂರು ಚಂದ್ರಶೇಖರ್, ಗುಡ್ಡೆಹೊಸೂರು ಪಂಚಾಯಿತಿ ಯೂತ್ ಸಂಘಟನೆ ಎಂ.ಎಸ್. ರಂಜಿತ್, ಗುಡ್ಡೆಹೊಸೂರು ಗ್ರಾಪಂ ಸದಸ್ಯ ನಿತ್ಯಾನಂದ ಕುಡೆಕಲ್ ಮಾತನಾಡಿದರು.ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಅನಂತಶಯನ ಅವರು ತಮ್ಮ ಪುತ್ರಿ ಡಾ. ಅನುಶ್ರೀ ಅವರ ಹ್ಯಾಪಿ ಟೀತ್ ಕ್ಲೀನಿಕ್ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ಛಾಯಾಚಿತ್ರ ಸ್ಪರ್ಧೆಯ ವಿಜೇತರಾದ ವಿಘ್ನೇಶ್ ಭೂತನಕಾಡು, ಕೊಡಗು ಪತ್ರಕರ್ತರ ಸಂಘದಿಂದ ಆಯೋಜಿಸಲಾದ ಸುದ್ದಿ ಚಿತ್ರ ಸ್ಪರ್ಧೆಯ ವಿಜೇತರಾದ ಕೆ. ಎಸ್. ಅನಿಲ್, ಗುಡ್ಡೆ ಮನೆ ವಿಶುಕುಮಾರ್, ವಿಡಿಯೋಗ್ರಫಿಯಲ್ಲಿ ಮಹಮ್ಮದ್ ಹನೀಫ್, ಉಷಾಪ್ರೀತಂ, ಸಾರ್ವಜನಿಕರಿಗೆ ಆಯೋಜಿತಗೊಂಡಿದ್ದ ರೀಲ್ಸ್ ಸ್ಪರ್ಧೆಯ ವಿಜೇತರಾದ ಭಾಗೀರಥಿ ಹುಲಿತಾಳ, ರಮ್ಯಾ ಮಾಚಯ್ಯ ಅವರಿಗೆ ಬಹುಮಾನ ವಿತರಿಸಲಾಯಿತು.ಜಿಲ್ಲಾ ಪತ್ರಕರ್ತರ ಸಂಘದಿಂದ ಛಾಯಾಗ್ರಾಹಕರಾದ ಮಹಮ್ಮದ್ ಹನೀಫ್ ಹಾಗೂ ಸಂದೀಪ್ ಅವರನ್ನು ಸನ್ಮಾನಿಸಲಾಯಿತು.ಸನ್ಮಾನ, ಗೌರವ:ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿಂದ ಪುಲಿಯಂಡ ರಾಮ್ ದೇವಯ್ಯ ಜ್ಞಾನಗಂಗಾ ಶಾಲೆಯ ಹೆಸರಿನಲ್ಲಿ ಸಂಘದಲ್ಲಿ ಹಿರಿಯ ಪತ್ರಕರ್ತರಿಗೆ ಸ್ಥಾಪಿಸಿರುವ ದತ್ತಿ ಪ್ರಶಸ್ತಿಯನ್ನು ಸುಂಟಿಕೊಪ್ಪದ ಹಿರಿಯ ವರದಿಗಾರ ಕೆ.ಎಚ್.ಶಿವಣ್ಣ ಅವರಿಗೆ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಂಘದ ನವೀನ್ ಚಿನ್ನಪ್ಪ ಅವರನ್ನು ವೀಡಿಯೋಗ್ರಫಿ ಕ್ಷೇತ್ರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಸಂಘದ ನಿರ್ದೇಶಕರಾದ ಗುಡ್ಡೆಮನೆ ವಿಶ್ವಕುಮಾರ್ ಅವರಿಂದ ಛಾಯಾಚಿತ್ರಗಳ ಆಕರ್ಷಕ ಪ್ರದರ್ಶನ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಸಿಲ್ವೆಸ್ಟರ್ ಪ್ರಾರ್ಥಿಸಿದರೆ, ವಿಘ್ನೇಶ್ ಭೂತನ ಕಾಡು ಸ್ವಾಗತಿಸಿ, ಕೆ.ತಿಮ್ಮಪ್ಪ ನಿರೂಪಿಸಿ, ನವೀನ್ ಚಿನ್ನಪ್ಪ ವಂದಿಸಿದರು.