ಸಾರಾಂಶ
ಕನ್ನಡಪ್ರಭ ವಾರ್ತೆ ಕೋಟ
ಶರನ್ನವರಾತ್ರಿ ಉತ್ಸವವು ಧಾರ್ಮಿಕತೆಯ ಮೂಲಕ ಪ್ರಕೃತಿಯನ್ನು ಆರಾಧಿಸುವ ಉತ್ಸವವಾಗಿದೆ ಎಂದು ಪಾಂಡೇಶ್ವರದ ಯೋಗಗುರುಕುಲದ ಮುಖ್ಯಸ್ಥ ಡಾ.ವಿದ್ವಾನ್ ವಿಜಯ್ ಮಂಜರ್ ಹೇಳಿದರು.ಅವರು ಶುಕ್ರವಾರ ಪಾಂಡೇಶ್ವರ ಶಾಲಾ ವಠಾರದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ೩೧ನೇ ಶಾರದೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಶಾರದೋತ್ಸವ ಧಾರ್ಮಿಕ ಕಾರ್ಯದ ಜೊತೆಗೆ ಜ್ಞಾನ ಸಂಪತ್ತನ್ನು ವೃದ್ಧಿಸುತ್ತಿದೆ, ಉತ್ಸವಗಳು ಕೇವಲ ಆಚರಣೆಗಳಾಗಿರದೆ ಯುವಜನರಲ್ಲಿ ಧಾರ್ಮಿಕ ಸಮರ್ಪಣಾ ಮನೋಭಾವದ ಜೊತೆಗೆ ಹೊಸ ಚಿಂತನೆಗಳಿಗೆ ವೇದಿಕೆ ಕಲ್ಪಿಸುತ್ತವೆ. ಇಂತಹ ಆಚರಣೆಗಳ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು ಎಂದು ಕರೆಕೊಟ್ಟರು.ಸಾಸ್ತಾನದ ಸಂತ ಅಂತೋನಿ ಚರ್ಚ್ ಫಾದರ್ ಸುನೀಲ್ ಡಿಸಿಲ್ವ, ಶಾರದೋತ್ಸವದ ಮಹತ್ವದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಇದೇ ವೇಳೆ ಧಾರ್ಮಿಕ ಕ್ಷೇತ್ರ ಹಿರಿಯರಾದ ಸಾಸ್ತಾನ ಗೋಳಿಗರಡಿ ದೈವಸ್ಥಾನದ ಮುಖ್ಯಸ್ಥ ಜಿ.ವಿಠಲ್ ಪೂಜಾರಿ ಪಾಂಡೇಶ್ವರ, ಸಮಾಜ ಸೇವಕ - ಪತ್ರಿಕಾ ವಿತರಕ ಚಂದ್ರಶೇಖರ್ ಮಯ್ಯ, ಇತ್ತೀಚಿಗೆ ನಿಧರಾದ ರಂಗಕರ್ಮಿ ಸಂಜೀವ ಕದ್ರಕಟ್ಟು ಇವರ ಪತ್ನಿ ಸೀತಾ ಪೂಜಾರಿ ಅವರಿಗೆ ವಿಶೇಷ ಗೌರವ ಸಲ್ಲಿಸಿಲಾಯಿತು. ಶಾರದೋತ್ಸವ ಹಿನ್ನಲ್ಲೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ ವಹಿಸಿದ್ದರು. ಅಭ್ಯಾಗತರಾಗಿ ಪಾಂಡೇಶ್ವರ ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಸದಾನಂದ ಪೂಜಾರಿ, ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಬಿ.ಎಂ. ಭಟ್, ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ಉಪಸ್ಥಿತರಿದ್ದರು.ರಾಘವೇಂದ್ರರಾಜ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಅಭಿಜಿತ್ ಪಾಂಡೇಶ್ವರ ನಿರೂಪಿಸಿದರು. ನಂತರ ರಘು ಪಾಂಡೇಶ್ವರ ನೇತೃತ್ವದಲ್ಲಿ ಸಾಧನಾ ಕಲಾ ತಂಡದ ಕಲಾವಿದರಿಂದ ಕಿತಾಪತಿ ಕಿಟ್ಟ ನಾಟಕ ಪ್ರದರ್ಶನಗೊಂಡಿತು.