ಶಕ್ತಿನಗರದ ನಾಲ್ಯಪದವು ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಎಂಆರ್‌ಪಿಎಲ್ ಸಿ‌ಎಸ್‌ಆರ್ ಯೋಜನೆಯಡಿ ನಿರ್ಮಿಸಲಾದ ಬಾಲಕಿಯರ ಮತ್ತು ಬಾಲಕರ ಶೌಚಾಲಯಗಳು, ನೀರಿನ ಸಂಪು ಹಾಗೂ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಉದ್ಘಾಟನಾ ಸಮಾರಂಭ ನಡೆಯಿತು.

ಮಂಗಳೂರು: ಶಕ್ತಿನಗರದ ನಾಲ್ಯಪದವು ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಎಂಆರ್‌ಪಿಎಲ್ ಸಿ‌ಎಸ್‌ಆರ್ ಯೋಜನೆಯಡಿ ನಿರ್ಮಿಸಲಾದ ಬಾಲಕಿಯರ ಮತ್ತು ಬಾಲಕರ ಶೌಚಾಲಯಗಳು, ನೀರಿನ ಸಂಪು ಹಾಗೂ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಉದ್ಘಾಟನಾ ಸಮಾರಂಭ ನಡೆಯಿತು.

ಶಾಸಕ ವೇದವ್ಯಾಸ ಕಾಮತ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳ ಆರೋಗ್ಯ ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಇಂತಹ ಮೂಲಭೂತ ಸೌಕರ್ಯಗಳು ಅತ್ಯಂತ ಅಗತ್ಯವಾಗಿದ್ದು, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗಾಗಿ ನಮ್ಮ ಮನವಿಗೆ ಸ್ಪಂದಿಸಿ ಎಂಆರ್‌ಪಿಎಲ್ ನೀಡುತ್ತಿರುವ ಸಹಕಾರ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಕ್ಕೆ ಜೊತೆಯಾಗೋಣ ಎಂದರು.

ಎಂಆರ್‌ಪಿಎಲ್ ಸಂಸ್ಥೆಯ ಸಿ‌ಎಸ್‌ಆರ್ ವಿಭಾಗದ ವ್ಯವಸ್ಥಾಪಕ ಹರೀಶ್ ರಾವ್ ಮಾತನಾಡಿ, ಸಂಸ್ಥೆಯು ಸಮುದಾಯದ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಆರೋಗ್ಯ–ಸ್ವಚ್ಛತೆ ಸುಧಾರಣೆಗೆ ಬದ್ಧವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಜಯಾನಂದ ಎನ್.ಸುವರ್ಣ ಮಾತನಾಡಿ, ಅತ್ಯಾಧುನಿಕ ಶೌಚಾಲಯಗಳು ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಿದ ಎಂಆರ್‌ಪಿಎಲ್ ಸಂಸ್ಥೆಗೆ ಹಾಗೂ ಅದಕ್ಕೆ ವಿಶೇಷ ಪ್ರಯತ್ನ ಮಾಡಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.

ನಿಕಟಪೂರ್ವ ಪಾಲಿಕೆ ಸದಸ್ಯರಾದ ವನಿತಾ ಪ್ರಸಾದ್, ಶಕೀಲಾ ಕಾವಾ, ಪ್ರಾಥಮಿಕ ಶಾಲಾ ಮುಖ್ಯಗುರು ಶಾರದಾ, ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಾಲ್ ಕುಮಾರ್, ಸಿಬಿಸಿ ಸದಸ್ಯ ಅಶೋಕ್ ನಾಯ್ಕ್, ಎಸ್‌ಡಿಎಂಸಿ ಅಧ್ಯಕ್ಷ ಕಿಶೋರ್, ಉದ್ಯಮಿಗಳಾದ ವಿಜಯ ಶೆಣೈ, ಪ್ರಸಾದ್, ಹಿರಿಯ ಶಿಕ್ಷಕಿ ದಾಕ್ಷಾಯಿಣಿ ಮತ್ತಿತರರು ಇದ್ದರು.

ಉಪನ್ಯಾಸಕಿ ಸರಳಾದೇವಿ ಪಿ. ನಿರೂಪಿಸಿದರು. ಪ್ರೌಢಶಾಲಾ ಮುಖ್ಯಗುರು ಪ್ರಶಾಂತ್ ಕುಮಾರ್ ವಂದಿಸಿದರು.