ಡ್ಯಾಂ ಎತ್ತರಕ್ಕೆ ಕೇಂದ್ರ ನೋಟಿಫಿಕೇಷನ್‌ ಮಾಡಿಲ್ಲ

| Published : Aug 22 2024, 12:50 AM IST

ಡ್ಯಾಂ ಎತ್ತರಕ್ಕೆ ಕೇಂದ್ರ ನೋಟಿಫಿಕೇಷನ್‌ ಮಾಡಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಆಲಮಟ್ಟಿ ಡ್ಯಾಂ ಎತ್ತರಿಸಲು ಕೇಂದ್ರ ಸರ್ಕಾರ ನೋಟಿಫಿಕೇಷನ್ ಮಾಡಬೇಕಿದ್ದು, ಅದನ್ನು ಮಾಡಿಲ್ಲ. ಹೀಗಾಗಿ ಕೇಂದ್ರವು ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದವರನ್ನು ಕರೆದು ಇದನ್ನು ಇತ್ಯರ್ಥ ಮಾಡಲು ಸಾಧ್ಯವಿದೆ. ಇಲ್ಲವಾದರೆ ನೊಟಿಫಿಕೇಷನ್ ಆಗದೆ ಡ್ಯಾಂ ಎತ್ತರ ಮಾಡಲು ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರಆಲಮಟ್ಟಿ ಡ್ಯಾಂ ಎತ್ತರಿಸಲು ಕೇಂದ್ರ ಸರ್ಕಾರ ನೋಟಿಫಿಕೇಷನ್ ಮಾಡಬೇಕಿದ್ದು, ಅದನ್ನು ಮಾಡಿಲ್ಲ. ಹೀಗಾಗಿ ಕೇಂದ್ರವು ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದವರನ್ನು ಕರೆದು ಇದನ್ನು ಇತ್ಯರ್ಥ ಮಾಡಲು ಸಾಧ್ಯವಿದೆ. ಇಲ್ಲವಾದರೆ ನೊಟಿಫಿಕೇಷನ್ ಆಗದೆ ಡ್ಯಾಂ ಎತ್ತರ ಮಾಡಲು ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸಿದ ಬಳಿಕ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಎರಡನೇ ನ್ಯಾಯಾಧಿಕರಣ ತೀರ್ಪು ಬಂದಿದ್ದರಲ್ಲಿ ಆಲಮಟ್ಟಿಗೆ 130 ಟಿಎಂಸಿ ನೀರು ಸಿಗುತ್ತದೆ. ಆದರೆ ನಾವು 519.60 ಮೀಟರ್‌ನಿಂದ 524.225 ಮೀಟರ್‌ಗೆ ಎತ್ತರಿಸಬೇಕಿದೆ. ಹೀಗಾಗಾದ ಮಾತ್ರ 130 ಟಿಎಂಸಿ ನೀರು ಉಪಯೋಗ ಆಗಲಿದೆ ಎಂದರು.ಸಂತ್ರಸ್ತರಾಗುವವರಿಗೆ ಪುನರ್ವಸತಿ ಕಲ್ಪಿಸಲು ನಮ್ಮ ಸರ್ಕಾರ ಹಿಂದೆಯೂ ಸಿದ್ಧವಿತ್ತು. ಈಗಲೂ ಸಿದ್ಧವಿದೆ. ಪುನರ್ವಸತಿ ಕಲ್ಪಿಸುವ ಅಂದಾಜು ವೆಚ್ಚ ₹80 ಸಾವಿರ ಕೋಟಿ ಆಗಲಿದೆ. ಅದಕ್ಕಾಗಿ ನಾವು ಪ್ರತಿವರ್ಷ ₹20 ಸಾವಿರ ಕೋಟಿ ಹಣವನ್ನು ನೀರಾವರಿಗೆ ಖರ್ಚು ಮಾಡಲು ಸಿದ್ಧವಿದ್ದೇವೆ. ಐದು ವರ್ಷಗಳಲ್ಲಿ ₹1 ಲಕ್ಷ ಕೋಟಿ ಖರ್ಚು ಮಾಡಲಿದ್ದೇವೆ. ಪ್ರಧಾನಿಗಳು ಎಲ್ಲ ರಾಜ್ಯದವರನ್ನು ಕರೆದು ಈ ಸಮಸ್ಯೆ ಇತ್ಯರ್ಥ ಮಾಡಬೇಕು. ಅದನ್ನು ಮಾಡಿದರೆ 524.225 ಮೀಟರ್ ಎತ್ತರಕ್ಕೆ ಒಯ್ಯಲು ಹಾಗೂ 130 ಟಿಎಂಸಿ ನೀರು ಸಂಗ್ರಹಿಸಲು ಅನುಕೂಲ ಆಗಲಿದೆ. ಇದರಿಂದ 14.68 ಲಕ್ಷ ಎಕರೆ ನೀರಾವರಿಗೆ ಅನುಕೂಲ ಆಗಲಿದೆ. