ಸಾರಾಂಶ
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 11 ವರ್ಷದಲ್ಲಿ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ಮೂಲಕ ಜಗತ್ತಿನ 4ನೇ ಆರ್ಥಿಕ ಶಕ್ತಿಯನ್ನಾಗಿಸಿದ್ದಾರೆ. 2027-28ರ ಹೊತ್ತಿಗೆ ಭಾರತ ಜಗತ್ತಿನ 3ನೇ ಅತೀ ದೊಡ್ಡ ಆರ್ಥಿಕ ಬಲಾಢ್ಯ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದ ಶ್ರೀನಿವಾಸ್ ಗಾರ್ಡನ್ ಸಭಾ ಭವನದಲ್ಲಿ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ವತಿಯಿಂದ ಶನಿವಾರ ಸಂಜೆ ನಡೆದ ವಿಕಸಿತ ಭಾರತ ಸಂಕಲ್ಪ ಸಭೆ ಉದ್ಘಾಟಿಸಿ ಮಾತನಾಡಿದರು.ದೇಶದ ರಕ್ಷಣೆ, ಅಭಿವೃದ್ಧಿ, ವಿಮಾನಯಾನ, ಮೊಬೈಲ್ ಉತ್ಪಾದನೆ, ಇಂಟರ್ನೆಟ್, ಆರೋಗ್ಯ ಕ್ಷೇತ್ರ, ಕಲ್ಲಿದ್ದಲು ಗಣಿಕಾರಿಗೆ ಹಾಗೂ ಮೇಕ್ ಇನ್ ಇಂಡಿಯಾ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಭಾರತ ಅಭಿವೃದ್ಧಿ ಸಾಧಿಸುತ್ತಿದೆ. ಜತೆಗೆ ನಮ್ಮ ದೇಶದಲ್ಲಿ ತಯಾರಾಗುತ್ತಿರುವ ವಸ್ತುಗಳು ವಿದೇಶಗಳಿಗೆ ರಪ್ತಾಗುವಂತೆ ಮಾಡಿದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ. ಹಿಂದೆ ಯಾವ ಭಾರತವನ್ನು ಹೀನಾಯವಾಗಿ ಕಾಣುತ್ತಿದ್ದರೊ ಅವರೇ ಇಂದು ಭಾರತದ ಕೈ ಒಡ್ಡುವಂತೆ ಮಾಡಿದ್ದಾರೆ. 2047ರಲ್ಲಿ ಭಾರತ ವಿಕಸಿತ ಹಾಗೂ ಅಭಿವೃದ್ಧಿ ಹೊಂದಿದ ಭಾರತ ಆಗಬೇಕು ಎಂಬುದು ಮೋದಿಯವರ ಸಂಕಲ್ಪವಾಗಿದೆ ಎಂದರು.
ದೇಶಕ್ಕೆ ಸ್ವಾತಂತ್ರ ಬಂದ ನಂತರದ ಆರಂಭಿಕ ಅವಧಿಯಲ್ಲಿ ಕೇವಲ ಭಾವನಾತ್ಮಕ ವಿಷಯದ ಮೇಲೆ ಮಾತ್ರ ಚುನಾವಣೆ ನಡೆದಿತ್ತು. ಅಭಿವೃದ್ಧಿ ಹಾಗೂ ಸಾಧನೆಗಳ ಮಾತೆ ಆಗ ಇರಲಿಲ್ಲ. ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಸಮಗ್ರ ಅಭಿವೃದ್ಧಿ ಹಾಗೂ ಉತ್ತಮ ಆಡಳಿತದ ಮೂಲಕ ಮಹಾನ್ ಸಾಧನೆ ಮಾಡಿದೆ ಎಂದರು.ಭಾರತದಲ್ಲಿ ರಾಮನ ಅಸ್ತಿತ್ವವೇ ಇಲ್ಲ ಎಂದು ಹೇಳಿದವರು ಇಂದು ವೋಟ್ ಬ್ಯಾಂಕ್ಗಾಗಿ ಅಯೋಧ್ಯೆ ಶ್ರೀರಾಮ ಮಂದಿರದ ಮುಂದೆ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಈಗ ಅವರಿಗೆ ರಾಮನ ಶಕ್ತಿ ಏನೆಂಬುದು ಗೊತ್ತಾದಂತಾಗಿದೆ ಎಂದು ಕುಟುಕಿದರು.
ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಅಭಿವೃದ್ಧಿಯ ಪರ್ವ ಆರಂಭಿಸಿದಂತೆ, ಧಾರವಾಡ ಜಿಲ್ಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ ಎಂದು ಶ್ಲಾಘಿಸಿದರು.ಶಾಸಕ ಮಹೇಶ ಟೆಂಗಿನಕಾಯಿ, ಬಿಜೆಪಿ ಮುಖಂಡರಾದ ರೂಪಾ ಅಯ್ಯರ ಮಾತನಾಡಿದರು. ಮೇಯರ್ ರಾಮಪ್ಪ ಬಡಿಗೇರ, ಉಪಮೇಯರ್ ದುರ್ಗಮ್ಮ ಬಿಜವಾಡ, ಮುಖಂಡರಾದ ಲಿಂಗರಾಜ ಪಾಟೀಲ, ತಿಪ್ಪಣ್ಣ ಮಜ್ಜಗಿ, ಉದ್ಯಮಿ ಎಚ್.ಎನ್. ನಂದಕುಮಾರ, ಡಾ. ವಿ.ಎಸ್.ವಿ. ಪ್ರಸಾದ, ರಮೇಶ ಬಾನಾ, ಮಾಜಿ ಶಾಸಕ ಅಶೋಕ ಕಾಟವೆ, ವೆಂಕಟೇಶ ಕಾಟವೆ, ಪಿ.ಎನ್. ಬಿರಾದಾರ, ಕೆಎಸ್ಸಿಎ ಅಧ್ಯಕ್ಷ ಎಸ್.ವಿ. ಸಂಶಿಮಠ, ಗೋವಿಂದಪ್ಪ, ಅಕ್ಷಯಕುಮಾರ ಸಿಂಘಿ, ಅಣ್ಣಪ್ಪ ಬಾಗಲಕೋಟ, ಶಿವಾನಂದ ಗುಂಜಾಳ, ದತ್ತಮೂರ್ತಿ ಕುಲಕರ್ಣಿ, ಚನ್ನು ಹೊಸಮನಿ, ಮಹಾದೇವ ಕರಮರಿ, ನಾರಾಯಣಸಾ ನಿರಂಜನ ಇದ್ದರು.