ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಅಬ್ದುಲ್‌ ನಜೀರ್‌ ಸಾಬ್‌ರು ಆ ಕಾಲದಲ್ಲೇ ರಾಜ್ಯದ ಜನರು ಶುದ್ಧ ನೀರು ಕುಡಿಯಬೇಕು ಎಂದು ಬೋರ್‌ ವೆಲ್‌ ಮೂಲಕ ನೀರನ್ನು ಭೂಮಿಯಿಂದ ಮೇಲೆ ತಂದವರು ಎಂದು ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗುಂಡ್ಲುಪೇಟೆಯ ಅಬ್ದುಲ್‌ ನಜೀರ್‌ ಸಾಬ್‌ ಸಚಿವರಾಗಿದ್ದ ಅವಧಿಯಲ್ಲಿ ಅಧಿಕಾರ ವಿಕೇಂದ್ರೀಕರಣ ಹಾಗೂ ಬೋರ್‌ ವೆಲ್‌ ನಿಂದ ನೀರು ಹರಿಸುವ ಮೂಲಕ ದೇಶದಲ್ಲಿ ಚಿರಪರಿಚಿತರಾಗಿದ್ದರು ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಅಬ್ದುಲ್‌ ನಜೀರ್‌ ಸಾಬ್‌ ಫೌಂಡೇಶನ್‌ ಹಾಗೂ ಮೈಸೂರು- ಚಾಮರಾಜನಗರ ಜಿಲ್ಲಾ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಆಯೋಜಿಸಿದ್ದ ಅಬ್ದುಲ್‌ ನಜೀರ್‌ ಸಾಬ್‌ ಜನ್ಮ ದಿನಾಚರಣೆ ಅಂಗವಾಗಿ ಸ್ವಾಭಿಮಾನಿ ಪಂಚಾಯತ್‌ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅಬ್ದುಲ್‌ ನಜೀರ್‌ ಸಾಬ್‌ ಅವರು ಅಧಿಕಾರ ವಿಕೇಂದ್ರೀಕರಣದ ಮೂಲಕ ಅನಕ್ಷರರಿಗೂ ಗ್ರಾಮಾಂತರ ಪ್ರದೇಶದಲ್ಲಿ ಆಡಳಿತ ನಡೆಸಲು ಅವಕಾಶ ಕಲ್ಪಿಸಿದರು. ಅಲ್ಲದೆ ಗ್ರಾಮೀಣ ಭಾಗದ ಅಭಿವೃದ್ಧಿಗೂ ಕಾರಣರಾಗಿದ್ದರು ಎಂದು ಅಭಿಪ್ರಾಯಪಟ್ಟರು.

ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಅಬ್ದುಲ್‌ ನಜೀರ್‌ ಸಾಬ್‌ರು ಆ ಕಾಲದಲ್ಲೇ ರಾಜ್ಯದ ಜನರು ಶುದ್ಧ ನೀರು ಕುಡಿಯಬೇಕು ಎಂದು ಬೋರ್‌ ವೆಲ್‌ ಮೂಲಕ ನೀರನ್ನು ಭೂಮಿಯಿಂದ ಮೇಲೆ ತಂದವರು ಎಂದು ಬಣ್ಣಿಸಿದರು.

ಸ್ಥಳೀಯ ಸಮಸ್ಯೆಗಳು ಸ್ಥಳೀಯ ಸಂಸ್ಥೆಗಳಿಂದಲೇ ಕಾಯಕಲ್ಪವಾಗಬೇಕು ಎಂಬ ಆಶಯವಿದ್ದ ಅಬ್ದುಲ್‌ ನಜೀರ್‌ ಸಾಬ್‌ ಅವರು ಹಾಕಿ ಕೊಟ್ಟ ಹಾದಿಯಲ್ಲಿ ಸಾಗುವ ಮೂಲಕ ಗ್ರಾಮೀಣಾಭಿವೃದ್ಧಿಗೆ ನಾವು, ನೀವೆಲ್ಲ ಸೇರಿ ಮುನ್ನುಡಿ ಬರೆಯೋಣ ಎಂದರು.