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ನೊಟಿಫಿಕೇಷನ್ ಮಾಡಬೇಕು ಎಂದು ನಮ್ಮ‌ಒತ್ತಾಯವಿದೆ ಎಂದರು.ಆಲಮಟ್ಟಿ ನೀರಾವರಿ ಹಾಗೂ ಸಂತ್ರಸ್ತರ ವಿಚಾರ ಕುರಿತು ಮಾತನಾಡಿದ ಅವರು, ಬಾಗಲಕೋಟೆ, ವಿಜಯಪುರ, ರಾಯಚೂರು, ಕಲಬುರಗಿ, ಕೊಪ್ಪಳ ಯಾದಗಿರಿ ಸೇರಿದಂತೆ ಈ ವ್ಯಾಪ್ತಿಯ ಸಚಿವರು ಹಾಗೂ ಶಾಸಕರು ಸೇರಿದಂತೆ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಸಭೆ ಕರೆದು ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಭರವಸೆ ನೀಡಿದರು.ಕಳೆದ ವರ್ಷವೂ ನಾನು ಸುಪ್ರೀಂ ಕೋರ್ಟ್ ಸೇರಿದಂತೆ ಕೇಂದ್ರದಲ್ಲೂ ಒತ್ತಡ ಹಾಕುತ್ತೇವೆ ಎಂದು ಹೇಳಿದ್ದೆ. ಅದಾದ ಬಳಿಕ ನಾವು ಅನೇಕ ಬಾರಿ ಭೇಟಿ ಮಾಡಿದ್ದೇವೆ. ನಾನು, ಡಿಸಿಎಂ ಅವರು ಸೇರಿ ಸಂಬಂಧಿಸಿದ ಕೇಂದ್ರ ಸಚಿವರು, ಪ್ರಧಾನಿಗಳಿಗೆ ಭೇಟಿ ಮಾಡಿ ಹೇಳಿದ್ದೇವೆ. ಆದರೂ ಅವರು ಮನಸು ಮಾಡಿಲ್ಲ ಎಂದು ದೂರಿದರು.ಸಂತ್ರಸ್ತರ ಪುನರ್ವಸತಿ ಹಾಗೂ ಪುನರ್ ನಿರ್ಮಾಣದ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳುತ್ತಿದ್ದೇವೆ. ಇದುವರೆಗೆ ನಾವು ₹18,370 ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳಿದರು.ಈಗಾಗಲೇ ಕಾವೇರಿ ಜಲಾನಯನ ಪ್ರದೇಶದಲ್ಲಿ‌ನ ಕೃಷ್ಣರಾಜ ಸಾಗರ, ಕಬಿನಿ ಜಲಾಶಯಗಳಿಗೆ ಗಂಗಾಪೂಜೆ ಮಾಡಿದ್ದೇವೆ. ಈ ಬಾರಿ ಕಬಿನಿ, ಹಾರಂಗಿ, ಹೇಮಾವತಿ, ನಾರಾಯಣಪುರ, ತುಂಗಭದ್ರಾ, ಆಲಮಟ್ಟಿ, ಶರಾವತಿ, ಸೂಪಾ ಸೇರಿದಂತೆ ರಾಜ್ಯದ ಎಲ್ಲಾ ಜಲಾಶಯಗಳು ತುಂಬಿವೆ. ನೀರಾವರಿ, ಕುಡಿವ ನೀರಿಗೆ, ವಿದ್ಯುತ್ ಉತ್ಪಾದನೆಗೆ ಯಾವುದೇ ತೊಂದರೆ ಆಗಲ್ಲ. ಎಲ್ಲ ಕೆರೆಗಳು ಭರ್ತಿಯಾಗಿವೆ. ಇನ್ನುಳಿದ ಕೆಲ ಕೆರೆಗಳನ್ನು ಭರ್ತಿ ಮಾಡಲಾಗುವುದು. ಇದರಿಂದ ಅಂತರ್ಜಲ ಮಟ್ಟ ಏರಿಕೆ ಆಗುತ್ತದೆ. ಹೀಗಾಗಿ ರೈತರು ಖುಷಿಯಾಗಿದ್ದಾರೆ ಎಂದು ತಿಳಿಸಿದರು.