ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದು ಖಚಿತ: ಶೆಟ್ಟರ್‌

| Published : Jun 03 2024, 01:16 AM IST / Updated: Jun 03 2024, 08:06 AM IST

ಸಾರಾಂಶ

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹದಿಂದ ಸರ್ಕಾರ ಪತನವಾಗಲಿದೆ. ಫಲಿತಾಂಶದ ಬಳಿಕ ಆಂತರಿಕ ಕಲಹ ಇನ್ನಷ್ಟು ಹೆಚ್ಚಾಗಲಿದೆ. ಸಿಎಂ, ಡಿಸಿಎಂ ನಡುವಿನ ಕಲಹ ಕೂಡ ಹೊರಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಹುಬ್ಬಳ್ಳಿ: ಎಲ್ಲ ಎಕ್ಸಿಟ್‌ ಪೋಲ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸ್ಪಷ್ಟ ಬಹುಮತ ಮುನ್ಸೂಚನೆ ಸಿಕ್ಕಿದೆ. ನರೇಂದ್ರ ಮೋದಿ ಮೂರನೆಯ ಬಾರಿ ಪ್ರಧಾನಿ ಆಗಬೇಕು ಎಂಬ ಆಶಯದಿಂದ ಜನರು ಮತ ಚಲಾಯಿಸಿದ್ದಾರೆ. ನಾನು ಕೂಡ ಅತಿ ಹೆಚ್ಚು ಅಂತರದಿಂದ ಬೆಳಗಾವಿ ಕ್ಷೇತ್ರದಿಂದ ಗೆಲುವು ಸಾಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಮೈತ್ರಿಕೂಟ 375 ಕ್ಷೇತ್ರಗಳಲ್ಲಾದರೂ ಗೆಲ್ಲಬಹುದು. 400ಕ್ಕೂ ಅಧಿಕ ಸ್ಥಾನಗಳಲ್ಲಾದರೂ ಗೆಲ್ಲಬಹುದು. ಆದರೆ ಅಧಿಕಾರದ ಗದ್ದುಗೆಯನ್ನು ಮತ್ತೊಮ್ಮೆ ಏರುವುದು ಖಚಿತ. ಎಕ್ಸಿಟ್‌ ಪೋಲ್‌ ನಡೆಸಿದ ಎಲ್ಲ ಏಜೆನ್ಸಿಗಳ ಫಲಿತಾಂಶ ಶೇ. 99ರಷ್ಟು ಒಂದೇ ರೀತಿ ಇದೆ ಎಂದರು.

ಸರ್ಕಾರ ಪತನ: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹದಿಂದ ಸರ್ಕಾರ ಪತನವಾಗಲಿದೆ ಎಂದು ಜಗದೀಶ ಶೆಟ್ಟರ್‌ ಹೇಳಿದರು.

ಫಲಿತಾಂಶದ ಬಳಿಕ ಆಂತರಿಕ ಕಲಹ ಇನ್ನಷ್ಟು ಹೆಚ್ಚಾಗಲಿದೆ. ಸಿಎಂ, ಡಿಸಿಎಂ ನಡುವಿನ ಕಲಹ ಕೂಡ ಹೊರಬರಲಿದೆ. ಕಾಂಗ್ರೆಸ್‌ನವರ ಅಸಮಾಧಾನದಿಂದ ಸರ್ಕಾರ ಪತನವಾಗಲಿದೆ. ಬಿಜೆಪಿ ಆಪರೇಶನ್ ಕಮಲ ಮಾಡುವ ಅವಶ್ಯಕತೆ ಇಲ್ಲ ಎಂದರು.

ತಮ್ಮ ವಿರುದ್ಧ ಯಾಗ ಮಾಡಿಸುತ್ತಿದ್ದಾರೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾಗ ಮಾಡಿಸಲು ಡಿ.ಕೆ. ಶಿವಕುಮಾರ ಎಕ್ಸ್‌ಪರ್ಟ್‌. ಕೇರಳ ಅಲ್ಲ ಭೂಗತದಲ್ಲೂ ಹೋಗಿ ಯಾಗ ಮಾಡಿಸುವ ತಾಕತ್ತು ಡಿ.ಕೆ. ಶಿವಕುಮಾರ ಅವರಿಗೆ ಇದೆ ಎಂದರು.