ಸಾರಾಂಶ
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಕೈಗಾರಿಕಾ ಪ್ರಕೋಷ್ಠದ ಸಮಾವೇಶ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಮಂಗಳೂರು
ಸುಭದ್ರ, ಬಲಿಷ್ಠ ಭಾರತವನ್ನು ಕಟ್ಟುವಲ್ಲಿ ಎಲ್ಲ ಭಾರತೀಯರ ಮನಸ್ಸುಗಳನ್ನು ಒಂದು ಗೂಡಿಸಿದವರು ನಮ್ಮ ಪ್ರಧಾನಿ ನರೇಂದ್ರ ಮೋದಿ. ದೇಶದ ಬೊಕ್ಕಸದಿಂದ ಒಂದೇ ಒಂದು ರು. ಕೂಡ ದುರ್ಬಳಕೆ ಆಗದಂತೆ ತಡೆದು ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಿದವರು ಪ್ರಧಾನಿ ನರೇಂದ್ರ ಮೋದಿ. ಇಂತಹ ನಾಯಕನನ್ನು ನಾವು ಉಳಿಸಿಕೊಳ್ಳಬೇಕಾದ್ದು ಪ್ರತಿಯೊಬ್ಬ ದೇಶಪ್ರೇಮಿ ಭಾರತೀಯನ ಧರ್ಮ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿ. ಭಾನುಪ್ರಕಾಶ್ ಹೇಳಿದರು.ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಆಯೋಜಿಸಲಾದ ಕೈಗಾರಿಕಾ ಪ್ರಕೋಷ್ಠದ ಸಮಾವೇಶದಲ್ಲಿ ಅವರು ಮಾತನಾಡಿದರು.2014ರಿಂದ 2024ರ ವರೆಗಿನ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಭಾರತದ ಒಳಗೆ ಹಾಗೂ ಹೊರಗೆ ಆದ ಪರಿವರ್ತನೆಗಳನ್ನು ಗಮನಿಸಿ. ಭಾರತದ ಒಳಗೆ ದೇಶ ಮತ್ತಷ್ಟು ಬಲಿಷ್ಠವಾಗಿದ್ದರೆ ವಿದೇಶಗಳಲ್ಲಿ ಭಾರತದ ಪ್ರತಿಷ್ಠೆ ಮತ್ತಷ್ಟು ಹೆಚ್ಚಾಗಿದೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಗೌರವ ಹೆಚ್ಚಾಗಿದೆ ಎಂದು ಭಾನುಪ್ರಕಾಶ್ ಹೇಳಿದರು.
ಇದೇ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ಶಿಕಾರಿಪುರ ಕೃಷ್ಣಮೂರ್ತಿ ಪಕ್ಷದ ಕಾರ್ಯಕರ್ತರಿಗೆ ಕೆಲವು ಮಾರ್ಗದರ್ಶನಗಳನ್ನು ನೀಡಿದರು.ಪಕ್ಷದ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಪ್ರಕೋಷ್ಠಗಳ ಸಹ ಸಂಚಾಲಕ ಪ್ರಸನ್ನ ದರ್ಬೆ, ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ, ಕೈಗಾರಿಕಾ ಪ್ರಕೋಷ್ಠದ ಸಂಚಾಲಕ ಸತೀಶ್ ಕರ್ಕೇರ ಇದ್ದರು.
-----------------