ತುಂಗಭದ್ರಾ ಡ್ಯಾಂ ಭರ್ತಿ ಆಗಲಿದೆ: ಈ ಮೊದಲು ಟಿಬಿ ಡ್ಯಾಂ ಭರ್ತಿಯಾಗಿದ್ದರಿಂದ ಡ್ಯಾಂ ಪೂಜೆ ಮಾಡಲು ಸಿದ್ಧವಾಗಿದ್ದೆವು. ಅಷ್ಟರಲ್ಲಿ ಡ್ಯಾಂನ 19ನೇ ಗೇಟ್ ಚೈನ್ ಕಟ್ ಆಗಿ, ಗೇಟ್ ಕಳಚಿದ್ದರಿಂದ ಬಾಗಿನ ಅರ್ಪಿಸಲು ಆಗಲಿಲ್ಲ. ಗೇಟ್ ತುಂಡಾಗಿದ್ದರಿಂದ 60 ಟಿಎಂಸಿ ನೀರು ಪೋಲಾಗಬಹುದು ಎಂದುಕೊಂಡಿದ್ದೆವು. ಅದೃಷ್ಟವಶಾತ್ ಸುಮಾರು 35 ಟಿಎಂಸಿ ನೀರು ಮಾತ್ರ ಹರಿದುಹೋಗಿದೆ. ಇಂದು 78 ಟಿಎಂಸಿ ನೀರು ಸಂಗ್ರಹವಾಗಿದೆ. 20 ಟಿಎಂಸಿ ನೀರು ಬಂದರೆ ತುಂಗಭದ್ರಾ ಅಣೆಕಟ್ಟಿನಲ್ಲಿ ಶೇ.95 ರಷ್ಟು ನೀರು ಶೇಖರಣೆ ಆಗಲಿದ್ದು, ಮತ್ತೆ ಡ್ಯಾಂ ತುಂಬುತ್ತೆ ಎಂಬುದರ ಭರವಸೆ ಇದ್ದು, ಅದು ಈಡೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.-----------ಬಾಕ್ಸ್‌....ಕುಮಾರಸ್ವಾಮಿ ಅರೆಸ್ಟ್‌ ಮಾಡಲು ಕಾನ್‌ಸ್ಟೇಬಲ್‌ ಸಾಕುಕುಮಾರಸ್ವಾಮಿಯನ್ನು ಅರೆಸ್ಟ್ ಮಾಡಲು ಸಿದ್ಧರಾಮಯ್ಯ ಯಾಕ್ರಿ ಬೇಕು? ಓರ್ವ ಪೊಲೀಸ್ ಸಾಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದರು.ಜಿಲ್ಲೆಯ ಆಲಮಟ್ಟಿಯಲ್ಲಿ ಬುಧವಾರ ಕೃಷ್ಣಾ ಜಲಧಿಗೆ ಗಂಗಾಪೂಜೆ ಮತ್ತು ಬಾಗಿನ ಅರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಇಂತಹ ನೂರು ಸಿದ್ಧರಾಮಯ್ಯ ಬಂದರೂ ನನ್ನನ್ನು ಅರೆಸ್ಟ್ ಮಾಡಲು ಆಗಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದ ಸಿಎಂ, ಕುಮಾರಸ್ವಾಮಿ ಬಂಧಿಸಲು ಒಬ್ಬ ಪೊಲೀಸ್ ಕಾನ್‌ಸ್ಟೇಬಲ್ ಸಾಕು. ಸಿದ್ಧರಾಮಯ್ಯ ಅವರನ್ನು ಅರೆಸ್ಟ್ ಮಾಡ್ತಾರಾ? ಪೊಲೀಸರು ಅರೆಸ್ಟ್ ಮಾಡ್ತಾರೆ ಎಂದರು.ಸಿದ್ಧರಾಮಯ್ಯ ಹೆದರಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೆದರಿದ್ದು ನಾನಲ್ಲಾರಿ. ಅವರು, ಹೆದರಿಕೊಂಡು ಪ್ರೆಸ್‌ಮೀಟ್ ಮಾಡಿದ್ದಾರೆ. ಎಲ್ಲಿ ನನ್ನ ವಿಚಾರಣೆ ಮಾಡುತ್ತಾರೋ ಎಂದು ಹೆದರಿ ಅವರು ಪ್ರೆಸ್‌ಮೀಟ್ ಮಾಡಿದ್ದಾರೆ ಎಂದು ಹೇಳಿದರು.