ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಚೆಂಟ್ಸ್ ನಿಯಮಿತ ಮೈಸೂರು ಸ್ಯಾಂಡಲ್ ಸೋಪ್‌ನ ಪ್ರಚಾರಕ್ಕಾಗಿ 6 ಕೋಟಿ ನೀಡಿ ಅನ್ಯ ಭಾಷೆ ನಟಿ ತಮನ್ನಾ ಭಾಟಿಯಾ ನೇಮಕ ಮಾಡಿರುವ ರಾಜ್ಯ ಸರ್ಕಾರವನ್ನು ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಬಿ. ಶಂಕರ್ ಬಾಬು ಖಂಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಹಾಗೂ ಕನ್ನಡ ಭಾಷೆ ಬಾರದವರು, ಮೈಸೂರು ರಾಜಮನೆತನದ ಕಾಲದಿಂದ ಹೆಸರು ವಾಸಿಯಾದ ಮೈಸೂರು ಸ್ಯಾಂಡಲ್ ಸೋಪಿನ ಮಹತ್ವ ತಿಳಿಯದ ನಟಿ ತಮನ್ನಾ ಅವರಿಗೆ ಪ್ರಚಾರಕಿ ಪಟ್ಟ ನೀಡಿ ಜನರ ತೆರಿಗೆ ಹಣ ಬಳಿಸಿಕೊಂಡು 6 ಕೋಟಿಗೂ ಅಧಿಕ ಹಣ ನೀಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ನಮ್ಮಲ್ಲಿರುವ ಕನ್ನಡಿಗರ ಹೆಸರಾಂತ ನಟಿಗಳನ್ನು ಬಳಸಿಕೊಂಡು ಪ್ರಚಾರ ನೀಡಬೇಕು. ಆದರೆ, ಅನ್ಯ ಭಾಷೆ ನಟಿಯನ್ನು ಹೆಸರಾಂತ ಸೋಪಿಗೆ ಬಳಕೆ ಮಾಡಿಕೊಂಡಿರುವುದು ಕನ್ನಡಿಗರು ತಲೆತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಕನ್ನಡದ ಬಹಳಷ್ಟು ಕನ್ನಡ ನಟ, ನಟಿ, ರಂಗಭೂಮಿ ಕಲಾವಿದರುಗಳಿದ್ದು ಮತ್ತು ಕನ್ನಡಕ್ಕಾಗಿ ಜೀವಂತ ಪರ್ಯಂತ ದುಡಿದವರನ್ನು ರಾಯಭಾರಿಯನ್ನಾಗಿ ಮಾಡಿದರೆ ಅವರಿಗೆ ಇಲಾಖೆಯಿಂದ ಗೌರವ ಸಲ್ಲಿಸಿದಂತಾಗುತ್ತದೆ. ಅದನ್ನು ಬಿಟ್ಟು, ಅನ್ಯ ಭಾಷಿಕರಿಗೆ ಆದ್ಯತೆ ನೀಡಿರುವುದು ವಿಪರ್ಯಾಸದ ಸಂಗತಿ ಎಂದರು.


ಈ ತಕ್ಷಣ ಇದಕ್ಕೆ ಸಂಬಂಧಪಟ್ಟ ಸಚಿವರಾದ ಎಂ.ಬಿ ಪಾಟೀಲ್ ಮತ್ತು ಇಲಾಖೆಯವರು ತಮನ್ನಾ ನಟಿಯರನ್ನು ಕೈ ಬಿಟ್ಟು ಕನ್ನಡಿಗರೇ ಆದ ನಟ, ನಟಿಯರಿಗೆ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಹೆದ್ದಾರಿ ರಸ್ತೆ ತಡೆ ಮಾಡಿ ಸೋಪಿನಲ್ಲಿ ಎಮ್ಮೆ ತೊಳೆಯುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.