ಹ್ಯಾಟ್ರಿಕ್‌ ಪ್ರಧಾನಿ ಆಗಲಿರುವ ಮೋದಿ: ಶ್ರೀರಾಮುಲು

| Published : Apr 06 2024, 12:55 AM IST

ಹ್ಯಾಟ್ರಿಕ್‌ ಪ್ರಧಾನಿ ಆಗಲಿರುವ ಮೋದಿ: ಶ್ರೀರಾಮುಲು
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ 140 ಕೋಟಿ ಜನರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಲಿ ಎಂದು ಹಾರೈಸುತ್ತಿದ್ದಾರೆ.

ಮರಿಯಮ್ಮನಹಳ್ಳಿ: ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವ ಮೂಲಕ ಹ್ಯಾಟ್ರಿಕ್‌ ಪ್ರಧಾನಿಯಾಗಲಿದ್ದಾರೆ ಎಂದು ಬಿ.ಶ್ರೀರಾಮುಲು ಹೇಳಿದರು.

ಇಲ್ಲಿನ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀಆಂಜನೇಯಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪರವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ದೇಶದ 140 ಕೋಟಿ ಜನರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಲಿ ಎಂದು ಹಾರೈಸುತ್ತಿದ್ದಾರೆ. ಈ ಮೂಲಕ ಮೋದಿ ಹ್ಯಾಟ್ರಿಕ್‌ ಪ್ರಧಾನ ಮಂತ್ರಿಯಾಗಬೇಕು. ಜೊತೆಗೆ ದೇಶದಲ್ಲಿ 400 ಸ್ಥಾನಗಳು ಬಿಜೆಪಿಗೆ ಬರಬೇಕು. ಈ 400ರ ಸ್ಥಾನಗಳಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಲೋಕಸಭಾ ಕ್ಷೇತ್ರದಿಂದ ಶ್ರೀರಾಮುಲು ಬಿಜೆಪಿಯಿಂದ ಗೆಲವು ಪಡೆಯಬೇಕು ಎಂದರು.

ನಾನು 6 ಬಾರಿ ಶಾಸಕನಾಗಿದ್ದೇನೆ. ಒಂದು ಬಾರಿ ಲೋಕಸಭಾ ಸದಸ್ಯನಾಗಿದ್ದೆ. ಈಗ ಎರಡನೇ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನಾಲ್ಕು ಬಾರಿ ಸಚಿವನಾಗಿದ್ದೇನೆ. 35 ವರ್ಷಗಳ ಕಾಲ ಸತತ ಅನೇಕ ಹೋರಾಟಗಳನ್ನು ಮಾಡುತ್ತಾ, ಅಧಿಕಾರದಲ್ಲಿರುವ ಅನೇಕ ಜನಪರ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಈ ಭಾಗವನ್ನು ಸಮಗ್ರ ಅಭಿವೃದ್ಧಿ ಪಡಿಸುವಂತ ಕೆಲಸಗಳನ್ನು ಮಾಡಿದ್ದೇನೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತಾಗ ಅನೇಕರು ಬೇಸರ ಪಟ್ಟಿದ್ದರು. ಶ್ರೀರಾಮುಲು ಹಿಂದುಳಿದ ಜನಾಂಗದಿಂದ ಬಂದ ನಾಯಕ ಅಭಿವೃದ್ಧಿ ರಾಜಕಾರಣದಲ್ಲಿ ಶ್ರೀರಾಮುಲು ಕಳೆದು ಹೋಗಬಾರದು. ಶ್ರೀರಾಮುಲು ಅಂಥವರು ರಾಜಕಾರಣದಲ್ಲಿ ಇದ್ದರೆ ಜನರಿಗೆ ಸಹಾಯವಾಗುತ್ತದೆ. ಶ್ರೀರಾಮುಲು ಸೋತು ಮನೆಯಲ್ಲಿರಬಾರದು ಎಂದು ಪುನಃ ಅವರನ್ನು ಚಾಲ್ತಿಯಲ್ಲಿ ತರಬೇಕು ಎನ್ನುವ ದೃಷ್ಟಿಯಿಂದ ಈಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತಹ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಬಿಜೆಪಿಗೆ ಮತ ನೀಡುವ ಮೂಲಕ ನನ್ನನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಸರ್ಕಾರ ಬಂದರೆ ಸಾಕು. ತುಂಗಭದ್ರಾ ಜಲಾಶಯ ಭತ್ತಿ ಹೋಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದರೆ ಸಾಕು ಬರ, ಬರ ಎಂದು ಬರಗಾಲ ಆವರಿಸುತ್ತದೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲಿ ನೋಡಿದರೂ ನೀರು ತುಂಬಿರುತ್ತಿತ್ತು. ಮುಂದಿನ ಒಳ್ಳೆಯ ದಿನಗಳಿಗಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಅವರು ಹೇಳಿದರು.

ಶಾಸಕ ಕೆ. ನೇಮಿರಾಜ್‌ ನಾಯ್ಕ್‌ ಮಾತನಾಡಿ, ಶ್ರೀರಾಮುಲು ಗೆಲುವಿಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಕನಿಷ್ಠ 35 ಸಾವಿರಕ್ಕೂ ಅಧಿಕ ಮತಗಳ ಲೀಡ್‌ ಕೊಟ್ಟು ಗೆಲ್ಲಿಸಿಕೊಡುತ್ತೇವೆ ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯ ವೈ. ಎಂ.ಸತೀಶ್‌ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಜೆಡಿಎಸ್‌ ತಾಲೂಕು ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಸ್‌. ಕೃಷ್ಣನಾಯ್ಕ್‌,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಲಹುಣಸಿ ರಾಮಣ್ಣ, ಬಿಜೆಪಿ ಮಂಡಲ ಪ್ರಕಾಶ್‌ ಬೆಣಕಲ್‌ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.