ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿತು. ಟ್ರಸ್ಟ್‌ ಅಧ್ಯಕ್ಷರಾಗಿ ಸಂಜೀವಕುಮಾರ ನೀರಲಗಿ ಅವರು ಅಧಿಕಾರ ಸ್ವೀಕರಿಸಿದರು.

ಹಾವೇರಿ: ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿತು. ಟ್ರಸ್ಟ್‌ ಅಧ್ಯಕ್ಷರಾಗಿ ಸಂಜೀವಕುಮಾರ ನೀರಲಗಿ ಅವರು ಅಧಿಕಾರ ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು, ಇದು ಬಹಳ ಜವಾಬ್ದಾರಿ ಮತ್ತು ಹೊಣೆಗಾರಿಕೆಯ ಸ್ಥಾನ. ಟ್ರಸ್ಟ್‌ ಸರ್ವ ಸದಸ್ಯರೆಲ್ಲರೂ ಒಂದಾಗಿ ಮುಂದೆ ಆಗಬಹುದಾದ ಕೆಲಸ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಹಾವೇರಿ ನಗರದಲ್ಲಿರುವ ಮೈಲಾರ ಮಹದೇವಪ್ಪನವರ ವೃತ್ತವನ್ನು ರು.50 ಲಕ್ಷ ಅನುದಾನದಲ್ಲಿ ನವೀಕರಿಸಿ ಸೌಂದರ್ಯಿಕರಿಸಬೇಕಾಗಿದೆ. ಹಾವೇರಿಯಲ್ಲಿ 5 ಎಕರೆ ಜಾಗದಲ್ಲಿ ಎಲ್ಲ ಸ್ವಾತಂತ್ರ‍್ಯ ಹೋರಾಟಗಾರರ ವಸ್ತುಸಂಗ್ರಹಾಲಯ ಮಾಡಬೇಕಾಗಿದೆ. ಹೀಗೆ ಟ್ರಸ್ಟನಿಂದ ಮುಂದಿನ ದಿನಗಳಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲು ಕ್ರಿಯಾಯೋಜನೆಯನ್ನು ಸಿದ್ಧಪಡಿಸಬೇಕಾಗಿದೆ ಎಂದ ಅವರು, ಟ್ರಸ್ಟ್‌ ರಚನೆಗೆ ಕಾರಣರಾದ ವಿ.ಎನ್. ತಿಪ್ಪನಗೌಡ ಅವರನ್ನು ಸ್ಮರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ಪ್ರೇಮಾನಂದ ಲಕ್ಕಣ್ಣನವರ, ಗಾಂಧೀಜಿ, ನೆಹರು ನಂತರ ಮೈಲಾರ ಮಹಾದೇವಪ್ಪನವರು ಸ್ವಾತಂತ್ರ‍್ಯ ಹೋರಾಟಗಾರರು ಎಂದು ಮುಖ್ಯಮಂತ್ರಿಗಳು ಘೋಷಿಸಿರುತ್ತಾರೆ. ಇವರ ತ್ಯಾಗ ಬಲಿದಾನವನ್ನು ನಾವು ಸ್ಮರಿಸಬೇಕಾಗಿರುತ್ತದೆ ಎಂದರು.

ಟ್ರಸ್ಟನ ಸದಸ್ಯರಾದ ಡಾ. ಜಿ.ವಿ. ಕಲಕೋಟಿ ಅವರು ನಿಧನ ಹೊಂದಿದ ಪ್ರಯುಕ್ತ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಟ್ರಸ್ಟನ ಸದಸ್ಯರಾಗಿ ಎಚ್. ಎಸ್. ಮಹದೇವಪ್ಪ, ಮನೋಹರ ಮಲ್ಲಾಡದ, ದೀಪಾ ಗೋನಾಳ, ಡಾ. ನಿಂಗಪ್ಪ ಚಳ್ಳಗೇರಿ, ಗಣೇಶ ಪೂಜಾರ, ಶಿವು ತಳವಾರ, ಅಬ್ದುಲ್ ಹುಬ್ಬಳ್ಳಿ, ಪ್ರೇಮಾನಂದ ಲಕ್ಕಣ್ಣನವರ ಉಪಸ್ಥಿತರಿದ್ದರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ವೀರಯ್ಯಸ್ವಾಮಿ ಬಿ. ಅವರು ಸ್ವಾಗತಿಸಿದರು. ಅಬ್ದುಲ್ ಹುಬ್ಬಳ್ಳಿ ವಂದಿಸಿದರು.