ಮುಂಡಗೋಡದಲ್ಲಿ ನವರಾತ್ರಿ, ಸಂಗೀತ, ನೃತ್ಯ ವೈಭವ

| Published : Oct 07 2024, 01:31 AM IST

ಮುಂಡಗೋಡದಲ್ಲಿ ನವರಾತ್ರಿ, ಸಂಗೀತ, ನೃತ್ಯ ವೈಭವ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು ೩ ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭರತ ನಾಟ್ಯ, ನೃತ್ಯ ಪ್ರದರ್ಶನ ಸಂತೋಷ ಸಾನು ಅವರ ಭಕ್ತಿ ಸಂಗೀತ ಗಮನ ಸೆಳೆಯಿತು.

ಮುಂಡಗೋಡ: ನವರಾತ್ರಿ ಉತ್ಸವ ಪ್ರಯುಕ್ತ ಇಲ್ಲಿಯ ದೈವಜ್ಞ ಸಭಾ ಭವನದಲ್ಲಿ ಭಾನುವಾರ ರಾತ್ರಿ ಅರಿಶಿಣ ಕುಂಕುಮ, ಸಾಂಸ್ಕೃತಿಕ ಕಾರ್ಯಕ್ರಮ, ಖ್ಯಾತ ಗಾಯಕ ಸಂತೋಷ ಸಾನು ಅವರಿಂದ ಭಕ್ತಿ ಸಂಗೀತ, ಚಂಡೆ ವಾದ್ಯ ಪ್ರದರ್ಶನ, ನವದುರ್ಗೆ ರೂಪಕ ದರ್ಶನ ಮತ್ತು ಮಹಿಳೆಯರಿಂದ ಗರ್ಭಾ ನೃತ್ಯ ಪ್ರದರ್ಶನ ಅದ್ಧೂರಿಯಾಗಿ ನಡೆಯಿತು.

ಸುಮಾರು ೩ ಗಂಟೆಗಳ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭರತ ನಾಟ್ಯ, ನೃತ್ಯ ಪ್ರದರ್ಶನ ಸಂತೋಷ ಸಾನು ಅವರ ಭಕ್ತಿ ಸಂಗೀತ ಗಮನ ಸೆಳೆಯಿತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ತಾಲೂಕು ದೈವಜ್ಞ ಸಮಾಜ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಅಣವೇಕರ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಶ್ರೀಕಾಂತ ಸಾನು, ಕಾರ್ಯದರ್ಶಿ ನಾಗೇಶ ರೇವಣಕರ, ಸತೀಶ ಕುರ್ಡೇಕರ, ಶ್ರೀನಿವಾಸ ದೈವಜ್ಞ, ರಾಕೇಶ ರಾಯ್ಕರ, ಆನಂದ ವೆರ್ಣೇಕರ, ರಮೇಶ ದೈವಜ್ಞ, ದಿನೇಶ ವೆರ್ಣೇಕರ, ಅಣ್ಣಪ್ಪ ಶೇಟ್, ಸಂತೋಷ ರೇವಣಕರ, ಶ್ರೀಕಾಂತ ವೆರ್ಣೇಕರ, ದೈವಜ್ಞ ದುಂದುಭಿ ಮಹಿಳಾ ಚಂಡೆ ಬಳಗದ ಅಧ್ಯಕ್ಷೆ ಶಶಿಕಲಾ ಮಂಜುನಾಥ ವೆರ್ಣೇಕರ, ಉಪಾಧ್ಯಕ್ಷೆ ಸೀಮಾ ವೆಂಕಟೇಶ ಸಾನು ಹಾಗೂ ಸದಸ್ಯರು ಉಪಸ್ಥಿತರಿದ್ದರು. ದಿನೇಶ ವೆರ್ಣೇಕರ ಕಾರ‍್ಯಕ್ರಮ ನಿರೂಪಿಸಿದರು.

ತಾಲೂಕು ದೈವಜ್ಞ ಸಮಾಜ ಸೇವಾ ಸಂಘ, ದೈವಜ್ಞ ಸರಾಪ್ ಸಂಘ, ದೈವಜ್ಞ ಯುವಕ ಮಂಡಳ, ಶ್ರೀ ಜ್ಞಾನೇಶ್ವರಿ ಮಹಿಳಾ ಮಂಡಳ, ಮುಂಡಗೋಡ ದೈವಜ್ಞ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಹಾಗೂ ದೈವಜ್ಞ ದುಂದುಭಿ ಮಹಿಳಾ ಚಂಡೆ ಬಳಗದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಅಳ್ವೆಕೋಡಿಯಲ್ಲಿ ವಿಜೃಂಭಣೆಯ ನವರಾತ್ರಿ

ಭಟ್ಕಳ: ತಾಲೂಕಿನ ಶಕ್ತಿ ಕ್ಷೇತ್ರಗಳಲ್ಲೊಂದಾದ ಶಿರಾಲಿಯ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ದಿನಂಪ್ರತಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿ ದರ್ಶನ ಪಡೆಯುತ್ತಿದ್ದಾರೆ.ನವರಾತ್ರಿ ಅಂಗವಾಗಿ ದಿನಂಪ್ರತಿ ಬೆಳಗ್ಗೆ ಪುಣ್ಯಾಹ ವಾಚನ, ಉದಯ ಅಸ್ತಮಾನ ಸೇವೆ, ನವಚಂಡಿಕಾ ಹವನ, ದೇವಿಗೆ ಸಂಪೂರ್ಣ ಅಲಂಕಾರ, ಮಹಾಮಂಗಳಾರತಿ, ಪ್ರಸಾದ ಭೋಜನ, ಸಂಜೆ ಮಹಿಳೆಯರಿಂದ ಲಲಿತಾ ಸಹಸ್ರನಾಮ, ನವರಾತ್ರಿ ವಿಶೇಷ ಪೂಜೆ, ಸಾಂಸ್ಕೃತಿಕ ಮತ್ತು ಭಜನಾ ಕಾರ್ಯಕ್ರಮ ನಡೆಯುತ್ತಿದೆ.ಅ. 7ರಂದು ಲಲಿತಾ ಪಂಚಮಿ, ಅ. 10ರಂದು ದುರ್ಗಾಷ್ಟಮಿ, ಅ. 11ರಂದು ಮಹಾನವಮಿ, ಅ. 12ರಂದು ವಿಜಯದಶಮಿ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ. ನವರಾತ್ರಿ ಅಂಗವಾಗಿ ಸ್ಥಳೀಯರು ಸೇರಿದಂತೆ ಹೊರ ಊರಿನ ಭಕ್ತರೂ ಆಗಮಿಸಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಹೋಗುತ್ತಿರುವುದು ಕಂಡುಬಂದಿದೆ.

ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ದೇವಸ್ಥಾನದಲ್ಲಿ ನೂಕುನುಗ್ಗಲು ಉಂಟಾಗದಂತೆ ಮತ್ತು ಭಕ್ತರಿಗೆ ತ್ವರಿತ ಸೇವೆ ಮತ್ತು ದೇವಿ ದರ್ಶನಕ್ಕೆ, ಪೂಜೆ, ಸೇವೆಗೆ ಆಡಳಿತ ಮಂಡಳಿ ಅಚ್ಚುಕಟ್ಟಿನ ವ್ಯವಸ್ಥೆ ಮಾಡಿದೆ.