ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ಈ ದೇಶ ಕಂಡ ಅಪ್ರತಿಮ ಪ್ರಧಾನಮಂತ್ರಿ ನರೇಂದ್ರ ಮೋದೀಜಿ ತಮ್ಮ ಮೂರನೇ ಅವಧಿಯ ಆಡಳಿತದಲ್ಲಿ ಭಾರತವನ್ನು ಇಡೀ ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ತೆಗೆದುಕೊಂಡು ಹೋಗಲಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಪಿ.ಕುಮಾರ್ ತಿಳಿಸಿದರು.ನಗರದ ಚನ್ನಬಸಪ್ಪ ವೃತ್ತದಲ್ಲಿ ನರೇಂದ್ರ ಮೋದೀಜಿಯವರು ಸತತ ಮೂರನೇ ಬಾರಿಗೆ ಭವ್ಯ ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ,ಕಾರ್ಯಕರ್ತರ ಜೊತೆಯಲ್ಲಿ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿ, ಮಾತನಾಡಿ, ಕಳೆದ ಹತ್ತು ವರ್ಷಗಳ ಹಿಂದೆ ದೇಶದ ಚುಕ್ಕಾಣಿ ಹಿಡಿದ ಮಾನ್ಯ ನರೇಂದ್ರ ಮೋದಿಯವರು ಅಸಾಧ್ಯವಾದದ್ದನ್ನು ಸಾಧ್ಯವಾಗಿಸುವುದರ ಜೊತೆಗೆ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧಗಳನ್ನು ವೃದ್ಧಿಸಿಕೊಂಡು ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.
ಈ ದೇಶದ ಜನ ಮೋದಿ ನಾಯಕತ್ವವನ್ನು ಮೆಚ್ಚಿ ಸತತ ಮೂರನೇ ಬಾರಿಗೆ ಆಡಳಿತ ನಡೆಸಲು ಆಶೀರ್ವಾದ ಮಾಡಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಕೇಂದ್ರದಲ್ಲಿ ಇಂದಿನಿಂದ ಹೊಸ ಅಧ್ಯಾಯವನ್ನು ಬರೆಯಲಿದ್ದು, ದೇಶದ ಪ್ರಗತಿಯ ವೇಗ ಹೆಚ್ಚಾಗಲಿದೆ. ದೇಶ ಅಭಿವೃದ್ಧಿಯ ಪಥದತ್ತ ಸಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ನಗರ ಘಟಕದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ದೇಶದ ಅಧಿಕಾರದ ಚುಕ್ಕಾಣಿಯನ್ನು ಮೂರನೇ ಬಾರಿಗೆ ಹಿಡಿಯುತ್ತಿರುವ ಭರತ ಭೂಮಿಯ ಹೆಮ್ಮೆಯ ಪುತ್ರ ನರೇಂದ್ರ ಮೋದೀಜಿಯವರ ಆಡಳಿತ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಾಗಿದೆ. ಈ ದೇಶದ ಕೋಟ್ಯಂತರ ಜನರ ಹಾರೈಕೆ ಹಾಗೂ ಆಶಯದಿಂದ ಎನ್ ಡಿ ಎ ಮೈತ್ರಿ ಕೂಟದ ನಾಯಕರಾಗಿ ಆಯ್ಕೆಯಾದ ಮೋದಿಯವರು ತಮ್ಮ ಆಡಳಿತದ ಅವಧಿಯಲ್ಲಿ ದೇಶದ ಸಾರ್ವಭೌಮತ್ವ ವನ್ನು ಎತ್ತಿ ಹಿಡಿಯುವುದರ ಜೊತೆಗೆ ಸಮಗ್ರ ಅಭಿವೃದ್ಧಿಗಾಗಿ ದುಡಿಯಲಿದ್ದಾರೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ನಗರ ಘಟಕದ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಮುಖಂಡರಾದ ರಾಜೇಶ್, ಕೋಟೆ ಕಿಟ್ಟಿ, ಆಟೋ ಕುಮಾರ್, ಶಿವಮುತ್ತು, ಡಿ.ಶ್ರೀನಿವಾಸ್, ಶಿವಲಿಂಗಯ್ಯ,ಆನಂದ್ ಪೈ, ನಗರಸಭಾ ಸದಸ್ಯೆ ಮಾಲತಿ ಆನಂದ್, ಜೆಡಿಎಸ್ ಪಕ್ಷದ ನಗರಸಭಾ ಸದಸ್ಯ ಜಯರಾಮ್, ಬಿಜೆಪಿ ಯುವ ಮೋರ್ಚಾದ ಶೇಖರ್, ಭರತ್, ಮಹಿಳಾ ಘಟಕದ ಪವಿತ್ರ, ವರಲಕ್ಷ್ಮೀ, ತಾಸೀನಾ ಖಾನ್ ಸೇರಿ ಜೆಡಿಎಸ್ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.