ಇಸ್ರೇಲ್‌ನಲ್ಲಿ 12 ಸಾವಿರಕ್ಕೂ ಅಧಿಕ ಕರಾವಳಿ ಕನ್ನಡಿಗರು!

| Published : Oct 09 2023, 12:46 AM IST

ಇಸ್ರೇಲ್‌ನಲ್ಲಿ 12 ಸಾವಿರಕ್ಕೂ ಅಧಿಕ ಕರಾವಳಿ ಕನ್ನಡಿಗರು!
Share this Article
  • FB
  • TW
  • Linkdin
  • Email

ಸಾರಾಂಶ

ಇಸ್ರೇಲ್ಲ್‌ನಲ್ಲಿರುವ ಕರಾವಳಿ ಕನ್ನಡಿಗರು ಸೇಫ್ಫ್‌
ಆತ್ಮಭೂಷಣ್‌ ಕನ್ನಡಪ್ರಭ ವಾರ್ತೆ ಮಂಗಳೂರು ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಮಂದಿ ಕರ್ನಾಟಕ ಕರಾವಳಿಯ ಕನ್ನಡಿಗರಿದ್ದಾರೆ. ಕೇರಳದ ಗಡಿನಾಡು ಮಂಜೇಶ್ವರದಿಂದ ತೊಡಗಿ ಗೋವಾದ ಕಾರವಾರ ಗಡಿವರೆಗಿನ ಮಂದಿ ಇಸ್ರೇಲ್‌ನಲ್ಲಿ ಕೇರ್‌ ಗೀವರ್ಸ್‌ ಕೆಲಸ ಮಾಡಿಕೊಂಡಿದ್ದಾರೆ. ಇವರೆಲ್ಲರೂ ಯುದ್ಧಭೂಮಿ ಜೆರುಸಲೇಂನ ಅಕ್ಕಪಕ್ಕ ಇದ್ದರೂ ಸದ್ಯಕ್ಕೆ ಸುರಕ್ಷಿತವಾಗಿದ್ದಾರೆ. ಶೇ.50ರಷ್ಟು ಮಹಿಳೆಯರು: ಇಸ್ರೇಲ್‌ಗೆ ತೆರಳಿದ ಕರಾವಳಿ ಮಂದಿಯಲ್ಲಿ ಶೇ.50ರಷ್ಟು ಮಹಿಳೆಯರೇ ಇದ್ದಾರೆ. ಅದರಲ್ಲೂ ಹೆಚ್ಚಿನವರು ಕ್ರಿಶ್ಚಿಯನ್ನರು. ಸಣ್ಣ ಪ್ರಮಾಣದಲ್ಲಿ ಹಿಂದುಗಳಿದ್ದಾರೆ. ದ.ಕ. ಜಿಲ್ಲೆಯ 8 ಸಾವಿರಕ್ಕೂ ಅಧಿಕ ಮಂದಿ ಇದರಲ್ಲಿ ಸೇರಿದ್ದಾರೆ. ಇವರೆಲ್ಲರೂ ಕೇರ್‌ ಗೀವರ್ಸ್‌ (ಭಾರತದ ಹೋಂ ನರ್ಸ್‌ ಮಾದರಿ ವೃತ್ತಿ) ಆಗಿ ಕೆಲಸ ಮಾಡುತ್ತಿದ್ದಾರೆ. ಅಪಾಯ ಪ್ರದೇಶದಲ್ಲೂ ಕೆಲಸ: ಕರಾವಳಿಯ ಕನ್ನಡಿಗರು ಇಸ್ರೇಲ್‌ನಲ್ಲಿ ಯುದ್ಧಪೀಡಿತ ಪ್ರದೇಶದ ಸನಿಹ ಅಪಾಯವನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ. ಇಸ್ರೇಲ್‌ನ ಜೆರುಸಲೇಂ, ತೆಲ್‌ ಅವೀವ್‌, ಅರ್ಜೀಲಿಯಂ ಹಾಗೂ ಹೈಫಾ ಈ ನಾಲ್ಕು ಪ್ರಮುಖ ಪ್ರದೇಶಗಳಲ್ಲಿ ಕರಾವಳಿ ಕನ್ನಡಿಗರ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದನ್ನು ಹೊರತುಪಡಿಸಿ ಇಡೀ ಇಸ್ರೇಲ್‌ನಲ್ಲಿ ಭಾರತೀಯರು ಅಲ್ಲಲ್ಲಿ ಹಂಚಿಹೋಗಿದ್ದಾರೆ. ಸದ್ಯ ಕರಾವಳಿ ಕನ್ನಡಿಗರು ಇರುವ ಪ್ರದೇಶಗಳಲ್ಲಿ ಯಾವುದೇ ರೀತಿಯ ದಾಳಿ ನಡೆಯದಿದ್ದರೂ ಅಪಾಯದ ಭೀತಿಯಲ್ಲೇ ದಿನ ಕಳೆಯುವಂತಾಗಿದೆ. ಇಸ್ರೇಲ್‌ನಲ್ಲಿ ಕರಾವಳಿ ಕನ್ನಡಿಗರು ಮಾಡುವ ಕೇರ್‌ ಗೀವರ್ಸ್‌ ಕೆಲಸ ಎಂದರೆ, ಇಲ್ಲಿನ ಹೋಂ ನರ್ಸ್‌ ಮಾದರಿಯಲ್ಲಿ. ಅಲ್ಲಿ ಅಂಗವಿಕಲರು, ವೃದ್ಧರು ಹಾಗೂ ಅಲ್ಝೈಮರ್‌ ಪೀಡಿತರನ್ನು ನೋಡಿಕೊಳ್ಳುತ್ತಿದ್ದಾರೆ. ಸೈರನ್‌ ಮೊಳಗಿದ್ರೆ ಶೆಲ್ಟರ್‌ನಲ್ಲಿ: ನಾನು ಕಳೆದ 14 ವರ್ಷದಿಂದ ಇಸ್ರೇಲ್‌ನಲ್ಲಿ ಇದ್ದೇನೆ. ಅನೇಕ ಬಾರಿ ರಾಕೆಟ್‌ ದಾಳಿಯನ್ನು ನೋಡಿದ್ದೇನೆ. ಆದರೆ ಈಗಿನಷ್ಟು ಯುದ್ಧದ ಪರಿಸ್ಥಿತಿಯನ್ನು ಇದುವರೆಗೆ ಕಂಡಿಲ್ಲ. ದಿನದಲ್ಲಿ ಮೂರ್ನಾಲ್ಕು ಬಾರಿ ಸೈರನ್‌ ಆಗುತ್ತಿದ್ದು, ನಾವು ಕೂಡಲೇ ಸುರಕ್ಷಿತ ಜಾಗ ಮನೆಯ ಶೆಲ್ಟರ್‌ನ್ನು ಸೇರಿಕೊಳ್ಳುತ್ತೇವೆ. ಶನಿವಾರವೂ ರಾತ್ರಿ ವೇಳೆ ಸೈರಲ್‌ ಮೊಳಗಿ ಶೆಲ್ಟರ್‌ ಸೇರಿದ್ದೆ ಎಂದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸುತ್ತಾರೆ ಕೇರ್‌ ಗೀವರ್ಸ್‌ ಆಗಿರುವ ಮಂಗಳೂರು ಮೂಲದ ಲೆನಾರ್ಡ್‌ ಫರ್ನಾಂಡಿಸ್‌. ಇಸ್ರೇಲ್‌ನಲ್ಲಿ ಪ್ರತಿ ಮನೆಯಲ್ಲೂ ಸಣ್ಣ ಪ್ರತ್ಯೇಕ ಕೋಣೆ ಇರುತ್ತದೆ. ಇದು ಪ್ರಾಣ ರಕ್ಷಣೆಗೆ ನೆರವಾಗುತ್ತದೆ. ಸೈರಲ್‌ ಮೊಳಗಿದ ಕೂಡಲೇ ಈ ರಕ್ಷಣಾತ್ಮಕ ಶೆಲ್ಟರ್‌ನಲ್ಲಿ ಬಂದು ಕೂರುತ್ತೇವೆ. ಪುನರಪಿ ಸೂಚನೆ ಬಂದ ಮೇಲಷ್ಟೇ ಹೊರಗೆ ಹೋಗುತ್ತೇವೆ ಎನ್ನುತ್ತಾರೆ ಕಳೆದ 6 ತಿಂಗಳ ಹಿಂದೆ ಇಸ್ರೇಲ್‌ ಬಿಟ್ಟು ಮಂಗಳೂರಿಗೆ ಆಗಮಿಸಿದ ರಾಮ್‌ ಕುಮಾರ್‌ ಅಮೀನ್‌.