ದಾಬಸ್‍ಪೇಟೆ: ಪರಿಸರ ಸಂರಕ್ಷಣೆ ಮಾಡಿದರೆ ಉತ್ತಮ ಆರೋಗ್ಯದಿಂದ ಬದುಕು ಸಾಗಿಸಬಹುದು ಎಂದು ಶ್ರೀ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಅಮರೇಂದ್ರ ತಿಳಿಸಿದರು

ದಾಬಸ್‍ಪೇಟೆ: ಪರಿಸರ ಸಂರಕ್ಷಣೆ ಮಾಡಿದರೆ ಉತ್ತಮ ಆರೋಗ್ಯದಿಂದ ಬದುಕು ಸಾಗಿಸಬಹುದು ಎಂದು ಶ್ರೀ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಅಮರೇಂದ್ರ ತಿಳಿಸಿದರು.

ತ್ಯಾಮಗೊಂಡ್ಲು ಹೋಬಳಿಯ ಚಿಕ್ಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ನೆಲಮಂಗಲದ ಶ್ರೀ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ 2025-26ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರವನ್ನು ಗಿಡ ನೆಟ್ಟು ಚಾಲನೆ ನೀಡಿ ತನಾಡಿದರು.

ಎನ್‍ಎಸ್‍ಎಸ್ ಶಿಬಿರಾರ್ಥಿಗಳು ಜನರೊಂದಿಗೆ ಬೆರತು ಅವರ ಜೀವನ ಶೈಲಿ ಹಾಗೂ ಆಹಾರ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಪರಿಸರ ಸಂರಕ್ಷಣೆಯಿಂದ ಆಗುವ ಅನುಕೂಲಗಳನ್ನು ತಿಳಿಸಿ ಪರಿಸರ ಜಾಗೃತಿ ಮೂಡಿಸಬೇಕು.

ರಾಷ್ಟ್ರೀಯ ಸೇವಾ ಯೋಜನೆ ಗಾಂಧೀಜಿ ಕಂಡ ಕನಸು. ಹಳ್ಳಿಗಳಲ್ಲಿ ಇಂತಹ ಶ್ರಮದಾನ ನಡೆಸಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕಿದೆ. ಹಳ್ಳಿಗಳ ಉದ್ಘಾರದಿಂದ ಮಾತ್ರ ದೇಶದ ಉದ್ದಾರ ಸಾಧ್ಯ. ಭೇದ-ಭಾವ ಮರೆತು ನಿಸ್ವಾರ್ಥದಿಂದ ಆತ್ಮತೃಪ್ತಿಗಾಗಿ ಕೆಲಸ ನಿರ್ವಹಿಸಬೇಕು ಎಂದರು.

ಶಿಬಿರಾಧಿಕಾರಿ ಗಂಗರಾಜು ಮಾತನಾಡಿ, ಸೇವಾ ಯೋಜನೆಯ ಶಿಬಿರದಲ್ಲಿ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮೂಡಿಸುವ ಜತೆಯಲ್ಲಿ ಚಿಕ್ಕನಹಳ್ಳಿ ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಹಾಗೂ ಗ್ರಾಮದ 50ಕ್ಕೂ ಯುವಕರು ಹಾಗೂ ಶಿಬಿರಾರ್ಥಿಗಳು ರಕ್ತದಾನ ಮಾಡಿದ್ದಾರೆ. ಗ್ರಾಮದ ಜನರಿಗೆ ಸ್ವಚ್ಛತೆ ಹಾಗೂ ಆರೋಗ್ಯದ ಕುರಿತು ಜಾಗೃತಿ ಮೂಡಿಸಿ ಏಳು ದಿನಗಳ ಶಿಬಿರವನ್ನು ನಡೆಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಚಿಕ್ಕನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಅನಿಲ್ ಕುಮಾರ್, ಕಾಲೇಜಿನ ಉಪನ್ಯಾಸಕರಾದ ಡಾ.ಮನುಕುಮಾರ್, ಮಹೇಶ್ ಸೇರಿದಂತೆ ಶಿಬಿರಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪೋಟೋ 5 : ಚಿಕ್ಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನೆಲಮಂಗಲದ ಶ್ರೀ ಸಿದ್ದಗಂಗಾ ಪದವಿ ಕಾಲೇಜಿನ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರವನ್ನು ಪ್ರಾಂಶುಪಾಲರಾದ ಡಾ. ಅಮರೇಂದ್ರ ಗಿಡ ನೆಟ್ಟು ಚಾಲನೆ ನೀಡಿದರು.