ಸಾರಾಂಶ
ಸಂಸದ ಬಿ.ವೈ. ರಾಘವೇಂದ್ರ ಅವರ ಜನ್ಮದಿನ ಹಿನ್ನೆಲೆ ವಂಡ್ಸೆಯ ಎಸ್ಎಲ್ಆರ್ಎಂ ಘಟಕಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ದಂಪತಿ ಭೇಟಿ ನೀಡಿ, ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರ ಯೋಗಕ್ಷೇಮ, ಕಾರ್ಯಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಮಾಹಿತಿಯನ್ನು ಪಡೆದುಕೊಂಡರು. ನಂತರ ಬಟ್ಟೆ ಸಹಿತವಾಗಿ ಬಾಗೀನ, ಸಿಹಿಯನ್ನು ಅವರಿಗೆ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಬೈಂದೂರು
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರ ಜನ್ಮದಿನವನ್ನು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಸೇವಾ ಕಾರ್ಯ ನಡೆಸುವ ಮೂಲಕ ಶಾಸಕ ಗುರುರಾಜ್ ಗಂಟಿಹೊಳೆ ಅವರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.ವಂಡ್ಸೆಯ ಎಸ್ಎಲ್ಆರ್ಎಂ ಘಟಕಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ದಂಪತಿ ಭೇಟಿ ನೀಡಿ, ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರ ಯೋಗಕ್ಷೇಮ, ಕಾರ್ಯಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಮಾಹಿತಿಯನ್ನು ಪಡೆದುಕೊಂಡರು. ನಂತರ ಬಟ್ಟೆ ಸಹಿತವಾಗಿ ಬಾಗೀನ, ಸಿಹಿಯನ್ನು ಅವರಿಗೆ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿ ಶಾಸಕ, ಎಸ್ಎಲ್ಆರ್ಎಂ ಘಟಕದ ಮಹತ್ವ ಹಾಗೂ ಸ್ವಚ್ಛತೆಯ ಅಗತ್ಯವನ್ನು ವಿವರಿಸಿ, ಘಟಕದಲ್ಲಿ ಕೆಲಸ ನಿರ್ವಹಿಸುವವರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿಶೇಷ ಗಮನ ಹಾಗೂ ಎಚ್ಚರಿಕೆ ವಹಿಸಲು ಸಲಹೆ ನೀಡಿದರು. ಅಗತ್ಯ ಸುರಕ್ಷತ ಪರಿಕರಗಳನ್ನು ಬಳಸಿ ಕಾರ್ಯನಿರ್ವಹಿಸಲು ತಿಳಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು, ಸ್ಥಳೀಯ ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು.* ಮಳೆ ಸಂತ್ರಸ್ತರಿಗೆ ನೆರವು
ಗುಡ್ಡಿಯಂಗಡಿಯಲ್ಲಿ ಭಾರೀ ಗಾಳಿಮಳೆಗೆ ಮರವೊಂದು ಬಿದ್ದು ಸಂಪೂರ್ಣ ಮನೆ ಮೇಲ್ಛಾವಣಿ ಹಾನಿಯಾಗಿತ್ತು. ಸಮೃದ್ಧ ಬೈಂದೂರು ಟ್ರಸ್ಟ್ ಸಹಯೋಗದಲ್ಲಿ ಒಂದೇ ತಿಂಗಳಲ್ಲಿ ಮನೆಯ ಮೇಲ್ಛಾವಣಿಗೆ ಹೊಸ ಹೆಂಚುಗಳನ್ನು ಹಾಕಿಸಿದ್ದು, ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಮನೆ ಹಸ್ತಾಂತರಿಸಿ ಕುಟುಂಬದ ಸದಸ್ಯರಿಗೆ ಶುಭಹಾರೈಸಿದರು.ಸಮೃದ್ಧ ಬೈಂದೂರು ಟ್ರಸ್ಟ್ ಅಧ್ಯಕ್ಷ ಉದ್ಯಮಿ ಸುರೇಶ್ ಶೆಟ್ಟಿ, ಕಾರ್ಯಕರ್ತರು ಸಹಿತ ಸ್ಥಳೀಯ ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು.