ಸಾರಾಂಶ
- ಹಿರೇಮಠ ಆವರಣದಲ್ಲಿ ಕಡೇ ಕಾರ್ತಿಕೋತ್ಸವ ಸಂಭ್ರಮ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಮಠ, ಮಂದಿರ, ದೇವಾಲಯಗಳು ಭಕ್ತಿ, ಶ್ರದ್ಧೆಯ ಮಾನಸಿಕ ನೆಮ್ಮದಿಗಳನ್ನು ನೀಡುವಂತಹ ಆಧ್ಯಾತ್ಮಿಕ ಕೇಂದ್ರಗಳಾಗಿವೆ. ಇವುಗಳ ಸಂಪರ್ಕಗಳಿಂದ ಮಾನವ ಮಾಧವನಾಗುತ್ತಾನೆ ಎಂದು ತಹಸೀಲ್ದಾರ್ ಜಿ.ಎಸ್. ಶಂಕರಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ಹಿರೇಮಠದ ಆವರಣದಲ್ಲಿ ಮಂಗಳವಾರ ರಾತ್ರಿ ಶ್ರೀ ಕೇದಾರೇಶ್ವರ ಸ್ವಾಮಿಯ ಕಡೇ ಕಾರ್ತಿಕೋತ್ಸವ ಉದ್ಘಾಟನೆಯನ್ನು ದೀಪಗಳನ್ನು ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಕಳೆದ ಹಲವಾರು ವರ್ಷಗಳ ಹಿಂದೆ ಆಹಾರಕ್ಕಾಗಿ ಪರಿತಪಿಸುವಷ್ಟು ಬಡತನ ಇತ್ತು. ಪ್ರಸ್ತುತ ಇಂಥ ಸಂದರ್ಭ ಇಲ್ಲ. ಎಲ್ಲ ಸವಲತ್ತುಗಳು ಇದ್ದರೂ, ಮಾನಸಿಕ ನೆಮ್ಮದಿ ಇಲ್ಲದೇ ಅನೇಕರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಗಂಭೀರ ಕಾಯಿಲೆಗಳಿಂದ ಇಹಲೋಕ ತ್ಯಜಿಸುವವರ ಘಟನೆಗಳು ಕಾಣುತ್ತಿದ್ದೇವೆ. ತಮಗೆ ದೊರಕದಂಥ ವಸ್ತುಗಳ ಬಗೆಗಿನ ವ್ಯಾಮೋಹ ತ್ಯಜಿಸಿಸಬೇಕು. ಸಮಾಧಾನ ಚಿತ್ತದಿಂದ ಶಾಂತಿ, ನೆಮ್ಮದಿ ಹೊಂದಲು ಧಾರ್ಮಿಕ ಕಾರ್ಯಗಳಲ್ಲಿ ತೊಡಗಬೇಕು. ದೇವರ ಸ್ಮರಣೆಯಲ್ಲಿ ಇದ್ದಾಗ ಸಕಲ ಸಂಪತ್ತುಗಳು ದೊರೆಯಲಿವೆ ಎಂದರು.ಶ್ರೀ ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವ ಜಯಚಂದ್ರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ, ಮನೆಗಳಲ್ಲಿ ದೀಪ ಬೆಳಗುವುದು ಮನೆ ಸದಸ್ಯರ ಒಳಿತಿಗಾದರೆ, ಮಠ-ಮಂದಿರಗಳಲ್ಲಿ ಬೆಳಗುವ ದೀಪಗಳು ಸರ್ವಜನರ ಒಳತಿಗಾಗಿ. ಕಾರ್ತಿಕೋತ್ಸವದಲ್ಲಿ ಏಕತಾ ಭಾವನೆಗಳನ್ನು ಕಾಣಲು ಸಾಧ್ಯ ಎಂದರು.
ಇಂದಿನ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರಗಳನ್ನು ಕಲಿಸಬೇಕಾಗಿದೆ. ಗುರು-ಹಿರಿಯರಿಗೆ ತಂದೆ, ತಾಯಿಗಳಿಗೆ ಗೌರವಿಸುವುದನ್ನು ಕಲಿಸಬೇಕಾಗಿದೆ. ಉತ್ತಮ ಸಂಸ್ಕೃತಿಯಲ್ಲಿ ಬೆಳೆದ ಮಕ್ಕಳು ದೇಶದ ದೊಡ್ಡ ಆಸ್ತಿ ಇದ್ದಂತೆ ಎಂದರು.ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಕಾರ್ತಿಕೋತ್ಸವದಲ್ಲಿ ದೀಪಾರಾಧನೆ ಮಾಡುವುದರಿಂದ ಮನಸ್ಸಿನಲ್ಲಿನ ಅಂಧಕಾರ ತೊಡೆದು, ಪ್ರಜ್ವಲಿಸುವ ದೀಪಗಳಂತೆ ಬೆಳಗಬೇಕು. ಪ್ರತಿದಿನ ಜೀವನದ ಜಂಜಾಟಗಳಲ್ಲಿ ತೊಡಗಿಕೊಳ್ಳುತ್ತೇವೆ. ಆದ್ದರಿಂದ ಮಠ-ಮಂದಿರಗಳಿಗೆ ಭೇಟಿ ನೀಡಿ, ಆಧ್ಯಾತ್ಮಿಕತೆ ಮೈಗೂಡಿಸಿಕೊಂಡು, ನೆಮ್ಮದಿ ಕಾಣಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ವೀರಶೈವ ಸಮಾಜದ ಗೌರವ ಅಧ್ಯಕ್ಷ ರಾಜಶೇಖರಯ್ಯ, ಅಧ್ಯಕ್ಷ ಕೋರಿ ಬಸವರಾಜ್, ಮಾಜಿ ಅಧ್ಯಕ್ಷ ಸಾಗರದ ಶಿವಲಿಂಗಪ್ಪ, ಹೊದಿಗೆರೆ ಬೂದಿಸ್ವಾಮಿ, ಎಚ್.ಬಿ.ರುದ್ರಯ್ಯ, ನಾಗೇಂದ್ರಯ್ಯ, ಸಂಗಯ್ಯ, ಕರಿಸಿದ್ದಪ್ಪ ಮಾಸ್ತರ್, ವಿಶ್ವನಾಥ್, ಭಕ್ತರು ಭಾಗವಹಿಸಿದ್ದರು.ಕಾರ್ತಿಕೋತ್ಸವಕ್ಕೂ ಮುನ್ನ ತಹಸೀಲ್ದಾರ್ ಶಂಕರಪ್ಪ ಅವರು ಶ್ರೀ ಮಠದಲ್ಲಿರುವ ಶ್ರೀ ಕೇದಾರೇಶ್ವರ, ಭದ್ರಕಾಳಿ, ಶ್ರೀ ವೀರಭದ್ರೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು.
- - - -4ಕೆಸಿಎನ್ಜಿ3.ಜೆಪಿಜಿ:ಚನ್ನಗಿರಿ ಪಟ್ಟಣದ ಹಿರೇಮಠದ ಆವರಣದಲ್ಲಿ ನಡೆದ ಕಡೇ ಕಾರ್ತಿಕೋತ್ಸವದಲ್ಲಿ ತಹಸೀಲ್ದಾರ್ ಜಿ.ಎಸ್.ಶಂಕರಪ್ಪ, ಹಿರೇಮಠದ ಶ್ರೀ, ಹಾಲಸ್ವಾಮಿ ಶ್ರೀ ಪಾಲ್ಗೊಂಡರು.