ಸಾರಾಂಶ
ಕಳಸ : ಭದ್ರಾ ನದಿಗೆ ಪಿಕ್ಅಪ್ ವಾಹನ ಬಿದ್ದು ಮಗ ಕಣ್ಮರೆಯಾದ ದುಃಖದಿಂದ ಆತನ ತಾಯಿ ಗುರುವಾರ ರಾತ್ರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗಣಪತಿಕಟ್ಟೆಯಲ್ಲಿ ನಡೆದಿದೆ.
ಕಳಸ-ಕಳಕೋಡು ರಸ್ತೆಯ ಕೊಳಮಗೆಯಲ್ಲಿ ರಸ್ತೆ ಪಕ್ಕದಲ್ಲಿ ಭದ್ರಾ ನದಿಗೆ ಶಮಂತ್ (22) ಓಡಿಸುತ್ತಿದ್ದ ಪಿಕ್ಅಪ್ ವಾಹನ ಗುರುವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಉರುಳಿ ಬಿದ್ದಿತ್ತು. ಸಂಜೆವರೆಗೂ ಶಮಂತನ ಶವ ಪತ್ತೆ ಆಗಲಿಲ್ಲ. ಶಮಂತನ ತಾಯಿ ರವಿಕಲಾ (45) ಮಗ ಕಣ್ಮರೆಯಾದ ಸ್ಥಳಕ್ಕೆ ತೆರಳಿ ಅತೀವ ದುಃಖದಿಂದ ಮನೆಗೆ ಮರಳಿದ್ದರು. ರವಿಕಲಾ ಅವರು ಕಾಫಿ ತೋಟ ಗಳಿಗೆ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಕೆಲಸ ಮಾಡಿಸುವ ಮೇಸ್ತ್ರಿ ಆಗಿದ್ದರು. ಇದೇ ಕಾರಣಕ್ಕಾಗಿ 6 ತಿಂಗಳ ಹಿಂದೆ ಮಗನಿಗೆ ಸಾಲ ಮಾಡಿ ಪಿಕ್ಅಪ್ ವಾಹನ ಕೊಡಿಸಿದ್ದರು.
ಮಗನು ವಾಹನದ ಸಮೇತ ಭದ್ರಾ ನದಿಗೆ ಬಿದ್ದಿದ್ದರಿಂದ ರವಿಕಲಾ ಆಘಾತಗೊಂಡಿದ್ದರು. ಅಪಘಾತ ನಡೆದ ಸ್ಥಳಕ್ಕೆ ಬಂದಿದ್ದಾಗ ನದಿಗೆ ಹಾರಲು ಪ್ರಯತ್ನಿಸಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುವ ಹಿರಿಯ ಮಗ ಕೂಡ ಮನೆಗೆ ಮರಳಿದ್ದರು. ಆತನಿಗೆ ಗುರುವಾರ ರಾತ್ರಿ ಧೈರ್ಯ ಹೇಳಿದ್ದ ತಾಯಿ, ರಾತ್ರಿ 10.30 ರ ವೇಳೆಗೆ ಮನೆ ಸಮೀಪದ ಕೆರೆಗೆ ಹಾರಿದರು. ಆಸುಪಾಸಿನ ಯುವಕರು ಅವರನ್ನು ರಕ್ಷಿಸಲು ಯತ್ನಿಸಿದರಾದರೂ ಬದುಕುಳಿಯಲಿಲ್ಲ. ರವಿಕಲಾ ಅವರ ಮೃತದೇಹವನ್ನು ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶುಕ್ರವಾರ ಸಂಜೆ ಹೊತ್ತಿಗೆ ಕಳಸ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ತಾಯಿ-ಮಗನ ಸಾವಿನಿಂದ ಗಣಪತಿಕಟ್ಟೆ ಪ್ರದೇಶದಲ್ಲಿ ಸೂತಕದ ಛಾಯೆ ಆವರಿಸಿದೆ. ಅಲ್ಲಿನ ನೂರಾರು ಕಾರ್ಮಿಕರು ಶುಕ್ರ ವಾರ ಕೆಲಸಕ್ಕೆ ಹೋಗದೆ ರತ್ನಕಲಾ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು. ಮಗನ ಮೃತ ದೇಹ ಸಿಗುವ ಮೊದಲೇ ತಾಯಿ ಅಗ್ನಿಯಲ್ಲಿ ಲೀನವಾದರು.
--- ಬಾಕ್ಸ್ ----ಪತ್ತೆಯಾಗದ ಪುತ್ರನ ಶವಒಂದೆಡೆ ತಾಯಿ ಅಂತ್ಯಸಂಸ್ಕಾರ ನಡೆಯುತ್ತಿದ್ದರೆ, ಮತ್ತೊಂದೆಡೆ ಮಗ ಶಮಂತನ ಶವ ಮತ್ತು ಪಿಕ್ಅಪ್ ವಾಹನಕ್ಕಾಗಿ ಭದ್ರಾ ನದಿಯಲ್ಲಿ ಶೋಧ ಮುಂದುವರಿದಿತ್ತು. ಬೆಳಗ್ಗೆಯಿಂದಲೇ ಅಗ್ನಿಶಾಮಕ ದಳ ಮತ್ತು ಸ್ಥಳೀಯರ ಜತೆಗೂಡಿ ಭದ್ರಾ ನದಿ ಯಲ್ಲಿ ಪತ್ತೆ ಕಾರ್ಯ ಮುಂದುವರಿಸಲಾಗಿದ್ದು, ಸಾಕಷ್ಟು ಆಳ ಮತ್ತು ಎಡೆಬಿಡದೆ ಸುರಿಯುತ್ತಿರುವ ಮಳೆ ಪತ್ತೆ ಕಾರ್ಯಕ್ಕೆ ಅಡ್ಡಿ ಯಾಗಿತ್ತು. ಸಂಜೆ ವೇಳೆಗೆ ಪಿಕ್ ಅಪ್ ವಾಹನವನ್ನು ನದಿಯಿಂದ ಹೊರಗೆ ತೆಗೆಯಲಾಯಿತು. ಆದರೆ, ಮೃತ ದೇಹ ಪತ್ತೆ ಯಾಗಲಿಲ್ಲ. ಹಾಗಾಗಿ ಶೋಧ ಕಾರ್ಯ ಮುಂದುವರಿಸಲಾಗಿತ್ತು.-