ಸಾರಾಂಶ
ಗುರು ಮಲ್ಲೇಶ್ವರರು ಆಡಂಬರ, ವಿಜೃಂಭಣೆ, ವೈಭವವನ್ನು ಅಪೇಕ್ಷೆ ಪಟ್ಟವರಲ್ಲ, ಬಸವಾದಿ ಶಿವ ಶರಣರು ಬೋಧಿಸಿದಂತಹ ಪ್ರತಿಯೊಂದು ತತ್ವಗಳನ್ನು ಎಲ್ಲರ ಜನಮಾಸದಲ್ಲಿ ಬಿತ್ತುವ ಕೆಲಸ ಮಾಡಿದ್ದರು. ಯಾವುದು ನನ್ನದಲ್ಲ ಎಂಬ ಭಾವನೆಯೊಂದಿಗೆ ಅವರು ಜಾಗೃತಿ ಮೂಡಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಬಸವಾದಿ ಶರಣರು ಶರಣ ಪರಂಪರೆಯ ಪರಿಸರದಲ್ಲಿ ಸದಾ ಜಾಗೃತರಾಗಿರಲಿ, ಆ ಮೂಲಕ ಅವರು ಬೋಧಿಸಿದ ತತ್ವಗಳು ಸದಾ ಜನರಿಗೆ ಮಾರ್ಗದರ್ಶನ ನೀಡಲಿ ಎಂಬ ಉದ್ದೇಶದಿಂದ ಗುರುಮಲ್ಲೇಶ್ವರರು ಹೋದ ಕಡೆಯಲ್ಲೆಲ್ಲ ದಾಸೋಹ ಮಠಗಳನ್ನು ನಿರ್ಮಾಣ ಮಾಡಿದರು ಎಂದು ಕನಕಪುರ ದೇಗುಲ ಮಠದ ಶ್ರೀ ಮುಮ್ಮುಡಿ ನಿರ್ವಾಣ ಸ್ವಾಮೀಜಿ ಹೇಳಿದರು.ತಾಲೂಕಿನ ನಿಲಸೋಗೆ ಗ್ರಾಮದಲ್ಲಿ ಗುರುಮಲ್ಲೇಶ್ವರ ವೀರಶೈವ ಬಳಗದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರು ಮಲ್ಲೇಶ್ವರ ಜಯಂತೋತ್ಸವ ಹಾಗೂ ಪುತ್ಥಳಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರುನೆರೆದಿದ್ದ ಭಕ್ತಾದಿಗಳಿಗೆ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಗುರು ಮಲ್ಲೇಶ್ವರರು ಆಡಂಬರ, ವಿಜೃಂಭಣೆ, ವೈಭವವನ್ನು ಅಪೇಕ್ಷೆ ಪಟ್ಟವರಲ್ಲ, ಬಸವಾದಿ ಶಿವ ಶರಣರು ಬೋಧಿಸಿದಂತಹ ಪ್ರತಿಯೊಂದು ತತ್ವಗಳನ್ನು ಎಲ್ಲರ ಜನಮಾಸದಲ್ಲಿ ಬಿತ್ತುವ ಕೆಲಸ ಮಾಡಿದ್ದರು. ಯಾವುದು ನನ್ನದಲ್ಲ ಎಂಬ ಭಾವನೆಯೊಂದಿಗೆ ಅವರು ಜಾಗೃತಿ ಮೂಡಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಅವರು ತಿಳಿಸಿದರು.ಶ್ರೀ ಗುರು ಮಲ್ಲೇಶ್ವರ ಪುತ್ಥಳಿ ದಾನಿಗಳಾದ ಲೇ. ಪುಟ್ಟಪ್ಪ ಅವರ ಪುತ್ರ ಮಹೇಶ್ ಅವರನ್ನು ಶ್ರೀಗಳು ಸನ್ಮಾನಿಸಿದರು.
ಕುದೇರು ಮಠದ ಗುರು ಶಾಂತಸ್ವಾಮೀಜಿ, ಎಂ.ಎಲ್. ಹುಂಡಿ ಮಠದ ಗೌರಿಶಂಕರ ಸ್ವಾಮೀಜಿ, ಚಿದರವಳ್ಳಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹಲವಾರ ಮಠದ ಷಡಕ್ಷರ ದೇಶೀಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.ಅಧ್ಯಕ್ಷತೆಯನ್ನು ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಹಿರಿಯೂರು ಗ್ರಾಮದ ಮಠಾಧ್ಯಕ್ಷ ಮಹಂತಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಯಿತು.
ನಿಲಸೋಗೆ ದಾಸೋಹ ಮಠಾಧ್ಯಕ್ಷರಾದ ಮಲ್ಲಪ್ಪ ಸ್ವಾಮಿ, ಸೇತುವೆ ಮಠದ ಸಹಜಾನಂದ ಸ್ವಾಮಿ, ಡೇರಿ ಕಾರ್ಯದರ್ಶಿ ನಂಜುಂಡಸ್ವಾಮಿ, ಡೇರಿ ಮಾಜಿ ಅಧ್ಯಕ್ಷ ಬಸಪ್ಪ, ಭತ್ತದ ವ್ಯಾಪಾರಿ ಶೇಖರಪ್ಪ, ಸಿ.ಆರ್.ಸಿ. ಮಹದೇವಪ್ಪ, ಬಸವಣ್ಣ, ವಕೀಲ ಜ್ಞಾನೇಂದ್ರಮೂರ್ತಿ, ಮಹದೇವಪ್ರಸಾದ್, ಬೋಜಣ್ಣ, ಸುರೇಶ, ಮರಿಸ್ವಾಮಿ, ಶಂಕರ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ತೋಂಟೇಶ್, ಮೂಗೂರು ಕುಮಾರಸ್ವಾಮಿ, ಕೆಇಬಿ ಸಿದ್ದಲಿಂಗಸ್ವಾಮಿ, ಪ್ರಸನ್ನ ಹಾಗೂ ಗ್ರಾಮಸ್ಥರು, ಯಜಮಾನರು, ಮುಖಂಡರು ಭಾಗವಹಿಸಿದ್ದರು.