ಕಮಿಷನ್ ರಚನೆ ಮಾಡಲಾಗಿದೆ ಅಲ್ವಾ? ಅದರ ವಿಚಾರಣೆಯಲ್ಲಿ ಗೊತ್ತಾಗುತ್ತದೆ ಎಂದ ಅವರು, ಕುಮಾರಸ್ವಾಮಿ ಅವರದ್ದು ಯಾವಾಗಲೂ ಹಿಟ್ ಆ್ಯಂಡ್‌ ರನ್ ಪ್ರವೃತ್ತಿ. ನನ್ನ ಮೇಲೆ ಏನಾದರೂ ವಿಚಾರಣೆ ಆಗಿದೆಯಾ? ಕಂಪ್ಲೇಟ್ ಇದೆಯಾ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.ಅಸೆಂಬ್ಲಿಯಲ್ಲಿ ಪೆನ್‌ ಡ್ರೈವ್‌ ಎಲ್ಲಿ ಎಂತದ್ದೋ ಪೆನ್ ತಂದು ಹಿಂಗೆ ತೋರಿಸಿದರಲ್ಲಾ? ಎಂದು ಲೇವಡಿ ಮಾಡಿದ ಸಿದ್ದರಾಮಯ್ಯ, ಏನಾಯ್ತು ಪೆನಡ್ರೈವ್? ಅವರು ಯಾವುದೇ ಆರೋಪಗಳನ್ನು ಕೊನೆವರೆಗೂ ಒಯ್ದಿಲ್ಲ. ನನ್ನ ಬಳಿ ದಾಖಲೆಗಳಿವೆ ಅಂತೀರಲ್ಲಾ, ದಾಖಲೆ‌ ಇದ್ದರೆ ಬಿಡುಗಡೆ ಮಾಡಪ್ಪಾಎಂದು ಸವಾಲೆಸೆದರು.ಮುಡಾ ದಾಖಲೆಗೆ ವೈಟ್ನರ್ ಹಚ್ಚಿ ದಾಖಲೆ ತಿದ್ದುಪಡಿ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ದಾಖಲೆ ತಿದ್ದುಪಡಿ ಮಾಡಿಲ್ಲ. ದಾಖಲೆ ತಿದ್ದುಪಡಿ ಆಗಿದ್ದು 2014ರ ಲೆಟರ್ ಮೇಲೆ. ಆದರೆ ನಿವೇಶನ ಮಂಜೂರಾಗಿದ್ದು 2021 ಲೆಟರ್ ಮೇಲೆ. ಕುಮಾರಸ್ವಾಮಿ ಹೇಳಿದ ಹಾಗೆ ನಾವು ಯಾವ ದಾಖಲೆಯನ್ನೂ ತಿದ್ದಿಲ್ಲ. ನಿವೇಶನ ಹಂಚಿಕೆ ವೇಳೆ ಮುಡಾ ಬಿಜೆಪಿ ಕೈಯಲ್ಲಿತ್ತು. ಅದೇ ಪಾರ್ಟಿಯವರೇ ಚೇರಮನ್ ಇದ್ದರು. ಹಾಗಾದರೆ ಅಲಾಟ್ ಆಗಿದ್ದಕ್ಕೆ ಯಾರು ಜವಾಬ್ದಾರರು? ಆಗ ಸಿಎಂ ಇದ್ದವರು ಯಾರು? ಮಿಸ್ಟರ್ ಬೊಮ್ಮಾಯಿ ಆ್ಯಂಡ್‌ ಬಿಜೆಪಿ ಸರ್ಕಾರ‌ ಎಂದು ತಿರುಗೇಟು ನೀಡಿದರು.ಈ ಬಾರಿ ಕಬಿನಿ, ಹಾರಂಗಿ, ಹೇಮಾವತಿ, ನಾರಾಯಣಪುರ, ತುಂಗಭದ್ರಾ, ಆಲಮಟ್ಟಿ, ಶರಾವತಿ, ಸೂಪಾ ಸೇರಿದಂತೆ ರಾಜ್ಯದ ಎಲ್ಲಾ ಜಲಾಶಯಗಳು ತುಂಬಿವೆ. ನೀರಾವರಿಗೆ, ಕುಡಿಯುವ ನೀರಿಗೆ, ವಿದ್ಯುತ್ ಉತ್ಪಾದನೆಗೆ ಯಾವುದೇ ತೊಂದರೆ ಆಗಲ್ಲ. ಎಲ್ಲಾ ಕೆರೆಗಳು ಭರ್ತಿಯಾಗಿವೆ. ಇನ್ನುಳಿದ ಕೆಲ ಕೆರೆಗಳನ್ನು ಭರ್ತಿ ಮಾಡಲಾಗುವುದು. ಇದರಿಂದ ಅಂತರ್ಜಲ ಮಟ್ಟ ಏರಿಕೆ ಆಗುತ್ತದೆ. ಹೀಗಾಗಿ ರೈತರು ಖುಷಿಯಾಗಿದ್ದಾರೆ ಎಂದರು.