ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗೆ ಡಾ.ವಿಷ್ಣುವರ್ಧನ್ ಹೆಸರು ನಾಮಕರಣ ಮಾಡಬೇಕು ಎಂದು ಕನ್ನಡ ನೆಲ-ಜಲ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಒತ್ತಾಯಿಸಿದರು.ನಗರದ ವಿಎಚ್ಪಿ ಶಾಲೆಯ ಸಮೀಪದಲ್ಲಿ ಕನ್ನಡ ನೆಲ-ಜಲ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ 15ನೇ ವಿಷ್ಣು ನೆನಪಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿಷ್ಣುವರ್ಧನ್ ಜಾತ್ಯಾತೀತ ನಾಯಕರಾಗಿದ್ದರು. ಇಂದಿನ ಚಿತ್ರನಟರು ಜಾತಿ ಆಧಾರದಲ್ಲಿದ್ದಾರೆ. ಆದರೆ ವಿಷುವರ್ಧನ್ ಅವರಿಗೆ ಯಾವುದೇ ಜಾತಿ, ಧರ್ಮದ ಭೇದಭಾವ ಇರಲಿಲ್ಲ. ಹೆಚ್ಚು ಮುಸ್ಲಿಂ ಸಮುದಾಯದ ಅಭಿಮಾನಿ ಹೊಂದಿದ್ದರು. ಅವರ ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿವೆ. ಅವರ ಚಿತ್ರಗಳು ಸಂಸಾರಿಕ, ಆದರ್ಶತೆಯನ್ನು ತೋರಿಸುತ್ತಿದ್ದವು. ಹಾಗಾಗಿ ನಗರದಲ್ಲಿ ಯಾವುದಾದರೂ ವೃತ್ತ, ರಸ್ತೆಗೆ ವಿಷ್ಣುವರ್ಧನ್ ಹೆಸರನ್ನು ಇಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.ಕಳೆದ 14 ವರ್ಷಗಳಿಂದ ನಗರಸಭೆ, ಜಿಲ್ಲಾಡಳಿತಕ್ಕೆ ನಗರದ ವೃತ್ತ, ರಸ್ತೆಗೆ ವಿಷ್ಣುವರ್ಧನ್ ಹೆಸರು ನಾಮಕರಣ ಮಾಡುವಂತೆ ಮನವಿ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾಡಿದರು.
ಡಾ. ಬಿ.ಆರ್.ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರ ಆದರ್ಶಗಳನ್ನು ಡಾ.ವಿಷ್ಣುವರ್ಧನ್ ಅಳವಡಿಸಿಕೊಂಡಿದ್ದರು. ಅಂಬೇಡ್ಕರ್ ಬರೆದಿರುವ ಸಂವಿಧಾನ ಹಾಗೂ ಬಸವಣ್ಣನರ ವಚನ ಓದಿದ್ದರೆ ಒಳ್ಳೆಯ ಬುದ್ದಿ ಲಭಿಸುತ್ತದೆ. ವಿಷ್ಣುವರ್ಧನ್ ಚಿತ್ರ ನೋಡಿದರೆ ಒಳ್ಳೆಯದಾಗುತ್ತದೆ ಎಂದರು.ನಗರಸಭೆ ಅಧ್ಯಕ್ಷ ಸುರೇಶ್ ಮಾತನಾಡಿ, ಡಾ.ವಿಷ್ಣುವರ್ಧನ್ ಕರ್ನಾಟಕ ಹೆಮ್ಮೆಯ ಪುತ್ರ. ಉತ್ತಮ ನಟರಾಗಿ ತಮ್ಮ ಚಿತ್ರಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ ಎಂದರು.ಈ ವೇಳೆ 10 ಮಂದಿ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು. ತಂಬೂರಿ ಕಲಾವಿದ ದೊಡ್ಡಗವಿ ಬಸಪ್ಪ ಅವರನ್ನು ಸನ್ಮಾನಿಸಲಾಯಿತು. ಮೈಸೂರು ವಿಷ್ಣು ಆರ್ಕೇಸ್ಟ್ರಾ ತಂಡದಿಂದ ವಿಷ್ಣು ಗೀತಗಾಯನ ಕಾರ್ಯಕ್ರಮ ನಡೆಯಿತು. ಚೂಡಾಧ್ಯಕ್ಷ ಮಹಮ್ಮದ್ಅಸ್ಗರ್, ಯುವ ಪ್ರಶಸ್ತಿ ಪುರಸ್ಕೃತ ಸುರೇಶ್, ಡಾ.ಬಸವರಾಜೇಂದ್ರ ಮಾತನಾಡಿದರು.
ನಗರಸಭಾ ಉಪಾಧ್ಯಕ್ಷೆ ಮಮತಾ ಬಾಲಸುಬ್ರಹ್ಮಣ್ಯಂ, ಬಿಎಸ್ವಿ ಪ್ರತಿಷ್ಠಾನ ವೆಂಕಟನಾಗಪ್ಪಶೆಟ್ಟಿ ಬಾಬು, ಸರ್ಕಾರಿ ವಕೀಲ ಅರುಣ್ಕುಮಾರ್, ಹರಿಪ್ರಸಾದ್, ಕನಿಷ್ಠ ವೇತನಾ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಎಸ್ಪಿಕೆ, ಆಲೂರು ಮಲ್ಲು, ಜ.ಸುರೇಶ್ ನಾಗ್, ಮಹೇಶ್, ಸಿ.ಡಿ.ಪ್ರಕಾಶ್, ಕೂಸಣ್ಣ, ಪುಟ್ಟುವರ್ಧನ್, ಆನಂದ್ ಭಗೀರಥ, ಶಿವು ಇದ್ದರು.