ಗುಂಡ್ಲುಪೇಟೆ ಅಬ್ದುಲ್‌ ನಜೀರ್‌ ಸಾಬ್‌ ಸಚಿವರಾಗಿದ್ದ ಕಾಲದಲ್ಲಿ ಆರಂಭಿಸಿದ ಅಧಿಕಾರ ವಿಕೇಂದ್ರೀಕರಣ ಹಾಗೂ ಬೋರ್‌ ವೆಲ್‌ ಮೂಲಕ ನೀರು ಹೊರ ತಂದು ಶುದ್ದ ಕುಡಿವ ನೀರು ಕೊಟ್ಟ ಅವರ ಸಾಧನೆ ಯಾರು ಮರೆಯಲಾರರು ಎಂದು ಸ್ಮರಿಸಿದರು.

ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಬ್ದುಲ್‌ ನಜೀರ್‌ ಸಾಬ್‌ ಫೌಂಡೇಶನ್‌ ಅಧ್ಯಕ್ಷ ಯದುನಾಡು ನಾಗರಾಜು ಮಾತನಾಡಿದರು.

ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾದ ಬೃಂದಾ ಕೃಷ್ಣೇಗೌಡ, ಹಂಗಳ ವೃಷಬೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ನಿಶಾಂತ್‌ ಕೆ.ಎಸ್ ಹಾಗೂ ಹುಣಸೂರು ನಾಗರಾಜು, ಗುರುಮಲ್ಲಪ್ಪ, ಶಾಂತಮೂರ್ತಿ ಸೇರಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.

------

ಸ್ಥಳೀಯ ಸಂಸ್ಥೆಗಳಿಗೆ ರೂಪ ಕೊಟ್ಟ ನಜೀರ್‌ ಸಾಬ್‌:

ಅಧಿಕಾರ ವಿಕೇಂದ್ರೀಕರಣದ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ಹೊಸ ರೂಪ ಹಾಗೂ ಶಕ್ತಿ ನೀಡಿದವರು ಗುಂಡ್ಲುಪೇಟೆಯ ಅಬ್ದುಲ್‌ ನಜೀರ್‌ ಸಾಬ್‌ ಎಂದು ವಿಧಾನ ಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಅಭಿಪ್ರಾಯ ಪಟ್ಟರು.

ಅಧಿಕಾರ ಇದ್ದಾಗ ಅಬ್ದುಲ್‌ ನಜೀರ್‌ ಸಾಬ್‌ ಅವರು ಸಾಮಾಜಿಕ ಕಳಕಳಿಯಿಂದ ಶಾಸನ ರೂಪಿಸಿದರು. ಗ್ರಾಮೀಣ ಭಾಗದ ಅಭಿವೃದ್ಧಿಗೆ ಜಿಲ್ಲಾ ಪರಿಷತ್‌ ಹಾಗೂ ಮಂಡಲ ಪಂಚಾಯಿತಿ ಉದಯಕ್ಕೆ ಕಾರಣರಾದರು ಎಂದರು.

ದಿವಂಗತ ಡಿ.ದೇವರಾಜ ಅರಸು ಸಿಎಂ ಆಗಿದ್ದಾಗ ಉಳುವವನೇ ಭೂಮಿಯ ಒಡೆಯ ಹಾಗೂ ಜೀತ ಪದ್ಧತಿ ರದ್ದು ಗೊಳಿಸಿದರೆ, ಸಚಿವ ಬಸವಲಿಂಗಪ್ಪ ಮಲ ಹೊರುವ ಪದ್ಧತಿ ರದ್ದು ಗೊಳಿಸಿದ್ದರು, ಆ ಸಾಲಿನಲ್ಲಿ ಅಬ್ದುಲ್‌ ನಜೀರ್‌ ಸಾಬ್‌ ಕೂಡ ನಿಲ್ಲಲಿದ್ದಾರೆ ಎಂದರು.