ಕನ್ನಡಪ್ರಭ ವಾರ್ತೆ ಪಾವಗಡ

ಆಂಗ್ಲ ಭಾಷಾ ಶಿಕ್ಷಕರಾದ ಆರ್‌.ಎಂ.ನರಸಿಂಹ ಅವರು, ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವುದರೊಂದಿಗೆ ಮೌಲ್ಯಗಳನ್ನು ತುಂಬಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದರು ಎಂದು ತಾಲೂಕಿನ ರಾಜವಂತಿ ಗ್ರಾಮದ ವಿಎಸ್‌ಎಸ್‌ ಎನ್‌ ಸೊಸೈಟಿಯ ಅಧ್ಯಕ್ಷರಾದ ನರಸಿಂಹಪ್ಪ ಹೇಳಿದರು. ತಾಲೂಕಿನ ರಾಜವಂತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕರಾದ ಆರ್‌.ಎಂ.ನರಸಿಂಹ ಅವರು ತುಮಕೂರಿಗೆ ವರ್ಗಾವಣೆಗೊಂಡಿದ್ದ ಹಿನ್ನಲೆಯಲ್ಲಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕರಾದ ಆರ್‌.ಎಂ.ನರಸಿಂಹ ಅವರು ಉತ್ತಮ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಉತ್ತಮ ಪಾಠಪ್ರವಚನ ಹಾಗೂ ಬೋಧನೆಯ ಜತೆಗೆ ಸಂಸ್ಕಾರ ಹಾಗೂ ಶಿಸ್ತು ರೂಪಿಸುವಲ್ಲಿ ಮಹತ್ತರ ಹೆಜ್ಜೆ ಇಟ್ಟಿದ್ದರು. ಶಾಲೆಗೆ ಉತ್ತಮ ಫಲಿತಾಂಶ ತರುವತ್ತ ಯಶಸ್ವಿಯಾಗಿ ಹಾಗೂ ಪಾಠದ ಮೂಲಕ ಮಕ್ಕಳಿಗೆ ಉತ್ತಮ ಪರೀಕ್ಷಾ ಸಿದ್ಧತೆ ರೂಪಿಸುತ್ತಿದ್ದರು.ಇವರ ವರ್ಗಾವಣೆಯಿಂದ ತುಂಬ ನೋವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸನ್ಮಾನಿತರಾಗಿ ವರ್ಗಾವಣೆಯ ಶಿಕ್ಷಕ ಆರ್.ಎಂ.ನರಸಿಂಹ ಅವರು, ಮಾತನಾಡಿ ಶಾಲೆಯಲ್ಲಿ ನಾನು ಬರೀ ಬೋಧನೆ ಮಾಡಲಿಲ್ಲ. ಜೀವನದ ಪಾಠಗಳನ್ನು ಕಲಿತಿದ್ದೇನೆ. ಗ್ರಾಮಸ್ಥರ ಸಹಕಾರ ಹಾಗೂ ಈ ಶಾಲೆಯ ನೆನಪು ನನ್ನ ಜೀವನ ಪೂರ್ತಿ ಮರೆಯಲಾಗದು. ವಿದ್ಯಾರ್ಥಿಗಳ ತುಂಟ ಪ್ರಶ್ನೆಗಳು, ಚಟುವಟಿಕೆಗಳು.ಕಲಿಕೆಯಲ್ಲಿ ತೋರಿಸಿದ ಆಸಕ್ತಿಯಿಂದಾಗಿ ಪ್ರತಿ ವರ್ಷ ಆಂಗ್ಲ ಭಾಷೆಯ ವಿಷಯದಲ್ಲಿ ಶೇ 90% ಫಲಿತಾಂಶ ಬಂದಿದೆ. ಹೀಗಾಗಿ ಇದು ಅತ್ಯಂತ ಸಂತಸ ತಂದಿದ್ದು, ನಾನೊಬ್ಬ ಸಮರ್ಥ ಶಿಕ್ಷಕನಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದರು.

ಶಾಲೆಯಿಂದ ಬಿಡುಗಡೆಯದರೂ ಸದಾ ತಮಗೆ ಶಿಕ್ಷಕನಾಗಿ ಮುಂದುವರೆಯಲು ಇಚ್ಛೆಸುತ್ತೇನೆ. ನೀವೆಲ್ಲಾ ನನ್ನ ಹೃದಯದ ಸದಾ ಹಸಿರಾಗಿರುವ ವಿದ್ಯಾರ್ಥಿಗಳೆಂದು ಭಾವುಕರಾದರು. ಸನ್ಮಾನ ವನ್ನು ಆಯೋಜಿಸಿದ ಜನ ಪ್ರತಿನಿದಿಗಳು, ಹಳೆ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು, ಸಿಬ್ಬಂದಿಗೆ ಧನ್ಯವಾದ ಅರ್ಪಿಸಿ ಶೈಕ್ಷಣಿಕವಾಗಿ ಪ್ರಗತಿ ಕಾಣುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಜಪ್ಪ ಮಾತನಾಡಿ, ಶಾಲೆಯ ಬಡ ವಿದ್ಯಾರ್ಥಿಗಳಿಗೆ ಸದಾ ನೆರವು ನೀಡುತ್ತಾ, ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ಆಂಗ್ಲ ಭಾಷೆಯನ್ನು ಅತ್ಯುತ್ತಮವಾಗಿ ಕಲಿಸಿದ ಕೀರ್ತಿ ಶಿಕ್ಷಕರಾದ ಆರ್‌.ಎಂ. ನರಸಿಂಹ ಅವರಿಗೆ ಸಲ್ಲಬೇಕು ಎಂದರು. ನಿಕಟಪೂರ್ವ ಗ್ರಾಪಂ ಸದಸ್ಯ ಲಿಂಗಪ್ಪ ಮಾತನಾಡಿ, ನಮ್ಮ ಶಾಲೆ ಉತ್ತಮ ಶಿಕ್ಷಕರನ್ನು ದೂರ ಮಾಡಿಕೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಪಂಚಾಯ್ತಿ ಸದಸ್ಯರಾದ ದಾಸನಾಯಕ, ವಿಎಸ್ ಎಸ್ ಎನ್ ಸದಸ್ಯ ಜಯರಾಮಪ್ಪ, ಮುಖ್ಯ ಶಿಕ್ಷಕ ಯರಿಸ್ವಾಮಿ, ಶಿಕ್ಷಕರಾದ ಗಿರೀಶ್ ಬಾಬು, ನರಸಪ್ಪ, ಕರಿಯಣ್ಣ, ರಂಗ ನಾಯಕ ಇತರರಿದ್ದರು.