ಐಟಿಐ ಕಾಲೇಜಿನ ಹಿಂಬಾಗದ ವಸತಿ ಪ್ರದೇಶದಲ್ಲಿ ಸಂಗ್ರಹವಾಗುತ್ತಿರುವ ಮಲಿನ ನೀರಿನಿಂದಾಗಿ ಜನರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕುತ್ತಿದ್ದಾರೆ.

ಹಗರಿಬೊಮ್ಮನಹಳ್ಳಿ: ಪಟ್ಟಣದ ಎರಡನೇ ವಾರ್ಡ್‌ ವ್ಯಾಪ್ತಿಯಲ್ಲಿರುವ ಖಾಸಗಿ ಐಟಿಐ ಕಾಲೇಜಿನ ಹಿಂಭಾಗದ ವಸತಿ ಪ್ರದೇಶದಲ್ಲಿ ಸಂಗ್ರಹವಾಗುತ್ತಿರುವ ಮಲಿನ ನೀರು ತೆರವುಗೊಳಿಸುವುದು ಸೇರಿದಂತೆ ಪಟ್ಟಣದ ಸಾರ್ವಜನಿಕರ ನಾನಾ ಸಮಸ್ಯೆಗಳಿಗೆ ಪುರಸಭೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಸಿಪಿಐ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇಲ್ಲಿನ ಹಳೆಯ ತಹಸೀಲ್ದಾರ್ ಕಚೇರಿ ಬಳಿ ಸೋಮವಾರ ಧರಣಿ ಪ್ರತಿಭಟನೆ ನಡೆಸಿದರು.

ಧರಣಿಯ ನೇತೃತ್ವ ವಹಿಸಿದ್ದ ತಾಲೂಕು ಕಾರ್ಯದರ್ಶಿ ಕೆ.ಗಂಗಾಧರ ಮಾತನಾಡಿ, ಐಟಿಐ ಕಾಲೇಜಿನ ಹಿಂಬಾಗದ ವಸತಿ ಪ್ರದೇಶದಲ್ಲಿ ಸಂಗ್ರಹವಾಗುತ್ತಿರುವ ಮಲಿನ ನೀರಿನಿಂದಾಗಿ ಜನರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕುತ್ತಿದ್ದಾರೆ. ಕೊಟ್ಟೂರು ವೃತ್ತದಲ್ಲಿ ರಸ್ತೆ ಅಗಲೀಕರಣದ ನೆಪದಲ್ಲಿ ಮಹಿಳೆಯರ ಶೌಚಾಲಯ ತೆರವುಗೊಳಿಸಿರುವುದರಿಂದ ಮಹಿಳೆಯರ ಪಾಡು ಶೋಚನೀಯವಾಗಿದೆ ಎಂದು ದೂರಿದರು.ಸಮಸ್ಯೆ ಕುರಿತಂತೆ ಪುರಸಭೆಗೆ ಲಿಖಿತವಾಗಿ ಸಲ್ಲಿಸಿರುವ ಮನವಿ ಪತ್ರಗಳಿಗೆ ಪುರಸಭೆಯ ಅಧಿಕಾರಿಗಳು ನಿರ್ಲಕ್ಷö್ಯ ವಹಿಸಿದ್ದಾರೆ. ಹಾಗಾಗಿ ರಸ್ತೆಗಿಳಿದು ಪ್ರತಿಭಟಿಸುವುದು ಅನಿವಾರ್ಯವಾಗಿದೆ ಎಂದರು.

ಕೂಡಲೇ ನಾನಾ ವಾರ್ಡಗಳ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಾರ್ವಜನಿಕರನ್ನು ತೊಂದರೆಗಳಿಂದ ಮುಕ್ತಗೊಳಿಸಲು ಒತ್ತಾಯಿಸಿದರು. ಕೊನೆಗೆ ಉಪ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ಸಂತೋಷ್, ತಾಲೂಕು ಪದಾಧಿಕಾರಿಗಳಾದ ದೊಡ್ಡ ಮಲ್ಲೇಶ್,ಎಚ್.ಮೈಲಪ್ಪ, ಕೆ.ಲಲಿತಾ, ಚಂದ್ರು, ಕೆ.ಲಕ್ಷ್ಮೀ, ಕೆ.ವೆಂಕಟಮ್ಮ, ಕೆ.ದುರುಗಪ್ಪ, ಲಲಿತಮ್ಮ, ಹರೆಗೊಂಡನಹಳ್ಳಿ ಗೋಣೆಪ್ಪ, ಕೊಟ್ರೇಶ್ ಹಾಗೂ ನಾಗಪ್ಪ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಹಗರಿಬೊಮ್ಮನಹಳ್ಳಿಯಲ್ಲಿ ನಾನಾ ವಾರ್ಡ್‌ಗಳಲ್ಲಿ ಸೌಲಭ್ಯಗಳಿಗೆ ಒತ್ತಾಯಿಸಿ ಸೋಮವಾರ ಸಿಪಿಐ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಧರಣಿ ನಡೆಸಿ ಮನವಿ ನೀಡಿದರು.

ಹಗರಿಬೊಮ್ಮನಹಳ್ಳಿ ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ೭೭ನೇ ಗಣರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು. ಈ ವೇಳೆ ಶಾಸಕ ಕೆ.ನೇಮಿರಾಜ್ ನಾಯ್ಕ್, ತಹಸಿಲ್ದಾರ್ ಆರ್.ಕವಿತಾ ಇದ್ದರು.